ರೈ ಜನಪ್ರಿಯ ನಾಯಕ, 30 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು: ಸಂಜೀವ ಪೂಜಾರಿ

ಬಂಟ್ವಾಳ, ಮೇ 4: ರಮಾನಾಥ ರೈ ಅವರು ಬಂಟ್ವಾಳ ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಿ ಜನಪ್ರಿಯ ನಾಯಕರಾಗಿದ್ದಾರೆ. ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಈ ಬಾರಿ 30 ಸಾವಿರಕ್ಕಿಂತ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪೂರ್ವ ತಯಾರಿಯ ಕುರಿತು ಅವರು ಪತ್ರಿಕೆ ಯೊಂದಿಗೆ ಮಾತನಾಡಿದರು.
ಬಂಟ್ವಾಳದ ಶಾಶ್ವತ ಅಭಿವೃದ್ಧಿಯನ್ನು ಸಹಿಸಲಾಗದೇ ಬಿಜೆಪಿಗರು ಹಾಗೂ ಬಿಜೆಪಿಯ ವಕ್ತಾರ ಎನಿಸಿಕೊಂಡಿರುವ ಹರಿಕೃಷ್ಣ ಬಂಟ್ವಾಳ್ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಅಪಪ್ರಚಾರ ಮಾಡಿ, ಸಚಿವರ ಸಾಧನೆಯನ್ನು ಮರೆಮಾಚಿಸಲು ಯತ್ನಿಸುತ್ತಿದ್ದಾರೆ. ಇಂತಹ ಅಪಪ್ರಚಾರಗಳಿಗೆ ಕ್ಷೇತ್ರದ ಜನರು ಬಲಿಯಾಗುವುದಿಲ್ಲ ಎಂದರು.
ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಾಗೂ ಸಚಿವ ಬಿ.ರಮಾನಾಥ ರೈ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಲ್ಲವ ಸಮುದಾಯದ ಜನತೆ ವ್ಯಾಪಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದ ಅವರು, ಬಿಲ್ಲವ ನಾಯಕರೆನಿಸಿಕೊಂಡು ಸಮುದಾಯದ ಏಳಿಗೆಗೆ ಕಿಂಚಿತ್ತೂ ಸೇವೆ ನೀಡದ ಈ ನಾಯಕರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಮತ್ತು ಅಭಿವೃದ್ಧಿಯ ಹರಿಕಾರ ಬಿ.ರಮಾನಾಥ ರೈಯವರ ಬಗ್ಗೆ ಮಾತಾಡುವ ನೈತಿಕತೆಯನ್ನು ಯಾವತ್ತೋ ಕಳೆದುಕೊಂಡಿದ್ದಾರೆ. ತನ್ನ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಕಾಂಗ್ರೆಸ್ ಪಕ್ಷದಿಂದ ಯಾವತ್ತೋ ಉಚ್ಚಾಟನೆಯಾಗಿದ್ದ ಹರಿಕೃಷ್ಣ ಬಂಟ್ವಾಳ್, ಸಾಧ್ಯವಾದರೆ ಬಿಜೆಪಿಯ ಸಾಧನೆಯನ್ನು ಹೇಳಲಿ ಎಂದು ಸವಾಲೆಸೆದರು.
