ಫಲಾನುಭವಿಯಲ್ಲದಿದ್ದರೂ ಶಾಸಕರ ಪ್ರಚಾರ ಪುಸ್ತಕದಲ್ಲಿ ಪೋಟೋ ಬಳಕೆ: ಆರೋಪ

ಮಂಗಳೂರು, ಮೇ 4: ಸ್ಥಳೀಯ ಶಾಸಕ ಜೆ.ಆರ್. ಲೋಬೋ ತಮ್ಮ ‘ಸಾಧನೆಯ ಹಾದಿಯಲ್ಲಿ’ ಪ್ರಚಾರ ಪುಸ್ತಕದಲ್ಲಿ ತಮ್ಮ ಫೋಟೋ ಬಳಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶರತ್ ಮೆಂಡನ್ ಹಾಗೂ ಧನಾಕ್ಷಿ ಮೆಂಡನ್ ಎಂಬವರು ಆರೋಪಿಸಿದ್ದಾರೆ.
ಬಿಜೆಪಿಯ ಮಂಗಳೂರು ದಕ್ಷಿಣ ಚುನಾವಣಾ ಪ್ರಚಾರ ಕಚೇರಿಯಲ್ಲಿಂದು ಈ ಆರೋಪ ಮಾಡಿದ ಅವರು, 2015ರ ನವೆಂಬರ್ 29ರಂದು ಮನೆಯವರೆಲ್ಲಾ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ನಮ್ಮ ಮನೆ ಬೆಂಕಿಗಾಹುತಿಯಾಗಿ ಸುಮಾರು ಐದಾರು ಲಕ್ಷ ರೂ. ನಷ್ಟವಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಲೋಬೋ ಪರಿಹಾರ ನೀಡುವ ಭರವಸೆ ನೀಡಿದ್ದರಿಂದ ಅವರ ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳಿಗೆ ಹಲವಾರು ಬಾರಿ ಅಲೆದಾಡಿದ್ದೇನೆ. ಆದರೆ ಪರಿಹಾರ ಮಾತ್ರ ಚಿಕ್ಕಾಸು ದೊರಕಿಲ್ಲ. ಆದರೆ ಇದೀಗ ನಮ್ಮನ್ನು ಕೇಳದೆ ನಮ್ಮ ಫೋಟೋವನ್ನು ಅವರ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಇದರಿಂದ ಬೇಸರವಾಗಿದೆ. ಮನೆ ಬೆಂಕಿಗಾಹುತಿಯಾದ ಸಂದರ್ಭ ನಮ್ಮ ರೇಶನ್ ಕಾರ್ಡ್ ಕೂಡಾ ಸುಟ್ಟು ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ರೇಶನ್ ಕಾರ್ಡ್ ರದ್ದಾಗಿದೆ ಎಂದವರು ಹೇಳಿದರು.
ಪುಸ್ತಕದಲ್ಲಿ ನನ್ನ ಫೋಟೋ ಇರುವುದನ್ನು ನೋಡಿ ಊರಿನ ಜನ ನಮ್ಮಲ್ಲಿ ನಿಮಗೆಷ್ಟು ಪರಿಹಾರ ನೀಡಿದ್ದಾರೆಂದು ಕೇಳುತ್ತಿದ್ದಾರೆ. ನಮಗೆ ಕೇಳದೆ ಅವರು ಫೋಟೋ ಹಾಕಿದ್ದಾರೆ ಎಂದು ಅವರು ಹೇಳಿದರು.
ಸ್ಥಳೀಯ ಜನಪ್ರತಿನಿಧಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದೀರಾ, ಅವರೇನೂ ಸಹಾಯ ಮಾಡಿಲ್ಲವೇ ಎಂಬ ಪ್ರಶ್ನೆಗೆ, ಅವರೇನೂ ಸಹಾಯ ಮಾಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಧನಾಕ್ಷಿ, ಬಿಜೆಪಿ ಮುಖಂಡರಾದ ಭಾಸ್ಕರ ಚಂದ್ರ ಶೆಟ್ಟಿ, ರಮೇಶ್ ಉಪಸ್ಥಿತರಿದ್ದರು.