ನಮಾಝಲ್ಲಿ ಮಾತ್ರವಲ್ಲ ಝಕಾತಲ್ಲಿಯೂ ಇಸ್ಲಾಮನ್ನು ಖಿಬ್ಲವಾಗಿ ಅನುಸರಿಸಿರಿ : ಶಿಹಾಬುದ್ದೀನ್ ಇಬ್ನು ಹಂಝ

ಮಂಗಳೂರು, ಮೇ 5: ಝಕಾತ್ ಎಂಬುದು ಇಸ್ಲಾಮಿನ ಪ್ರಧಾನವಾದ ಐದು ಆಧಾರ ಸ್ತಂಭಗಳಲ್ಲಿ ಒಂದು. ಈ ಝಕಾತ್ ಸಂಪತ್ತನ್ನು ಶುದ್ಧೀಕರಿಸುತ್ತದೆ. ಇದು ಆದ್ಯಾತ್ಮಿಕವಾದ ಅಭಿವೃದ್ಧಿಯ ದಾರಿಯಾಗಿದೆ. ನಾವು ಅಲ್ಲಾಹನಿಗಾಗಿ ಯಾವುದೆಲ್ಲಾ ವ್ಯಯಿಸುತ್ತೇವೆಯೋ ಅದು ಮಾತ್ರ ನಾಳೆ ನಮಗೆ ಪರಲೋಕದಲ್ಲಿ ಉಳಿಯುತ್ತದೆ. ಇಲ್ಲಿ ದಾನ ಮಾಡದೆ ಕೂಡಿಟ್ಟದ್ದು ವ್ಯರ್ಥವಾಗುತ್ತದೆ. ನಾವು ನಮಾಝ್ ನಲ್ಲಿ ಖಿಬ್ಲವಾಗಿ ಕಅಬಾವನ್ನು ಸ್ವೀಕರಿಸುತ್ತೇವೆ. ಆದರೆ ಆರ್ಥಿಕ ವ್ಯವಹಾರದಲ್ಲಿ ಪಾಶ್ಚತ್ಯರತ್ತ ಮುಖ ಮಾಡುತ್ತೇವೆ. ಯುರೋಪ್ ನ ಬಂಡವಾಳಶಾಹಿಗಳ ಅರ್ತವ್ಯವಸ್ಥೆಯನ್ನು ಅನುಸರಿಸುತ್ತಿರುವುದ ಖೇದಕರ. ನಮಾಝ್ ನಂತೆ ಆರ್ಥಿಕ ವ್ಯವಹಾರದಲ್ಲಿಯೂ ಇಸ್ಲಾಮೀ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಝಕಾತನ್ನು ಸಾಮೂಹಿಕವಾಗಿ ನೀಡಲು ಮುಂದಾಗಬೇಕೆಂದು ಪಡನ್ನದ ಉಮರುಲ್ ಫಾರೂಕ್ ಮಸೀದಿಯ ಖತೀಬರಾದ ಶಿಹಾಬುದ್ದೀನ್ ಇಬ್ನು ಹಂಝ ಕರೆಯಿತ್ತರು.
ಅವರು ಇಲ್ಲಿನ ಬಲ್ಮಠದ ರಿಸರ್ವ್ ಸೆಂಟರ್ ನಲ್ಲಿ ಇತ್ತೀಚೆಗೆ ಜಮಾಅತೆ ಇಸ್ಲಾಮೀ ಮಂಗಳೂರು ಶಾಖೆ ಏರ್ಪಡಿಸಿದ್ದ "ಇಲಲ್ ಕುರ್ ಆನ್" ಎಂಬ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದರು. ನಂತರ ಮಾತನಾಡಿದ ಹಿರಿಯ ವಿದ್ವಾಂಸರಾದ ಅಮೀನುಲ್ ಹಸನ್ ಬೆಂಗಳೂರು ರವರು ಮಾತನಾಡುತ್ತಾ "ಪವಿತ್ರ ಕುರಾನ್ ಸೃಷ್ಟಿಕರ್ತನ ಗ್ರಂಥ. ಅದು ಅಂತ್ಯ ದಿನದ ವರೇಗೆ ಇರುವ ಸಕಲ ಮಾನವರಿಗೆ ಮಾರ್ಗದರ್ಶಿಯಾಗಿದೆ, ಅದರಲ್ಲಿ ಜೀವನದ ಎಲ್ಲ ರಂಗಗಳಿಗೆ ಮಾರ್ಗದರ್ಶನವಿದೆ. ಜೀವಂತ ಗ್ರಂತವದು. ಮಾನವನ ವೈಯುಕ್ತಿಕ ,ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮೊದಲಾದ ರಂಗದಲ್ಲಿ ಅದು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಕುರ್ಆನ್ ಅರಿತು ಅದರಂತೆ ಬಾಳಿದರೆ ಲೋಕದಲ್ಲಿ ಶಾಂತಿ ಸುಬಿಕ್ಷೆ ದೊರಕುವುದರಲ್ಲಿ ಸಂದೇಹವಿಲ್ಲ, ಕುರ್ ಆನ್ ಅಧ್ಯಯನ ನಡೆಸುವ ಮೂರು ಹಂತಗಳಿವೆ. ತದಕ್ಕುರ್(ಉಪದೇಶ), ತಫಕ್ಕುರ್(ವಿಚಾರ ಮಂಥನ) ಮತ್ತು ತದಬ್ಬುರ್(ಆಳವಾದ ಚಿಂತನೆ). ಕುರ್ ಆನ್ ನಿಂದ ಉಪದೇಶ ಪಡೆಯಬೇಕು ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಮಂಗಳೂರು ವಲಯ ಸಂಚಾಲಕ ಅಕ್ಬರ್ ಅಲಿ ಸಮಾರೋಪದಲ್ಲಿ ಮಾತನಾಡಿದರು. ಜ.ಇ.ಮಂಗಳೂರು ಶಾಖೆಯ ಅಧ್ಯಕ್ಷ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಪ್ರಾರಂಭದಲ್ಲಿ ಮುಜಾಹಿರ್ ಕುದ್ರೋಳಿ ಕುರ್ಆನ್ ಪಠಿಸಿದರು. ಅಬ್ದುಲ್ ಗಫೂರ್ ಕುಳಾಯಿ ಮತ್ತು ರಹ್ಮತುಲ್ಲಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.