ತೆಂಕಮಿಜಾರಿನಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ, ಮೇ 6: ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ತೆಂಕಮಿಜಾರು ಗ್ರಾಮ ಪಂಚಾಯತ್ನ ಸಹಯೋಗದೊಂದಿಗೆ ಸಮುದಾಯ ಜಾಗೃತಿ ಕಾರ್ಯಕ್ರಮವು ರವಿವಾರ ಗ್ರಾಮ ಪಂಚಾಯತ್ನ ಸಭಾಂಗಣದಲ್ಲಿ ನಡೆಯಿತು.
ತೆಂಕಮಿಜಾರು ಗ್ರಾ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸಮಾಜದಲ್ಲಿ ಹಲವು ಸಮಸ್ಯೆಗಳು ಇವೆ. ಮಹಿಳೆಯರು ತಮಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಯಾರ ಬಳಿಯಲ್ಲೂ ಹೇಳಿಕೊಳ್ಳದಿರುವುದರಿಂದ ಮತ್ತು ಖುದ್ದಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಮಾಡಿಸಿಕೊಳ್ಳದಿರುವುದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ಇದಲ್ಲದೆ ಗ್ರಾಮದಲ್ಲಿರುವ ಜನರ, ಮಕ್ಕಳ ಸಹಿತ ಇತರ ಸಮಸ್ಯೆಗಳನ್ನು ಸಮಾಜ ಕಾರ್ಯ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿರುವುದರಿಂದ ಗ್ರಾಮದಲ್ಲಿರುವ ಜನರ ಸಮಸ್ಯೆಗಳು ಪಂಚಾಯತ್ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು ಮತ್ತು ಪಂಚಾಯತ್ ಕೂಡಾ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.
ಆಳ್ವಾಸ್ನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ನಾಗರಾಜ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಸುಧೀಂದ್ರ ಜೆ.ಶಾಂತಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿನಿ ಹರಿಣಿ ಸ್ವಾಗತಿಸಿದರು. ಸಮಾಜಕಾರ್ಯ ಪದವಿ ವಿಭಾಗದ ಮುಖ್ಯಸ್ಥೆ, ಕಾರ್ಯಕ್ರಮದ ರೂವಾರಿ ಡಾ. ಮಧುಮಾಲಾ ಪ್ರಾಸ್ತಾವಿಕವಾಗಿ ಮಾತನಾಡಿ ತೆಂಕಮಿಜಾರು ಗ್ರಾಮವನ್ನು ಆಳ್ವಾಸ್ ಸಮಾಜಕಾರ್ಯ ಕಾಲೇಜು ದತ್ತು ತೆಗೆದುಕೊಂಡು ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಕೈಗೊಂಡಿದ್ದು ಈಗಾಗಲೇ ಹಳೆ ವಿದ್ಯಾರ್ಥಿಗಳು ಗ್ರಾಮದ ಜನರಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಪಂಚಾಯತ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ರೋಟರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶುಭಕರ ಕಾರ್ಯಕ್ರಮ ನಿರೂಪಿಸಿದರು. ಎಕ್ಸಲೆಂಟ್ ಕಾಲೇಜಿನ ಆಡಳಿತಾಧಿಕಾರಿ ರಾಜೇಶ್ ಲೋಬೋ ವಂದಿಸಿದರು.