ಏಕನಿವೇಶನ ತೊಡಕು ನಿವಾರಣೆ: ಪ್ರೇಮಾನಂದ ಭರವಸೆ
ಮಂಗಳೂರು, ಮೇ 7: ಮುಂದಿನ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕನಿವೇಶನ ಅನುಮೋದನೆಯಲ್ಲಿದ್ದ ತೊಡಕುಗಳನ್ನು ನಿವಾರಿಸುವ ಹಾಗೂ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಕಾರ್ಯ ನಡೆಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಅವರ ‘ನನ್ನ ಮಂಗಳೂರು ನನ್ನ ವಚನ’ ಎಂಬ ಪ್ರಣಾಳಿಕೆ ಬಿಡುಗಡೆಗೊಂಡಿದೆ. ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಕರ್ನಾಟಕ ಪ್ಲಾಟ್ ಅಪ್ರೂವಲ್ ರೂಲ್ಸ್ 2017ರ ಡ್ರ್ಟಾನಲ್ಲಿ ಕೆಲವು ಕೊರತೆಗಳಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು.
ಅಭಿವೃದ್ಧಿ ನಕ್ಷೆ, ಬಡಾವಣೆ ನಕ್ಷೆಗೆ ಫ್ಲ್ಯಾಟ್ ಅಪ್ರೂವಲ್ ನಿಯಮಾವಳಿ, ವಲಯ ನಿಯಂತ್ರಣ ನಿಯಮಾವಳಿ ಸರಳಗೊಳಿಸಲಾಗುವುದು, ಫ್ಲ್ಯಾಟ್ ಅಪ್ರೂವಲ್ ನಿಯಮಾವಳಿ, ವಲಯ ನಿಯಂತ್ರಣ ನಿಯಮಾವಳಿಯಲ್ಲಿ ಬದಲಾವಣೆ ತಂದು ನಿವೇಶನ ಮಂಜೂರಾತಿಗಾಗಿ ಸಲ್ಲಿಸಬೇಕಾಗಿರುವ ಶೇ. 15 ದಂಡ ಪಾವತಿ ಕೈಬಿಡಲು ಒತ್ತಾಯಿಸಲಾಗುವುದು. ಕೇಂದ್ರ ಸರ್ಕಾರದ ರೇರಾ ಕಾನೂನಿಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಯ ತಪ್ಪುಗಳನ್ನು ಸರಿಪ ಡಿಸಲಾಗುವುದು ಎಂದು ಪ್ರೇಮಾನಂದ ಶೆಟ್ಟಿ ತಿಳಿಸಿದರು. ಬಿಜೆಪಿ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಶಿವರಾಮ ಮಣಿಯಾಣಿ ಉಪಸ್ಥಿತರಿದ್ದರು.