ಸುರತ್ಕಲ್ : ಸಿಪಿಎಂ ಮುಖಂಡನ ಗೋದಾಮಿಗೆ ದುಷ್ಕರ್ಮಿಗಳಿಂದ ಬೆಂಕಿ
ಮಂಗಳೂರು, ಮೇ 7: ಸುರತ್ಕಲ್ನಲ್ಲಿರುವ ಸಿಪಿಎಂ ಪಕ್ಷದ ನಾಯಕನ ಗೋದಾಮಿಗೆ ದುಷ್ಕರ್ಮಿಗಳು ಕಳೆದ ಎರಡು ರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸುರತ್ಕಲ್ನ ಕುಳಾಯಿಗುಡ್ಡೆಯಲ್ಲಿ ಸಿಪಿಎಂ ಪಕ್ಷದ ಹಿರಿಯ ನಾಯಕ ಶ್ರೀನಾಥ್ ಕುಲಾಲ್ ಗಾಜಿನ ಮಳಿಗೆ ಹಾಗೂ ಗೋದಾಮು ಹೊಂದಿದ್ದು, ಇದಕ್ಕೆ ಶನಿವಾರ ಮತ್ತು ರವಿವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಭಾಗಶಃ ಹಾನಿಯಾಗಿದೆ.
ಶನಿವಾರ ರಾತ್ರಿ ದುಷ್ಕರ್ಮಿಗಳು ಮಳಿಗೆ ಮತ್ತು ಗೋದಾಮಿನ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರೆ ರವಿವಾರ ರಾತ್ರಿ ಅಂಗಡಿಯ ಬಾಗಿಲನ್ನು ತೂತು ಮಾಡಿ ಬೆಂಕಿ ಹಚ್ಚಿದ್ದಾರೆ.
ಶನಿವಾರ ರಾತ್ರಿ ಪಕ್ಕದ ಪೊಲೀಸ್ ಚೆಕ್ಪೋಸ್ಟ್ನವರು ಗಮನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಮೂಲಕ ಬೆಂಕಿ ನಂದಿಸಿದ್ದರು ಎನ್ನಲಾಗಿದೆ. ದುಷ್ಕರ್ಮಿಗಳು ರವಿವಾರ ರಾತ್ರಿ ಕೂಡ ಈ ಕೃತ್ಯ ಎಸಗಿದ್ದು, ಪೆಟ್ರೋಲ್ ಸಹಿತ ಕ್ಯಾನ್ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಸಿಪಿಎಂ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶ್ರೀನಾಥ್ ಕುಲಾಲ್ ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹತಾಶಗೊಂಡ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ದುಷ್ಕರ್ಮಿಗಳ ಈ ಕೃತ್ಯವನ್ನು ಮುನೀರ್ ಕಾಟಿಪಳ್ಳ ಖಂಡಿಸಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.