ಪ್ರಧಾನಿ ಮೋದಿಯಿಂದ ಕರ್ನಾಟಕಕ್ಕೆ ದ್ರೋಹ: ವೀರಪ್ಪ ಮೊಯ್ಲಿ

ಉಡುಪಿ, ಮೇ 4: ಯುಪಿಎ ಅವಧಿಯಲ್ಲಿ ಭಾರತ, ಫ್ರಾನ್ಸ್ನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಆ ದೇಶದ ರಫೇಲ್ ಯುದ್ಧ ವಿಮಾನವನ್ನು ಭಾರತದಲ್ಲಿ ತಯಾರಿಸಲು ಬೆಂಗಳೂರಿನ ಎಚ್ಎಎಲ್ ಕಂಪೆನಿಯಲ್ಲಿ 56,000 ಕೋಟಿ ರೂ. ಬಂಡವಾಳ ಹೂಡಬೇಕಿತ್ತು. ಆದರೆ ಎನ್ಡಿಎ ಅಧಿಕಾರಕ್ಕೆ ಬರುತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದವನ್ನು ರದ್ದುಪಡಿಸಿ ಖಾಸಗಿ ಕಾರ್ಪೋರೇಟರ್ಗೆ ಲಾಭ ಮಾಡಿಕೊಡುವ ಮೂಲಕ ಕರ್ನಾಟಕಕ್ಕೆ ದ್ರೋಹ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಅವರು ಆರೋಪಿಸಿದ್ದಾರೆ.
ಇಂದು ಸಂಜೆ ನಗರದ ಹೊಟೇಲ್ ಕಿದಿಯೂರಿನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಕರಾವಳಿಯಲ್ಲಿ ಪ್ರವಾಸ ಕೈಗೊಂಡರೂ, ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಎಂಟರಲ್ಲಿ ಏಳು ಹಾಗೂ ಉಡುಪಿ ಜಿಲ್ಲೆಯ ಐದರಲ್ಲಿ ಮೂರು ಸೀಟುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಎಲ್ಲಾ 13 ಸೀಟುಗಳನ್ನು ಸ್ವೀಪ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ವಿರುದ್ಧ ಇಂದು ಇಡೀ ದೇಶದ ದಲಿತರು ತಿರುಗಿ ಬಿದ್ದಿದ್ದಾರೆ. ಅದೇ ರೀತಿ ಮಹಿಳೆಯರೂ ಮೋದಿ ಸರಕಾರವನ್ನು ವಿರೋಧಿಸುತಿದ್ದಾರೆ. ಉ.ಪ್ರದೇಶದಲ್ಲಿ ಅತ್ಯಾಚಾರಿ ಶಾಸಕನನ್ನು ಪೊಲೀಸರು ಬಂಧಿಸಿದ್ದರೂ ಪಕ್ಷ ಇನ್ನೂ ಆತನನ್ನು ಅಮಾನತುಗೊಳಿಸಿಲ್ಲ. ಅದೇ ರೀತಿ ಜಮ್ಮು ಕಾಶ್ಮೀರದಲ್ಲಿ ಅತ್ಯಾಚಾರಿಯನ್ನು ಬೆಂಬಲಿಸಿದ ಸಚಿವರಿಗೆ ಭಡ್ತಿಯನ್ನು ನೀಡಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರ ಇಡೀ ದೇಶದ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದವರು ಹೇಳಿದರು.
ಬಿಜೆಪಿ ಇಂದು ಪತನದ ಹಾದಿಯಲ್ಲಿದೆ. ಮೇ 12ರ ಕರ್ನಾಟಕ ಚುನಾವಣೆಯಲ್ಲಿ ಇದು ಸ್ಪಷ್ಟವಾಗಿ ಕಾಣಿಸಲಿದೆ. ಮುಂದೆ ರಾಜಸ್ತಾನ ಹಾಗೂ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಇತಿಶ್ರೀಯಾಗಲಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರೇ ಅಧಿಕಾರಕ್ಕೆ ಬರಲಿದ್ದಾರೆ ಎಂದು ಮೊಯ್ಲಿ ನುಡಿದರು.
