ಎಸೆಸೆಲ್ಸಿ: ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ತಾಲೂಕು ಮೇಲುಗೈ
ಉಡುಪಿ, ಮೇ 7: ಸೋಮವಾರ ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಸತತ ಎರಡನೇ ವರ್ಷವೂ ಆಗ್ರಸ್ಥಾನವನ್ನು ಉಳಿಸಿಕೊಂಡ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ತಾಲೂಕು ಉಳಿದ ನಾಲ್ಕು ತಾಲೂಕುಗಳನ್ನು ಹಿಂದಿಕ್ಕಿ ಮೇಲುಗೈ ಸಾಧಿಸಿದೆ.
ಕುಂದಾಪುರ ತಾಲೂಕಿನಿಂದ ಪರೀಕ್ಷೆಗೆ ಹಾಜರಾದ 2373 ವಿದ್ಯಾರ್ಥಿಗಳಲ್ಲಿ 2140 ಮಂದಿ ತೇರ್ಗಡೆಗೊಂಡಿದ್ದು ಶೇ.90.18 ಫಲಿತಾಂಶ ಬಂದಿದೆ. ನಂತರದ ಸ್ಥಾನ ಕಾರ್ಕಳ ತಾಲೂಕಿನದ್ದಾಗಿದೆ. ಇಲ್ಲಿ 2632 ಮಂದಿಯಲ್ಲಿ 2354 ಮಂದಿ ಪಾಸಾಗಿ ಶೇ.89.44 ಫಲಿತಾಂಶ ಬಂದಿದೆ. ಬ್ರಹ್ಮಾವರ ತಾಲೂಕಿನಲ್ಲಿ ಪರೀಕ್ಷೆ ಬರೆದ 2665 ಮಂದಿಯಲ್ಲಿ 2355 (ಶೇ.88.37) ಮಂದಿ ತೇರ್ಗಡೆಗೊಂಡಿದ್ದರೆ, ಉಡುಪಿ ತಾಲೂಕಿನಲ್ಲಿ 3294 ಮಂದಿಯಲ್ಲಿ 2883 ಮಂದಿ (ಶೇ.87.47) ಉತ್ತೀರ್ಣರಾಗಿದ್ದಾರೆ. ಬೈಂದೂರು ತಾಲೂಕಿನಲ್ಲಿ 2019 ಮಂದಿ ಪರೀಕ್ಷೆ ಬರೆದು 1718 (ಶೇ.85.09) ಮಂದಿ ತೇರ್ಗಡೆಗೊಂಡಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 12,985 ಮಂದಿ ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 11,450 ಮಂದಿ ತೇರ್ಗಡೆಗೊಂಡಿದ್ದು, ಶೇ.88.18ರ ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲೇ ಅಗ್ರಸ್ಥಾನಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶೇಷಶಯನ ಅವರು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಜಿಲ್ಲೆಯ ಫಲಿತಾಂಶದ ಅಂಕಿಅಂಶದಲ್ಲಿ ವಿವರಿಸಲಾಗಿದೆ.
ಪರೀಕ್ಷೆ ಬರೆದ 13,185 ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 11,642 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 6598 ಬಾಲಕರಲ್ಲಿ 5636 ಮಂದಿ ತೇರ್ಗಡೆಗೊಂಡಿದ್ದರೆ (ಶೇ.85.42) ಹಾಗೂ 6587 ಬಾಲಕಿಯರಲ್ಲಿ 6006 ಮಂದಿ ಉತ್ತೀರ್ಣರಾಗಿ ಶೇ.91.18 ಫಲಿತಾಂಶ ಬಂದಿದೆ. ಇನ್ನುಳಿದಂತೆ ಶೇ.32.16ರಷ್ಟು ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಗೊಂಡಿ ದ್ದರೆ, ಶೇ.8.44ರಷ್ಠು ಖಾಸಗಿ ಹಾಗೂ ಶೇ.15.75ಖಾಸಗಿ ಪುನರಾರ್ವತಿತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದವರು ನುಡಿದರು.
ಸರಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆದ 5863 ವಿದ್ಯಾರ್ಥಿಗಳಲ್ಲಿ 5028 ಮಂದಿ (ಶೇ.85.75) ಪಾಸಾಗಿದ್ದಾರೆ. ಇವರಲ್ಲಿ ಬಾಲಕರು ಶೇ.82.4 ಹಾಗೂ ಬಾಲಕಿಯರು ಶೇ.89ರಷ್ಟು ತೇರ್ಗಡೆಯಾಗಿದ್ದಾರೆ. ಇನ್ನು ಅನುದಾನಿತ ಶಾಲೆಗಳಲ್ಲಿ 3429 ವಿದ್ಯಾರ್ಥಿಗಳಲ್ಲಿ 2908 ಮಂದಿ (ಶೇ.84.80) ತೇರ್ಗಡೆಯಾಗಿದ್ದಾರೆ. ಇಲ್ಲಿ ಬಾಲಕರು ಶೇ.81.84 ಹಾಗೂ ಬಾಲಕಿಯರು ಶೇ.87.82ರಷ್ಟು ಪಾಸಾಗಿದ್ದಾರೆ.
