ಮೇ 5: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ

ಮಂಗಳೂರು, ಮೇ 4: ಪ್ರಧಾನಿ ನರೇಂದ್ರ ಮೋದಿ ಮೇ 5ರಂದು ಸಂಜೆ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 6:10ಕ್ಕೆ ಶಿವಮೊಗ್ಗದಿಂದ ಹೆಲಿಕಾಫ್ಟರ್ ಮೂಲಕ ಮಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಸಂಜೆ 6:30ಕ್ಕೆ ನೆಹರೂ ಮೈದಾನ ಪ್ರವೇಶಿಸಲಿದ್ದಾರೆ. 7:15ರವರೆಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 7:20ಕ್ಕೆ ಮೈದಾನದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊರಡಲಿದ್ದಾರೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮರಳಲಿದ್ದಾರೆ.
ಸಮಾವೇಶ ನಡೆಯಲಿರುವ ನೆಹರೂ ಮೈದಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ. ಪ್ರಧಾನಿಯ ಜೊತೆ ಬಿಜೆಪಿಯ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ವೇದಿಕೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಭದ್ರತಾ ಸಿಬ್ಬಂದಿ ಈಗಾಗಲೇ ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಮಾಡುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೈದಾನದ ಸುತ್ತ ಸಿಸಿ ಕ್ಯಾಮರಾ ಸಹಿತ ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅರೆ ಸೇನಾಪಡೆ, ಹೊರ ರಾಜ್ಯದ ಪೊಲೀಸ್ ಪಡೆ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಭದ್ರತೆಗಾಗಿ ಮಂಗಳೂರಿಗೆ ಆಗಮಿಸಿದೆ. ಸಮಾವೇಶ ನಡೆಯುವ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆಯಲ್ಲಿ ಭದ್ರತೆ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಮೇ 5ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ರಸ್ತೆ ಬದಿ ವಾಹನ ನಿಲುಗಡೆ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು, ಮರವೂರು, ಮರಕಡ, ಕಾವೂರು,ಯೆಯ್ಯಾಡಿ, ಸರ್ಕ್ಯೂಟ್ ಹೌಸ್,ಕದ್ರಿ ಕಂಬಳ ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ವೃತ್ತ, ಹಂಪನಕಟ್ಟೆ,ಎ.ಬಿ. ಶೆಟ್ಟಿ ವೃತ್ತ, ಕೇಂದ್ರ ಮೈದಾನದ ಇಕ್ಕೆಲಗಳಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.