ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ ಕಾಂಗ್ರೆಸ್ ಪರ ವಿಶ್ವಕರ್ಮ ಸಮಾಜ: ಶ್ರೀನಿವಾಸ

ಭಟ್ಕಳ, ಮೇ 4: ಕಳೆದ 13 ವರ್ಷಗಳಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಕೋರಿಕೆ ಸಲ್ಲಿಸಿದ್ದರೂ ಸ್ಥಾಪಿಸದೇ ಇರುವಾಗ ರಾಜ್ಯದ ಕಾಂಗ್ರೆಸ್ ಸರಕಾರ ವಿಶ್ವಕರ್ಮ ಅಭಿವೃದ್ಧಿ ನಿಗವವನ್ನು ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿದೆ ವಿಶ್ವಕರ್ಮ ಸಮಾಜ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ಎಸ್. ವೈದ್ಯ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ ಹೇಳಿದರು.
ಅವರು ಇಲ್ಲಿನ ಖಾಸಗೀ ಹೋಟೇಲ್ನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕೇಂದ್ರ ಅಥವಾ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಸರಕಾರವೂ ವಿಶ್ವಕರ್ಮ ಸಮಾಜವನ್ನು ಗುರುತಿಸಿ ಅವರ ಅಭಿವೃದ್ಧಿಗೆ ಪೂರಕವಾದಂತಹ ಕಾರ್ಯ ಮಾಡಿಲ್ಲ. ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮ ಸಮಾಜದವರಿದ್ದು, ದೇಶದಲ್ಲಿ ಇದು ಕೇವಲ ಜಾತಿಯಾಗಿ ಬೆಳೆಯದೇ ಒಂದು ಸಂಸ್ಕೃತಿಯಾಗಿ ದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲು ಸೃಷ್ಠಿಯಾದ ಸಮಾಜವಾಗಿದೆ. ರಾಜ್ಯದಲ್ಲಿ ಹಿಂದುಳಿದ ಸಮಾಜದ ಪೈಕಿ ಎರಡನೇ ಸ್ಥಾನದಲ್ಲಿ ವಿಶ್ವಕರ್ಮ ಸಮಾಜವಿದ್ದು ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದ್ ಕಾಂಗ್ರೆಸ್ ಸರಕಾರ ವಿಶ್ವಕರ್ಮ ನಿಗಮ ಸ್ಥಾಪನೆ ಮಾಡುವುದರೊಂದಿಗೆ ಸಮಾಜಕ್ಕೊಂದು ಸ್ಥಾನಮಾನ ನೀಡಿ ನಿಗಮ ಸ್ಥಾಪನೆ ಮಾಡಿದೆ ಎಂದರು.
ಸಿದ್ದರಾಮಯ್ಯನವರ ಸರಕಾರ ಸಮಾಜದ ವಿಶ್ವಕರ್ಮ ಏಳಿಗೆಗೆ, ಅಭಿವೃದ್ಧಿಗೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಮಾಜ ಅವರ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದೆ. ಈ ಭಾಗದ ಅಭ್ಯರ್ಥಿಯಾದ ಮಂಕಾಳ ವೈದ್ಯ ಅವರು ಸಹ ಕ್ಷೇತ್ರದ ವಿಶ್ವಕರ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದೂ ಹೇಳಿದರು.
ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ದೇವಿದಾಸ ಆಚಾರ್ಯ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ವಿಶ್ವಕರ್ಮ ಸಮಾಜಕ್ಕೆ ಸಿಗಬೇಕಾದ ಎಲ್ಲಾ ಮೂಲಭೂತ ಹಕ್ಕುಗಳನ್ನು ದೊರಕಿದ್ದು ಶಾಸಕ ಮಂಕಾಳ ವೈದ್ಯ ವೈಯಕ್ತಿಕವಾಗಿ ಸಮಾಜಕ್ಕೆ ಸಹಾಯ ಸಹಕಾರವನ್ನು ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ನಿಗಮದಲ್ಲಿ ಭಟ್ಕಳ ಕ್ಷೇತ್ರಕ್ಕೆ ಸ್ಥಾನ ಸಿಗುವಂತೆ ಮಾಡಿದ ಅವರ ಕಾರ್ಯ ಶ್ಲಾಘನೀಯವಾಗಿದ್ದು ಅದನ್ನು ಮರೆಯುವಂತಿಲ್ಲ. ಮಂಕಾಳ ವೈದ್ಯ ಅವರು ಎಲ್ಲಾ ಸಮಾಜದ ಶಾಸಕರಂತೆ ಕೆಲಸ ಮಾಡಿದ್ದು ಅವರನ್ನು ಬೆಂಬಲಿಸುವುದು ಸೂಕ್ತ ಎಂದೂ ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜ ಸಂಘಟನೆಯ ಸದಸ್ಯ ಗಜಾನನ ಆಚಾರ್ಯ, ತಾಲೂಕಾ ವಿಶ್ವಕರ್ಮ ಸಮಾಜ ಸಂಘಟನೆಯ ಅಧ್ಯಕ್ಷ ಸತೀಶ ಆಚಾರ್ಯ, ಲೋಕೇಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.