ರಾಜ್ಯದ ಜನತೆ ಬಿಜೆಪಿಗೆ ಯಾಕೆ ಮತ ನೀಡಬೇಕು ?
ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜಿವಾಲ ಪ್ರಶ್ನೆ

ಮಂಗಳೂರು, ಮೇ 6: ಚುನಾವಣಾ ಸಂದರ್ಭ ಬಿಡುಗಡೆ ಮಾಡುವ ಪ್ರಣಾಳಿಕೆಗೆ ಹೆಚ್ಚು ಮಹತ್ವ ನೀಡಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅಲ್ಲದೆ ರಾಜ್ಯದ ಬಹುತೇಕ ಯೋಜನೆಗಳಿಗೆ ಕೇಂದ್ರ ಬಿಡಿಕಾಸು ನೀಡಿ ಮೋಸ ಮಾಡುತ್ತಿದೆ. ಹೀಗಿರುವಾಗ ಈ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಯಾಕೆ ಮತ ನೀಡಬೇಕು ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜಿವಾಲ ಪ್ರಶ್ನಿಸಿದ್ದಾರೆ.
ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ರಾಜ್ಯಕ್ಕೆ ಭೇಟಿ ನೀಡಿ ಸಾಕಷ್ಟು ಆಶ್ವಾಸನೆ ನೀಡುವ ಮೋದಿ ಬಳಿಕ ಅದನ್ನು ಮರೆತು ಬಿಡುತ್ತಾರೆ. ಅಲ್ಲದೆ ರಾಜ್ಯ ಸರಕಾರ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಆದರೆ, ರಾಜ್ಯಕ್ಕೆ ಕೇಂದ್ರವು ನಿರೀಕ್ಷಿತ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಅಂಕಿ ಅಂಶ ಸಹಿತ ತಿಳಿಸಿದರು.
ಕಳೆದ ಚುನಾವಣೆ ಸಂದರ್ಭ ಹರ್ ಹರ್ ಮೋದಿ... ಘರ್... ಘರ್... ಮೋದಿ ಎಂಬ ಘೋಷಣೆ ಎಲ್ಲೆಡೆ ಕೇಳಿ ಬರುತ್ತಿತ್ತು. ಅದಿನ್ನೂ ಮರುಕಳಿಸದು. ಬದಲಾಗಿ ಬೈ ಬೈ ಮೋದಿ ಎಂಬ ಮಾತು ಕೇಳಿ ಬರಲಿದೆ ಎಂದು ರಣದೀಪ್ ಸಿಂಗ್ ಸುರ್ಜಿವಾಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ, ಎಐಸಿಸಿ ಮಾಧ್ಯಮ ವಕ್ತಾರ ಜೈವೀರ್ ಶೆರ್ಗಿಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಮಂಜುನಾಥ ಭಂಡಾರಿ, ಸಂಜೀವ್ ಸಿಂಗ್ ಉಪಸ್ಥಿತರಿದ್ದರು.