ನಾನು ರಾಹುಲ್ ಗಾಂಧಿಯ ಗುಲಾಮ ಅಲ್ಲ, ಆರೂವರೆ ಕೋಟಿ ಜನತೆಯ ಗುಲಾಮ: ಕುಮಾರಸ್ವಾಮಿ

ಚಿಕ್ಕಮಗಳೂರು,ಮೇ 6: ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ಕೇವಲ ಮತದಾನ ಮಾಡಿದರೆ ಸಾಲದು, ರಾಜ್ಯದ ಮುಂದಿನ ಭವಿಷ್ಯ ಹಾಗೂ ರಾಜ್ಯದ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಭಾನುವಾರ ನಗರದ ಸುಭಾಷ್ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ವಿಕಾಸ ಪರ್ವ ಯಾತ್ರೆಯಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಹೆಚ್. ಹರೀಶ್ ಪರ ಮತಯಾಚಿಸಿ ಮಾತನಾಡಿದರು. 'ರಾಜ್ಯದ ಜನತೆ ನೆಮ್ಮದಿಯಿಂದ ಬದುಕುತ್ತಿಲ್ಲ. ಯುವಕರಿಗೆ ಉದ್ಯೋಗವಿಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲದಂತಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯಕ್ಕೆ ಬಂದು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ. ಚುನಾವಣೆ ನಂತರ ಅವರು ನಿಮ್ಮ ಕಷ್ಟ ಕೇಳಲು ಬರುವುದಿಲ್ಲ ಎಂದರು.
ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ರೈತರು ಬೆಳೆದ 58 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರುವುದೇ ನಮ್ಮ ಉದ್ದೇಶ ಎಂದರು.
ಸಿ.ಎಂ. ಸಿದ್ದರಾಮಯ್ಯ 8,160 ಕೋಟಿ ರೈತರ ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಇದುವರೆಗೂ ರೈತರ ಅಕೌಂಟ್ಗೆ ಹಣ ಬಂದಿಲ್ಲ. ಜೂನ್ ತಿಂಗಳಲ್ಲಿ ಸಾಲ ತಿರುವಳಿ ಸಂದರ್ಭದಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆಗ ಸಿದ್ದರಾಮಯ್ಯ ಸರ್ಕಾರ ಇರುತ್ತಾ ಎಂದು ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಮೇ.17ರಂದು ಕಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇವೆ ಎನ್ನುತ್ತಿದ್ದಾರೆ. ಸಿ.ಎಂ ಸಿದ್ದರಾಮಯ್ಯ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ನಾನೆಲ್ಲೂ ಸಿ.ಎಂ ಆಗುತ್ತೇನೆಂದು ಹೇಳಿಲ್ಲ ಎಂದ ಅವರು, ಜೆಡಿಎಸ್ಗೆ ಒಂದು ಬಾರಿ ಅಧಿಕಾರ ಕೊಡಿ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ನಲ್ಲಿರುವ ರೈತರ ಸಾಲಮನ್ನಾ ಹಾಗೂ ಸ್ತ್ರೀಶಕ್ತಿ ಸಂಘಗಳಲ್ಲಿರುವ 4,300 ಕೋಟಿ ಮಹಿಳೆಯರ ಸಾಲಮನ್ನಾ ಮಾಡುವುದಾಗಿ ತಿಳಿಸಿದರು.
ಕೃಷಿಸಾಲ, ಕೃಷಿನೀತಿ, ಕಾಫಿಬೆಳೆಗಾರರ ಹಿತಕಾಯುವುದರೊಂದಿಗೆ ಸ್ವಸಹಾಯ ಗುಂಪುಗಳ ಮೂಲಕ ಗುಡಿ ಕೈಗಾರಿಕೆ ಉತ್ತೇಜನ, 65 ವರ್ಷ ಮೇಲ್ಪಟ್ಟ ಹಿರಿಯರಿಗೆ ತಿಂಗಳಿಗೆ ಐದು ಸಾವಿರ ಪಿಂಚಣಿ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ, ಆರೈಕೆಗೆ ಆರು ತಿಂಗಳಿಂದ 12 ತಿಂಗಳ ವರೆಗೆ 36 ಸಾವಿರ, ಐದು ಸಾವಿರಕ್ಕಿಂತ ಕಡಿಮೆ ಆದಾಯದವರಿಗೆ ಜೀವನ ಆಧಾರಕ್ಕೆ ತಿಂಗಳಿಗೆ ಐದು ಸಾವಿರ ರೂ. ನೀಡಲಾಗುವುದು ಎಂದರು.