ಪಕ್ಷವು ತನಗೆ ಪ್ರಚಾರ ಸಮಿತಿ ಜವಾಬ್ದಾರಿಯನ್ನು ನೀಡಿದೆ. ಬೂತ್ - ಬೂತ್ ಮಟ್ಟದಲ್ಲಿ ಪರಣಾಮಕಾರಿಯಾದ ಪ್ರಚಾರ ಕಾರ್ಯ ತೊಡಗಿಕೊಂಡಿದ್ದೇವೆ. ಚುನಾವಣೆ ಘೋಷಣೆಯ ಬಳಿಕ ನಡೆದಿರುವ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಭಾಗವಹಿಸುವ ಮೂಲಕ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅವಧಿಯಿಂದ ದುಡಿದಿರುವ ರೈ ಅವರ ಸಾಧನೆಗಳು ಇನ್ನೊಮ್ಮೆ ಗೆಲ್ಲಿಸುವುದು ಖಚಿತ. ತಾನು ಕಳೆದ 40 ವರ್ಷಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ. ಜಿಲ್ಲೆಯ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ರೈ ಅವರು ಒಬ್ಬ ಅಭಿವೃದ್ಧಿಯ ಹರಿಕಾರ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಯಲ್ಲಿ ಬಿಲ್ಲವ ಅಭ್ಯರ್ಥಿಗಳು ಅರ್ಹವಾಗಿಯೇ ಟಿಕೆಟ್ ಅಕಾಂಕ್ಷಿಗಳಾಗಿದ್ದರೂ ಅವರಿಗೆ ಟಿಕೇಟ್ ದೊರಕಿಸಿ ಕೊಡುವಲ್ಲಿ ಹರಿಕೃಷ್ಣರು ಯಾವ ಪ್ರಯತ್ನವನ್ನೂ ಮಾಡಿಲ್ಲ. ಬಿಜೆಪಿ ಬಿಲ್ಲವ ನಾಯಕರನ್ನು ಹಿಂದುತ್ವಕ್ಕಾಗಿ ಬಳಸಿ ಮೂಲೆಗುಂಪು ಮಾಡುತ್ತಿದ್ದರೂ ಹರಿಕೃಷ್ಣ ಬಂಟ್ವಾಳ್ ಅದನ್ನು ಪ್ರಶ್ನಿಸುತ್ತಿಲ್ಲ. ಸಮುದಾಯದ ಜನತೆ ಇದನ್ನು ಅರ್ಥ ಮಾಡಿಕೊಂಡು ಬಿಲ್ಲವ ಸಮುದಾಯಕ್ಕೆ ಈ ಸ್ವಯಂಘೋಷಿತ ನಾಯಕರು ನೀಡಿದ ಕೊಡುಗೆ ಏನೆಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಬಿಜೆಪಿಯು ಬಿಲ್ಲವ ಯುವಕರನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿ ತೆಗೆದುಕೊಳ್ಳುತ್ತಿರುವುದು ಈಗ ಸಮುದಾಯಕ್ಕೆ ಅರಿವಾಗಿದೆ. ಬಿಜೆಪಿಯಲ್ಲಿ ನೊಂದ ಬಿಲ್ಲವ ಯುವಕರು ತಂಡೋಪತಂಡವಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಇದರಿಂದ ಹತಾಶೆಗೊಂಡಿರುವ ಹರಿಕೃಷ್ಣ ಬಂಟ್ವಾಳ್ ಅವರು ಸುಳ್ಳಿನ ಹಾದಿಯಲ್ಲಿ ಜನರನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.
