ಪಕ್ಷಿ, ಸಸ್ಯ ಸಂಕುಲದ ಕುರಿತ ಮಾಹಿತಿ ಅಗತ್ಯ: ಸಂಜಯ್ ಬಿಜೂರು

ಹೆಬ್ರಿ, ಮೇ 5: ಆಧುನಿಕ ತಂತ್ರಜ್ಞಾನದಿಂದಾಗಿ ಇಂದು ಮಕ್ಕಳಿಗೆ ನಮ್ಮ ಸುತ್ತಮುತ್ತ ಇರುವ ಸಸ್ಯ ಹಾಗೂ ಪಕ್ಷಿ ಸಂಕುಲಗಳ ಬಗ್ಗೆ ಪರಿಚಯವೇ ಇಲ್ಲ. ಪಕ್ಷಿ ಹಾಗೂ ಸಸ್ಯಸಂಕುಲದ ಬಗ್ಗೆ ಮಕ್ಕಳು ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಬಿಜೂರು ಹೇಳಿದರು.
ಹೆಬ್ರಿ ಚಾಣಕ್ಯ ಎಜ್ಯುಕೇಶನ್ ಅಕಾಡೆಮಿ ಆಶ್ರಯಲ್ಲಿ ಹಮ್ಮಿಕೊಳ್ಳಲಾಗಿರುವ ನಲಿ-ಕಲಿ ಬೇಸಗೆ ಶಿಬಿರದ ಪ್ರಯುಕ್ತ ಹೆಬ್ರಿ ಗ್ರಾಮ ಅರಣ್ಯ ಸಮಿತಿ ಹಾಗೂ ಹೆಬ್ರಿ ಜೇಸಿಐ ಸಹಯೋಗದೊಂದಿಗೆ ಹೆಬ್ರಿ ಸಾಲುಮರದ ತಿಮ್ಮಕ್ಕ ಟ್ರಿ ಪಾರ್ಕ್ ನಲ್ಲಿ ಇತ್ತೀಚೆಗೆ ನಡೆದ ನೇಚರ್ ಕ್ಯಾಂಪ್ನಲ್ಲಿ ಅವರು ಪಕ್ಷಿ ಹಾಗೂ ಸಸ್ಯ ಸಂಕುಲದ ಬಗ್ಗೆ ಮಾಹಿತಿ ನೀಡಿದರು.
ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಹೆಬ್ರಿ ವಲಯ ವನ್ಯಜೀವಿ ವಿಭಾಗದ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಶ್ರುತಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಸದಸ್ಯ ಅಮರ್ನಾಥ ಶೆಟ್ಟಿ, ರತ್ನಾಕರ ಆಚಾರ್ಯ, ಗುಳಿಬೆಟ್ಟು ಸುರೇಶ್ ಶೆಟ್ಟಿ, ಬೋಜ ಪೂಜಾರಿ, ಹೆಬ್ರಿ ಜೇಸಿಐನ ಅಧ್ಯಕ್ಷೆ ವೀಣಾ ಆರ್.ಭಟ್, ಜೇಸಿರೇಟ್ ಅಧ್ಯಕ್ಷೆ ಸೋನಿ ಪಿ.ಶೆಟ್ಟಿ, ಮುಟ್ಲುಪಾಡಿ ಉದಯ ಶೆಟ್ಟಿ, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಜಯಕರ ಪೂಜಾರಿ ಸ್ವಾಗತಿಸಿ ದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಂದಿಸಿದರು. ಹೆಬ್ರಿ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.