ಕಾಂಗ್ರೆಸ್ಸಿಗರು ಜೆಡಿಎಸ್ ಬಿಜೆಪಿಯ ಬಿ.ಟೀಮ್, ಬಿಜೆಪಿಯವರು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ಜೆಡಿಎಸ ಯಾರ ಪರ ಹೇಳಿ ಎಂದು ರಾಹುಲ್ ಗಾಂಧಿ ದೇವೇಗೌಡರನ್ನು ಕೇಳುತ್ತಿದ್ದಾರೆ. ನಾವು ಯಾರ ಪರಾನೂ ಇಲ್ಲ. ಆರೂವರೆ ಕೋಟಿ ಕನ್ನಡಿಗರ ಪರ. ನಾನು ರಾಹುಲ್ ಗಾಂಧಿಯ ಗುಲಾಮ ಅಲ್ಲ, ಆರುವರೆ ಕೋಟಿ ಜನತೆಯ ಗುಲಾಮ ಎಂದು ತಿರುಗೇಟು ನೀಡಿದರು.
ಸಂವಿಧಾನ ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಈಗ ಮಹಾದಾಯಿ ನೀರು ಹಂಚಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಹೇಮಾವತಿ, ನೇತ್ರಾವತಿ ನದಿ ಜೋಡಣೆ ಬಗ್ಗೆ ಮೇ.9ಕ್ಕೆ ಜಿಲ್ಲೆಗೆ ಬಂದಾಗ ಮಾತನಾಡಬಹುದು. 11 ವರ್ಷದಿಂದ ಕರಗಡ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಕಾಂಗ್ರೆಸ್ ಹಾಗೂ ಬಿಜೆಪಿಗರು ಕರಗಡ ಭಾಗದ ರೈತರಿಗೆ ನೀರು ಕೊಡುತ್ತಾರ ಎಂದು ಪ್ರಶ್ನಿಸಿದರು.
ಸೀರೆ, ಮಿಕ್ಸಿ, ಹೆಂಡ ಹಂಚಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಬಿಜೆಪಿಗೆ ಮತಹಾಕಿ ನಿಮ್ಮ ಕುಟುಂಬವನ್ನು ಹಾಳು ಮಾಡಿಕೊಳ್ಳಬೇಡಿ. ಎಸ್.ಎಲ್. ಧಮೇಗೌಡ, ಬೋಜೆಗೌಡ ಮಾರಾಟವಾಗಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದಾರೆ. ಅವರು ಯಾರಿಗೂ ಮಾರಾಟವಾಗಿಲ್ಲ. ಇಂತಹ ಅಪಪ್ರಚಾರ ನಿಲ್ಲಿಸಿ, ಮೂರು ಬಾರಿ ಶಾಸಕರಾಗಿರುವ ಸಿ.ಟಿ ರವಿಯನ್ನು ಸೋಲಿಸುವ ಉದ್ದೇಶದಿಂದಲೇ ಬಿ.ಹೆಚ್ ಹರೀಶ್ನನ್ನು ಕಣಕ್ಕಿಳಿಸಲಾಗಿದೆ ಎಂದರು.
ಜೆಡಿಎಸ್ ಮುಖಂಡ ಎಸ್.ಎಲ್. ಧಮೇಗೌಡ ಮಾತನಾಡಿ, ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಕ್ಷೇತ್ರದ ಸಖರಾಯಪಟ್ಟಣ, ಲಖ್ಯಾ ಭಾಗಕ್ಕೆ ಕರಗಡ ಏತ ನೀರಾವರಿ ಯೋಜನೆ ನೀರು ಹರಿಸಲು ಮತ್ತು ಐಯ್ಯನಕೆರೆ, ಮದಗದ ಕೆರೆಗೆ ನೀರು ತುಂಬಿಸಿ ಈ ಭಾಗದ ಸಮಸ್ಯೆ ಪರಿಹಾಕ್ಕೆ ಕುಮಾರಸ್ವಾಮಿಯವರು ಬದ್ಧವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್, ಜೆಡಿಎಸ್ ಮುಖಂಡರಾದ ಎಸ್.ಎಲ್. ಧಮೇಗೌಡ, ಬೋಜೇಗೌಡ, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಹೆಚ್. ಹೆಚ್. ದೇವರಾಜ್, ಹೊಲದಗದ್ದೆ ಗಿರೀಶ್ ಇದ್ದರು.







