ಕಳಸಾಪುರ ಗ್ರಾಮದಲ್ಲಿ ರೈತರ ಸಮಸ್ಯೆ ಆಲಿಸಿದ ಪ್ರಕಾಶ್ ರೈ

ಚಿಕ್ಕಮಗಳೂರು, ಮೇ 3: ಕರಗಡ ಯೋಜನೆ ಬಗ್ಗೆ ಸ್ಥಳೀಯ ರೈತರು ಒಂದು ರೂಪು ರೇಷೆ ತಯಾರು ಮಾಡಿ. ಜೂನ್ ನಿಂದ ನಿರಂತರವಾಗಿ ಚಳವಳಿ ಕೂರೋಣ. ಒಂದು ವರ್ಷದಲ್ಲಿ ನಿಮ್ಮ ಸಮಸ್ಯೆ ಏಕೆ ಪರಿಹಾರ ಆಗುವುದಿಲ್ಲ ನೋಡೋಣ ಎಂದು ಚಿತ್ರ ನಟ ಪ್ರಕಾಶ್ ರೈ ಆ ಭಾಗದ ರೈತರಿಗೆ ಆತ್ಮ ಸ್ಥೈರ್ಯ ತುಂಬಿದರು.
ಬೆಳವಾಡಿ ದೊಡ್ಡಕೆರೆ ವೀಕ್ಷಣೆ ಮಾಡಿದ ರೈ ಗುರುವಾರ ಕಳಸಾಪುರದ ಸಿದ್ದಲಿಂಗೇಗೌಡ ಅವರ ಮನೆಯಲ್ಲಿ ರೈತರಿಂದ ಸಮಸ್ಯೆ ಆಲಿಸಿದರು. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಬಂದಿಲ್ಲ. ಇಲ್ಲಿಯ ಸಮಸ್ಯೆ ಏನು ಎಂದು ತಿಳಿಯಲು ಆಗಮಿಸಿದ್ದೇನೆ. ಚುನಾವಣೆ ಮುಗಿದ ನಂತರ ಕರಗಡ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸಂಬಂಧ ನೀವೊಂದು ರೂಪುರೇಷೆ ತಯಾರು ಮಾಡಿ. ಮೇ.30 ರತನಕ ನಿಮಗೆ ಕಾಲಾವಕಾಶವಿದೆ. ಜೂನ್ ಮೊದಲನೆ ವಾರದಲ್ಲಿ ನಾನು ಇಲ್ಲಿಗೆ ಬರುತ್ತೇನೆ. ಅದಕ್ಕೂ ಮುನ್ನ ಈ ಸಮಸ್ಯೆ ಅರಿವಿರುವ ವಿನೋದ್ ನಾಯ್ಕ ಎಂಬವರು ತಜ್ಞರೊಂದಿಗೆ ಇಲ್ಲಿಗಾಗಮಿಸಿ ಚರ್ಚೆ ನಡೆಸಲಿದ್ದಾರೆ. ನಂತರ ಎಲ್ಲರೂ ಜೂನನಿಂದ ಹೋರಾಟ ಆರಂಭಿಸೋಣ ಅದೇಗೆ ಸಮಸ್ಯೆ ಪರಿಹಾರವಾವುದಿಲ್ಲ ನೋಡೋಣ ಎಂದು ಹೇಳಿದರು.
ಇಷ್ಟೊಂದು ವರ್ಷ ಕಳೆದುಹೋದರು ಒಂದು ನೀರಾವರಿ ಯೋಜನೆ ಫಲಪ್ರದವಾಗಿಲ್ಲ ಎಂದರೆ ಇಲ್ಲಿನ ಸಂಸದರು, ಶಾಸಕರು ಏನು ಮಾಡಿದ್ದಾರೆ ಎಂಬುದು ನನಗಂತು ಗೊತ್ತಿಲ್ಲ. ಅವರನ್ನು ಮೊದಲು ಮನೆಗೆ ಕಳುಹಿಸಿ. ನಿಮ್ಮ ಆಶ್ವಾಸನೆಗಳು ನಮಗೆ ಬೇಡ. ನಾವು ನಂಬುವ ಸ್ಥಿತಿಯಲ್ಲಿಲ್ಲ ಮೊದಲು ಹೊರಡಿ ಎನ್ನಿ. ಹೊಸಬರಿಗೆ ನಿನಗೊಂದು ಅವಕಾಶ ನೀಡಿದ್ದೇವೆ ನೀನಾದರೂ ಜನಪರವಾಗಿ ಕೆಲಸ ಮಾಡು ಎಂದು ಹೇಳಿ. ಜನ ಪ್ರಶ್ನೆ ಮಾಡುವಂತಾಗಬೇಕು. ಸಂಘಟನಾತ್ಮಕವಾಗಿ ಒಗ್ಗೂಡಬೇಕು. ಕಾನೂನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹಕ್ಕೇ ನಮಗೆ ಗೊತ್ತಿಲ್ಲದ ಹಾಗೆ ಮಾಡುತ್ತಾರೆ. ರೈತರನ್ನು ಸಾಲಗಾರರನ್ನಾಗಿ ಮಾಡಬಾರದು. ಬೇಕಿದ್ದರೆ ಸರಕಾರ ಸಾಲಗಾರನಾಗಿ ರೈತರ ಅಭಿವೃದ್ಧಿ ಪಡಿಸಲಿ ಎಂದರು.
ಪ್ರಕೃತಿ ಮುನಿಸಿಕೊಳ್ಳದೆ ಮಳೆ ಬರಲಿ. ಒಂದು ವೇಳೆ ಮಳೆ ಬಾರದೆ ಹೋದಲ್ಲಿ ಪರ್ಯಾಯ ಬದುಕಿಗೆ ಏನು ಮಾಡಬೇಕು. ಯುವಕರ ವಲಸೆ ತಪ್ಪಿಸುವುದು ಹೇಗೆ, ಕಡಿಮೆ ಅವಯ ಬೆಳೆ ಬೆಳೆಯಲು ಸಾಧ್ಯವೇ ? ಎಂದು ಕೂತು ತಜ್ಞರೊಂದಿಗೆ ಆಲೋಚಿಸೋಣ. ನಮ್ಮ ಸಮಸ್ಯೆಗಳನ್ನು ಯಾವ ರಾಜಕೀಯ ಪಕ್ಷಗಳು ಬಗೆಹರಿಸಲಾರವು. ನಾವೇ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಹೋರಾಟಕ್ಕೆ ಮುಂದಡಿ ಇಡೋಣ ಎಂದು ಹೇಳಿದರು.
ಕರಗಡ ಹೋರಾಟ ಸಮಿತಿಯ ಸಂಚಾಲಕರಾದ ಗುರುಶಾಂತಪ್ಪ, ಬಿ.ಅಮ್ಜದ್, ಸ್ಥಳೀಯ ಮುಖಂಡ ಡಾ.ವಿನಾಯಕ ಮತ್ತಿತರೆ ರೈತರು ಕರಗಡ ಯೋಜನೆ ಬಗ್ಗೆ ಮಾಹಿತಿ ನೀಡಿದರು.







