ಮೂಡಿಗೆರೆಯಲ್ಲಿ ರಸ್ತೆ ಅಪಘಾತ: ಗಾಯಾಳುಗಳು ಮಂಗಳೂರು ಆಸ್ಪತ್ರೆಯಲ್ಲಿ ಚೇತರಿಕೆ
ಮಂಗಳೂರು, ಮೇ 4: ನಗರ ಹೊರವಲಯದ ದೇರಳಕಟ್ಟೆ ಸಮೀಪದ ನಾಟೆಕಲ್ನಿಂದ ಗುರುವಾರ ಸಕಲೇಶಪುರಕ್ಕೆ ಪ್ರವಾಸ ಹೊರಟಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ ಅಪಘಾತದಲ್ಲಿ ಮೃತಪಟ್ಟ ಸಹೋದರಿಯರಾದ ಸೌದಾ (50) ಮತ್ತು ಅಸ್ಮಾ (45) ಅವರನ್ನು ಅಸೈ ಸಮೀಪದ ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ಶುಕ್ರವಾರ ಜುಮಾ ನಮಾಝ್ಗೆ ಮುನ್ನ ದಫನ ಮಾಡಲಾಯಿತು.
ನಾಟೆಕಲ್ನ ಕುಟುಂಬವೊಂದರ ಮಕ್ಕಳ ಸಹಿತ ಸುಮಾರು 20 ಮಂದಿ ಮೂರು ವಾಹನಗಳಲ್ಲಿ ಗುರುವಾರ ಬೆಳಗ್ಗೆ 10ಗಂಟೆಗೆ ಸಕಲೇಶಪುರಕ್ಕೆ ಪ್ರವಾಸ ಹೊರಟಿದ್ದರು. ಅಪರಾಹ್ನ 3 ಗಂಟೆಯ ವೇಳೆಗೆ ಮೂಡಿಗೆರೆ ಸಮೀಪದ ಕೃಷ್ಣಾಪುರ ಎಂಬಲ್ಲಿ ಇನ್ನೋವಾ ಕಾರು ಲಾರಿ ಮಧ್ಯೆ ಅಪಘಾತ ಸಂಭವಿಸಿತು.
ಇದರಿಂದ ಕಾರಿನಲ್ಲಿದ್ದ ಸೌದಾ ಮತ್ತು ಅಸ್ಮಾ ಮೃತಪಟ್ಟರೆ, ಕಮ್ಸಿಯಾ (37), ಸಹನಾ (12), ತನೀಸ್ (12), ಫಿದಾ (12) ಗಾಯಗೊಂಡರು.
ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಇಸ್ಮಾಯೀಲ್ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.