ರಘುಪತಿ ಭಟ್ರನ್ನು ಮಹಿಳಾ ಮತದಾರರು ಕ್ಷಮಿಸಲಾರರು: ಜ್ಯೋತಿ ಹೆಬ್ಬಾರ್

ಉಡುಪಿ, ಮೇ 6: ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರೀಯ ನಿಗೂಡ ಸಾವಿನ ಬಗ್ಗೆ ಯಾವುದೇ ತನಿಖೆಗೆ ಒತ್ತಾಯಿಸದ ಮಾಜಿ ಶಾಸಕರ ವರ್ತನೆ ಅತ್ಯಂತ ಸಂಶಯಾಸ್ಪದವಾಗಿದ್ದು ತನ್ನ ಪತ್ನಿಯ ಸಾವಿನ ಬಗ್ಗೆ ಅವರು ಏಕೆ ಸರಕಾರವನ್ನು ಆಗ್ರಹಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಹೇಳಿದ್ದಾರೆ.
ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಶನಿವಾರ ಜರಗಿದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಘುಪತಿ ಭಟ್ ಶಾಸಕರಾಗಿದ್ದಾಗ ರೇವು ಪಾರ್ಟಿಯ ಮೂಲಕ ವಿದೇಶಿ ಮಹಿಳೆಯರ ನಂಗಾನಾಚ್ ಮಾಡಿಸಿ ಉಡುಪಿಯ ಜನರ ಮಾನವನ್ನೇ ಹರಾಜು ಹಾಕಿರುವುದನ್ನು ಮಹಿಳೆಯರು ಮರೆತಿಲ್ಲ. ಮಹಿಳೆಯರನ್ನು ಗೌರವಿ ಸದ ಬಿಜೆಪಿಯ ಇಂತಹ ಅಭ್ಯರ್ಥಿಗಳಿಗೆ ಉಡುಪಿಯ ಪ್ರಜ್ಞಾವಂತ ನಾಗರೀಕರು ಸರಿಯಾದ ಪಾಠ ಕಲಿಸಲಿದ್ದಾರೆ. ಅವರ ನಡೆ ನುಡಿಗಳು ಮಹಿಳೆ ಯರ ಭದ್ರತೆಗೆ ಸವಾಲಾಗಿರುವುದಂತೂ ಸತ್ಯ ಎಂದರು.
ಬಿಜೆಪಿ ಪಕ್ಷದ ಮುಖಂಡರು ಮಹಿಳೆಯರಿಗೆ ಭದ್ರತೆ ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವೆಲ್ಲವೂ ಉಡುಪಿ ಕ್ಷೇತ್ರದ ಪ್ರಜ್ಞಾವಂತ ನಾಗರಿಕರು ನಾಚಿಸುವಂತಹ ಪ್ರಕರಣವಾಗಿದೆ. ಕ್ಷೇತ್ರದ ಮಹಿಳಾ ಮತದಾರರು ಎಂದೆಂದಿಗೂ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ರವರನ್ನು ಕ್ಷಮಿಸಲಾರರು ಎಂದು ಜ್ಯೋತಿ ಹೆಬ್ಬಾರ್ ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಶೇಖರ್ ಜಿ.ಕೋಟ್ಯಾನ್, ಜನಾರ್ದನ ಭಂಡಾರ್ಕಾರ್, ಸುರೇಶ್ ಶೆಟ್ಟಿ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.