ಬಿಲ್ಲವ ಸಮಾಜಕ್ಕೆ ರೈ ಕೊಡುಗೆ: ಮಂಗಳೂರು ವಿವಿಯಲ್ಲಿ ಬ್ರಹ್ಮಶ್ರೀನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ, ಗೆಜ್ಜೆಗಿರಿ ನಂದನಬಿತ್ತಿಲಿನಲ್ಲಿ ದೇಯಿ ಬೈದೆದಿ ಗಿಡಮೂಲಿಕಾ ಸಸ್ಯ ಉದ್ಯಾನವನ, ಬಿ.ಸಿ.ರೋಡು ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂಬ ನಾಮಕರಣ, ಜಿಲ್ಲೆಯ ಬಹುತೇಕ ಬಿಲ್ಲವ ಸಂಘಗಳ ಸಮುದಾಯ ಭವನಗಳಿಗೆ ಆರ್ಥಿಕ ನೆರವು, ಮೂರ್ತೆದಾರ ಸೊಸೈಟಿಯ ಸಾಲ ಮನ್ನಾ ಮೊದಲಾದವು ರೈ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಜಿಪಮೂಡದ ಜ್ಞಾನ ಮಂದಿರ ಲೋಕಾರ್ಪಣೆಗೆ ಬಂದಿದ್ದ ಸಂದರ್ಭ ನಮ್ಮ ಸಂಘದ ಮನವಿಯಂತೆ ಸಚಿವ ಬಿ.ರಮಾನಾಥ ರೈಯವರ ಶಿಫಾರಸಿನ ಮೇರೆಗೆ ನಾರಾಯಣ ಗುರುವರ್ಯರ ಜನ್ಮದಿನಾಚರಣೆಯನ್ನು ಸಾರ್ವತ್ರಿಕವಾಗಿ ಆಚರಿಸುವಂತೆ ಘೋಷಣೆ ಮಾಡುವಲ್ಲಿ ಸಚಿವ ಬಿ.ರಮಾನಾಥ ರೈ, ಜನಾರ್ದನ ಪೂಜಾರಿ ಹಾಗೂ ಮುಖ್ಯಮಂತ್ರಿಯವರ ದಿಟ್ಟ ನಿಲುವು ಸಮಸ್ತ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಐತಿಹಾಸಿಕ ಆದೇಶವನ್ನು ಬಿಲ್ಲವ ಸಮುದಾಯ ಯಾವತ್ತೂ ಮರೆಯುವಂತಿಲ್ಲ. ಇವತ್ತು ಬಿಲ್ಲವ ಸಮುದಾಯ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದ್ದರೆ ಅದು ಕಾಂಗ್ರೆಸ್ನ ಕಾರಣ. ಕಾಂಗ್ರೆಸ್ ಬಿಲ್ಲವ ಸಮುದಾಯಕ್ಕೆ ಅನೇಕ ಮೂಂಚೂಣಿಯ ಸ್ಥಾನಮಾನಗಳನ್ನು ನೀಡಿದೆ ಎಂದ ಅವರು, ಕರಾವಳಿಯಲ್ಲಿ ನಿರಂತರ ಶಾಂತಿ, ಸಾಮರಸ್ಯ ನೆಲೆಯಾಗಲು ಜನತೆ ರಮಾನಾಥ ರೈಯವರನ್ನು ಬೆಂಬಲಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಬಿ.ಜನಾರ್ದನ ಪೂಜಾರಿ ಮತ್ತು ಬಿ.ರಮಾನಾಥ ರೈಯವರು ಯಾವತ್ತೂ ಇನ್ನೊಂದು ಧರ್ಮವನ್ನು ನಿಂದಿಸಿದವರಲ್ಲ. ಎಲ್ಲಾ ಧರ್ಮದ ಜನರೊಂದಿಗಿದ್ದು ಅವರ ಪ್ರೀತಿಗೆ ಪಾತ್ರರಾದವರು. ಇವತ್ತಿಗೂ ಪೂಜಾರಿ ಮತ್ತು ರೈಯವರ ಹಿಂದೆ ಎಲ್ಲಾ ಜಾತಿ, ಮತ, ಧರ್ಮದವರೂ ಇದ್ದಾರೆ. ಹರಿಕೃಷ್ಣ ಬಂಟ್ವಾಳ್ ಏನು ಎಂಬುದು ಬಿಲ್ಲವ ಸಮುದಾಯ ಸಹಿತ ಸಮಸ್ತ ಸಮಾಜಕ್ಕೆ ಗೊತ್ತಾಗಿದೆ. ಬಿಜೆಪಿಯಲ್ಲಿದ್ದು ಏಕಾಂಗಿಯಾಗಿ ಒದ್ದಾಡುತ್ತಿರುವ ಅವರು ಪೂಜಾರಿಯಂತಹ ಹಿರಿಯ ನಾಯಕರಿಗೆ ಅಗೌರವ ತರುವುದು ಶೋಭೆಯಲ್ಲ ಎಂದರು.
