‘ಸೌಹಾರ್ದ ಮಂಗಳೂರು ’ ಸಿಪಿಐ(ಎಂ) ಪ್ರಣಾಳಿಕೆ ಬಿಡುಗಡೆ

ಮಂಗಳೂರು, ಮೇ 4: ಸ್ವಚ್ಛ, ಸುಂದರ, ಸಮೃದ್ಧ ಸೌಹಾರ್ದ ಮಂಗಳೂರು ಎಂಬ ಧ್ಯೇಯ ದೊಂದಿಗೆ ಸಿಪಿಐ (ಎಂ) ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ಪ್ರಣಾಳಿಕೆಯನ್ನು ಸುದ್ದಿಗೋಷ್ಠಿಯಲ್ಲಿಂದು ಬಿಡುಗಡೆಗೊಳಿಸಿದ್ದಾರೆ.
ಚುನಾವಣಾ ಪ್ರಣಾಳಿಕೆಯ ಜೊತೆಗೆ ಎಡಿಬಿ-ಕುಡ್ಸೆಂಪ್ ಯೋಜನೆಯಲ್ಲಿ 360 ಕೋಟಿ ರೂ ಅವ್ಯವಹಾರದ ತನಿಖೆಯನ್ನು ನಗರಾಭಿವೃದ್ಧಿ ಸಚಿವ ರೋಶನ್ಬೇಗ್ ಸಿಓಟಿ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದ ಬಳಿಕ ಅವರ ಮೇಲೆ ಒತ್ತಡ ತರುವ ಮೂಲಕ ಸಿಒಡಿ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ರೀತಿಯ ಭ್ರಷ್ಟಾಚಾರ ಪ್ರಕರಣಗಳು, ನಗರದ ಮಾರುಕಟ್ಟೆಗಳ ಅಭಿವೃದ್ಧಿಯಾಗದೆ ಇರುವುದು. ಬಸ್ ನಿಲ್ಧಾಣಗಳ ಅಭಿವೃದ್ಧಿ ಕುಂಠಿತವಾಗಿರುವುದು. ಸುಮಾರು 10 ಸಾವಿರದಷ್ಟು ನಿವೇಶನ ರಹಿತರಿದ್ದರೂ ಅವರಿಗೆ ನಿವೇಶನ ಒದಗಿಸುವ ಕೆಲಸ ಆಗಿಲ್ಲ. ನಗರದಲ್ಲಿ ಪಾರ್ಕಿಂಗ್ ರೆನ್ ನೆನೆಗುದಿಗೆ ಬಿದ್ದಿದೆ ಈ ಎಲ್ಲಾ ಅಂಶಗಳು ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕವಾಗಲಿದೆ ಎಂದು ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
‘ಸೌಹಾರ್ದ ಮಂಗಳೂರು ’ಪ್ರಣಾಳಿಕೆ:- ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ಖಾಸಗಿ ಅಸ್ಪತ್ರೆಗಳ ದರ ನಿಯಂತ್ರಣಕ್ಕೆ ಕ್ರಮ, ನಗರ ಪ್ರದೇಶಗಳಲ್ಲಿ ಒಳಚರಂಡಿ, ಮೂಲಭೂತ ಸೌಲಭ್ಯಗಳ ನಿರ್ಮಾಣ, ನಗರದಲ್ಲಿ ಪಾರ್ಕಿಂಗ್ ಫುಟ್ ಪಾತ್ ನಿರ್ಮಾಣ, ಟ್ರಾಫಿಕ್ ಸಮಸ್ಯೆಗೆ ಪರಿಹಾರ, ಡೊನೇಶನ್ ಹಾವಳಿಗೆ ಕಡಿವಾಣ, ಎಡಿಬಿ -ಕುಡೆಂಪ್ 360 ಕೋಟಿ ರೂ ಹಗರಣದ ತನಿಖೆ ಮತ್ತು ತಪ್ಪಿತಸ್ಥಿರಿಗೆ ಶಿಕ್ಷೆ , ಮಾದಕ ದ್ರವ್ಯ ಜಾಲಕ್ಕೆ ಕಡಿವಾಣ, ಉದ್ಯೋಗ ಸೃಷ್ಟಿ, ಬೀಡಿ ಕಾರ್ಮಿಕರ ನ್ಯಾಯಯುತ ಬೇಡಿಕೆಗೆ ಪರಿಹಾರ, ನಿರ್ಮಾಣ ಕ್ಷೇತ್ರದ ಕಾರ್ಮಿಕರಿಗೆ ಸೌಲಭ್ಯ ಪಡೆಯಲು ನಿಯಮಗಳ ಸರಳೀಕರಣ, ನಿರಂತರ ನೀರು ಪೂರೈಕೆ, ಪ್ರತಿ ವಾರ್ಡ್ಗೆ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ, ಜೂಜು, ಸ್ಕಿಲ್ ಗೇಮ್ ಮೇಲೆ ಕಡಿವಾಣ, ತ್ಯಾಜ್ಯ ವಿಲೇವಾರಿ ತೆರಿಗೆ ರದ್ದು, ವಸತಿ ರಹಿತರಿಗೆ ಮನೆ, ಸರಕಾರಿ ಜಾಗದಲ್ಲಿ ವಾಸಿಸುವವರಿಗೆ ಹಕ್ಕು ಪತ್ರ, ಸ್ವಯಂ ಗೋಷಿತ ಆಸ್ತಿ ತೆರಿಗೆ ರದ್ದು, ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆ ಯೊಂದಿಗೆ ಉದ್ಯೋಗ ಸೃಷ್ಟಿ ಮೊದಲಾದ ಅಂಶಗಳನ್ನು ಪ್ರಣಾಳಿಕೆ ಹೊಂದಿದೆ.
ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಸೆಂಟ್ರಲ್ ಮಾರ್ಕೆಟ್, ಮೀನುಗಾರಿಕಾ ಧಕ್ಕೆ ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬರಲಾಗಿದೆ. ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರ ಕೈಯಿಂದ ಮುಕ್ತಗೊಳಿಸಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಗುರಿಯಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ಮಂಗಳೂರಿನ ಜನತೆಯ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಸಿಪಿಐ (ಎಂ)ನ್ನು ಜನ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡರಿಂದಲೂ ಭ್ರಮ ನಿರಸನಗೊಂಡು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜನರು ಬದಲಾವಣೆ ಮತ್ತು ಹೊಸ ಮುಖವನ್ನು ಬಯಸುತ್ತಿರುವುದನ್ನು ಪ್ರಚಾರದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಆದುದರಿಂದ ಈ ಬಗ್ಗೆ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆಲುವಿಗೆ ಪೂರಕ ವಾತವರಣ ನಿರ್ಮಾಣವಾಗಿದೆ ಎಂದು ಸುನಿಲ್ ಬಜಾಲ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಜೆ.ಬಾಲಕೃಷ್ಣ ಶೆಟ್ಟಿ,ಸಂತೋಷ್ ಬಜಾಲ್,ಜಯಂತಿ ಬಿ.ಶೆಟ್ಟಿ,ಸಂತೋಷ್ ಶಕ್ತಿ ನಗರ,ಯೋಗೀಶ್ ಜಪ್ಪಿನ ಮೊಗರು ಮೊದಲಾದದವರು ಉಪಸ್ಥಿತರಿದ್ದರು.