ಬಿಜೆಪಿ ಇಂದು ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆ, ಕಾಂಗ್ರೆಸ್ನ ನಕಲು ಎಂದು ಗೇಲಿ ಮಾಡಿದ ಮೊಯ್ಲಿ, ಆ ಪ್ರಣಾಳಿಕೆಗೆ ವಿಶ್ವಾಸಾರ್ಹತೆಯೇ ಇಲ್ಲವಾಗಿದೆ. ಅವರಲ್ಲಿ ಹೊಸ ಯೋಜನೆಗಳಿಗೆ ಬರವಿದೆ ಎಂದರು. ಅಧಿಕಾರಕ್ಕೆ ಬರುತಿದ್ದಂತೆ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ ಒಂದು ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಮಾಡುವ ಘೋಷಣೆ ಜನರನ್ನು ವಂಚಿಸುವ ತಂತ್ರ ಎಂದರು. ಯಡಿಯೂರಪ್ಪ ಅವರೇ ಆಡಳಿತದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಲು ನಾನೇನು ಟಂಕಸಾಲೆ ಇಟ್ಟುಕೊಂಡಿಲ್ಲ ಎಂದು ಹೇಳಿದ ಇವರ ಮಾತನ್ನು ಯಾರೂ ನಂಬುವುದಿಲ್ಲ ಎಂದರು.
ಮೋದಿ ಆಡಳಿತದ ಅವಧಿಯಲ್ಲಿ ಎರಡು ಲಕ್ಷ ಕೋಟಿ ರೂ. ನೋಟುಗಳ ಅಮೌಲೀಕರಣದಿಂದ ದೇಶಕ್ಕೆ ನಷ್ಟವಾಗಿದೆ. 95,000 ಕೋಟಿ ರೂ. ಬ್ಯಾಂಕುಗಳಿಂದ ಲೂಟಿಯಾಗಿದೆ. ಯುಪಿಎ ಅವಧಿಯಲ್ಲಿ ಶೇ.2ರಷ್ಟಿದ್ದ ಅನುತ್ಪಾದಕ ಆಸ್ತಿಯ ಪ್ರಮಾಣ (ಎನ್ಪಿಎ) ಈಗ ಶೇ.10ಕ್ಕೆ ನೆಗೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ, ಎಐಸಿಸಿಯ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡೀಸ್, ಬ್ಲೋಸಮ್ ಫೆರ್ನಾಂಡೀಸ್, ನಾಯಕರಾದ ಡೋಮಿನಿಕ್ ಪಿ.,ಜನಾರ್ದನ ತೋನ್ಸೆ, ಗೋಪಾಲ ಭಂಡಾರಿ, ದಿನೇಶ್ ಪುತ್ರನ್, ಬಿ.ಎ.ಬಾವಾ, ಎಂ.ಎ.ಗಫೂರ್ ಮುಂತಾದವರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಪುಲಕೇಶಿ 2
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಗೆಲ್ಲುವ ಅಷ್ಟೊಂದು ಭರವಸೆ ಇದ್ದರೆ ಮುಖ್ಯಮಂತ್ರಿಗಳು ಎರಡೆರಡು ಕಡೆಗಳಲ್ಲಿ ಯಾಕೆ ಚುನಾವಣೆಗೆ ನಿಂತಿದ್ದಾರೆ ಎಂದು ಪ್ರಶ್ನಿಸಿದಾಗ, ಅದು ಸಿದ್ದರಾಮಯ್ಯರ ಬೇಡಿಕೆ ಯಲ್ಲ, ಪಕ್ಷದ ನಿರ್ಧಾರ. ಇದಕ್ಕೆ ಐತಿಹಾಸಿಕ ಮಹತ್ವವಿದೆ ಎಂದರು.
ಬಾದಾಮಿಯನ್ನು ರಾಜಧಾನಿಯಾಗಿ ಹೊಂದಿದ್ದ ಚಾಲುಕ್ಯ ಮನೆತನದ ಅರಸ ಇಮ್ಮಡಿ ಪುಲಕೇಶಿ ತನ್ನ ಆಡಳಿತದ ಅವಧಿಯಲ್ಲಿ ಉತ್ತರದ ಹರ್ಷವರ್ಧನ ದೊರೆ ನರ್ಮದಾ ನದಿಯನ್ನು ದಾಟಿ ದಕ್ಷಿಣಕ್ಕೆ ಬರದಂತೆ ಹಿಮ್ಮೆಟ್ಟಿಸಿದ್ದಾರೆ. ಅದೇ ರೀತಿ ಬಾದಾಮಿಯಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ, ನರೇಂದ್ರ ಮೋದಿ ದಕ್ಷಿಣಕ್ಕೆ ಲಗ್ಗೆ ಹಾಕದಂತೆ ತಡೆಯುತ್ತಾರೆ ಎಂದು ಮೊಯ್ಲಿ ನುಡಿದರು.