ಜಿಲ್ಲೆಯಲ್ಲಿ ರೈ ಅವರನ್ನು ಸೋಲಿಸುವುದೇ ನಮ್ಮ ಮುಖ್ಯ ಎಜೆಂಡಾ ಎಂದು ಬಿಜೆಪಿ ನಾಯಕರು ಹೇಳುವುದರ ಹಿಂದಿನ ಉದ್ದೇಶ ಏನು? ಎಂದ ಅವರು, ಸಂಸದರು ಹಿಂದುಳಿದ ವರ್ಗದ ಜನರಿಗೆ ಯಾವ ಕೊಡುಗೆ ನೀಡಿದ್ದಾರೆ. ಪ.ಜಾತಿ ಪಂಗಡದ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ. ಕ್ಷೇತ್ರದಲ್ಲಿ ಸಮಾಜದ ಕೊನೆಯ ವರ್ಗದ ಜನತೆಯ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇದೆಯೇ. ಇರುವುದೇ ಹೌದಾದರೆ ಮಾಡಿರುವ ಕೆಲಸಗಳ ಬಗ್ಗೆ ವಿವರ ನೀಡಲಿ. ಅಲ್ಲದೆ, ತಾನು ಸಮುದಾಯ ಅಭಿವೃದ್ಧಿಗಾಗಿ ಕೋಟಿ ರೂ. ಸಾಲ ಮಾಡಿದ್ದೇನೆ. ಹರಿಕೃಷ್ಣ ಅವರು ಏನು ಮಾಡಿದ್ದಾರೆಂದು ತಿಳಿಸಲಿ ಎಂದು ಸವಾಲೆಸೆದರು.
ಕಲ್ಲಡ್ಕ ಮತ್ತು ಪುಣಚ ಶಾಲೆಗೆ ಕೊಲ್ಲೂರಿನಿಂದ ಆರ್ಥಿಕ ನೆರವನ್ನು ಸಚಿವ ರೈ ಅವರು ನಿಲ್ಲಿಸಿದ್ದಾಗಿ ಆರೋಪ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಶಾಲಾ ಮಕ್ಕಳ ಊಟಕ್ಕಾಗಿ ಹಣದ ರೂಪದಲ್ಲಿ ಅನುದಾನ ನೀಡುವ ಕ್ರಮ ಎಲ್ಲಿಯೂ ಇಲ್ಲ. ಜಿಲ್ಲೆಯ 330 ಅನುದಾನಿತ ಶಾಲೆಗಳಿಗೆ ರಾಜ್ಯ ಸರಕಾರ ಮಧ್ಯಾಹ್ನದ ಬಿಸಿಯೂಟದ ಅನುದಾನ ಸಿಗುತ್ತದೆ. ಕಲ್ಲಡ್ಕ ಮತ್ತು ಪುಣಚ ಸಂಸ್ಥೆಗೆ ಇಂತಹ ಯೋಜನೆ ಬೇಡವೆಂದು ಆಡಳಿತ ಮಂಡಳಿಯೆ ಪತ್ರ ನೀಡಿದೆ. ಪ್ರಸ್ತುತ ಅದನ್ನು ರಾಜಕೀಯ ಉದ್ದೇಶಕ್ಕೆ ದುರ್ಬಲಕೆ ಮಾಡಲಾಗಿದೆ. ಬಿಸಿ ಊಟ ಬೇಡವೆಂದು ಪತ್ರ ಬರೆದ ಈ ಎರಡು ಶಾಲೆಗಳಿಗೆ ಅನುದಾನ ನೀಡಲು ಸಾಧ್ಯವೇ ?
- ಕೆ.ಸಂಜೀವ ಪೂಜಾರಿ, ಅಧ್ಯಕ್ಷರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