ಉಡುಪಿ: ವಲಸೆ ಕಾರ್ಮಿಕರಿಂದ ಮತದಾನ ಜಾಗೃತಿಗಾಗಿ ಬೈಕ್ ಜಾಥಾ

ಉಡುಪಿ, ಮೇ 6: ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ದಿ ಕನ್ಸರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ, ಕಟ್ಟಡ ಮತ್ತು ಇತರೆ ನಿರ್ಮಾಣ ವಲಸೆ ಕಾರ್ಮಿಕರ ಸಂಘಟನೆ ಹಾಗೂ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಸಹಭಾಗಿತ್ವದಲ್ಲಿ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಬೈಕ್ ಜಾಥಾ ವನ್ನು ರವಿವಾರ ಆಯೋಜಿಸಲಾಗಿತ್ತು.
ಉಡುಪಿಯ ಬೋರ್ಡ್ ಹೈಸ್ಕೂಲ್ ಎದುರು ಉಡುಪಿ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಜಾಥಾಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಮತದಾನ ನಮ್ಮೆಲ್ಲರ ಹಕ್ಕು, ನಾವೆಲ್ಲರೂ ಯಾವುದೇ ಕಾರಣಕ್ಕೂ ಮತದಾನದಿಂದ ಹಿಂದೆಸರಿಯಬಾರದು. ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ ಪ್ರಜಾಪೃಭುತ್ವ ಉಳಿಸಬೇಕು ಎಂದರು.
ಅಲ್ಲಿಂದ ಜಾಥಾವು ಕಲ್ಸಂಕ ಮಾರ್ಗವಾಗಿ ಮಣಿಪಾಲದ ಟೈಗರ ಸರ್ಕಲ್, ಸಿಂಡಿಕೇಟ್ ಬ್ಯಾಂಕ್ ಮಾರ್ಗದಲ್ಲಿ ಸಾಗಿ, ಉಡುಪಿಯ ಬೀಡಿನಗುಡ್ಡೆ, ಡಯಾನ ಸರ್ಕಲ್ ಮೂಲಕ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. 45ಕ್ಕೂ ಹೆಚ್ಚು ಬೈಕ್ಗಳಲ್ಲಿ 100ಕ್ಕೂ ಅಧಿಕ ಮಂದಿ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಬ್ಯಾಡ್ಜ್ಗಳನ್ನು ಧರಿಸಿ, ಮತದಾನ ನಮ್ಮ ಹಕ್ಕು, ನಮ್ಮ ಮತ ನಮ್ಮ ಧ್ವನಿ ಮುಂತಾದ ಮತದಾನದ ಸಂದೇಶವನ್ನು ಸಾರುವ ಬ್ಯಾನರ್ ಮೂಲಕ ಮಾರ್ಗದುದ್ದಕ್ಕೂ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ವಲಸೆ ಕಾರ್ಮಿಕರ ಸಂಘದ ಅಧ್ಯಕ್ಷ ಸಂಗಪ್ಪ, ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಚನ್ನವೀರಪ್ಪ, ಸುರೇಶ್ ಮೊದ ಲಾದವರು ಉಪಸ್ಥಿತರಿದ್ದರು.