ಅನುದಾನ ರಹಿತ ಶಾಲೆಗಳಲ್ಲಿ 3893 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 3706 ಮಂದಿ (ಶೇ.95.17)ತೇರ್ಗಡೆಗೊಂಜಡಿದ್ದಾರೆ. ಬಾಲಕರು ಶೇ. 92.91 ಹಾಗೂ ಬಾಲಕಿಯರು ಶೇ.97.58ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಎರಡು ಸರಕಾರಿ ಹಾಗೂ ಒಂದು ಅನುದಾನಿತ ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶವನ್ನು ಪಡೆದಿವೆ. 84 ಸರಕಾರಿ, 49 ಅನುದಾನಿತ ಹಾಗೂ 73 ಅನುದಾನ ರಹಿತ ಶಾಲೆಗಳು ಶೇ.80ರಿಂದ 100ರಷ್ಟು ಫಲಿತಾಂಶವನ್ನು ಪಡೆದಿದ್ದರೆ, 22 ಸರಕಾರಿ, 19 ಅನುದಾನಿತ, 4 ಅನುದಾನ ರಹಿತ ಶಾಲೆಗಳು ಶೇ.60ರಿಂದ 80ರಷ್ಟು, 3 ಸರಕಾರಿ, ಮೂರು ಅನುದಾನಿತ ಹಾಗೂ ಒಂದು ಅನುದಾನ ರಹಿತ ಶಾಲೆಗಳು ಶೇ.40ರಿಂದ 60ರಷ್ಟು ಫಲಿತಾಂಶವನ್ನು ಪಡೆದಿವೆ.
ಜಿಲ್ಲೆಯ 1086 ವಿದ್ಯಾರ್ಥಿಗಳು ಶೇ.90ರಿಂದ 100, 2716 ವಿದ್ಯಾರ್ಥಿಗಳು ಶೇ.80ರಿಂದ 90, 3282 ವಿದ್ಯಾರ್ಥಿಗಳು ಶೇ.70ರಿಂದ 80, 2844 ವಿದ್ಯಾರ್ಥಿಗಳು ಶೇ.60ರಿಂದ 70, 1529 ವಿದ್ಯಾರ್ಥಿಗಳುಇ ಶೇ.50ರಿಂದ 60 ಹಾಗೂ 185 ಮಂದಿ ಶೇ.35ರಿಂದ 50ರಷ್ಟು ಅಂಕಗಳನ್ನು ಪಡೆದಿದ್ದಾರೆ.
ವಿಷಯವಾರು ಫಲಿತಾಂಶದಲ್ಲಿ ಪ್ರಥಮ ಭಾಷೆಯಲ್ಲಿ 13,184 ಮಂದಿಯಲ್ಲಿ 12,876 (ಶೇ.97.66), ದ್ವಿತೀಯ ಭಾಷೆಯಲ್ಲಿ 13,171 ಮಂದಿಯಲ್ಲಿ 12,460 (ಶೇ.94.60), ತೃತೀಯ ಭಾಷೆಯಲ್ಲಿ 13,172 ಮಂದಿಯಲ್ಲಿ 12,845 (ಶೇ.97.51) ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಗಣಿತ ಪರೀಕ್ಷೆ ಬರೆದ 13,185 ಮಂದಿಯಲ್ಲಿ 12,436 (ಶೇ.94.31), ವಿಜ್ಞಾನದಲ್ಲಿ 13,185 ಮಂದಿಯಲ್ಲಿ 12,278 (ಶೇ.93.12) ಹಾಗೂ ಸಮಾಜ ವಿಜ್ಞಾನದಲ್ಲಿ 13,185 ಮಂದಿಯಲ್ಲಿ 12,440 (ಶೇ.94.3 4) ವಿದ್ಯಾರ್ಥಿಗಳು ಇತ್ತೀರ್ಣರಾಗಿದ್ದಾರೆ.
ನಗರ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯಲ್ಲಿ ನಗರ ವಿದ್ಯಾರ್ಥಿಗಳು ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳನ್ನು ಉತ್ತೀರ್ಣತೆಯಲ್ಲಿ ಹಿಮ್ಮೆಟ್ಟಿಸಿದ್ದಾರೆ. ಪರೀಕ್ಷೆ ಬರೆದ 10,379 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 9056 ಮಂದಿ ಉತ್ತೀರ್ಣರಾಗಿ ಶೇ.87.25 ಫಲಿತಾಂಶ ಬಂದಿದ್ದರೆ, ನಗರ ಪ್ರದೇಶದಿಂದ 2806 ಮಂದಿ ಪರೀಕ್ಷೆಗೆ ಕುಳಿತು 2586 (ಶೇ.92.16) ಮಂದಿ ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಬರೆದ 7098 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ 5810 ಮಂದಿ (ಶೇ.81.85) ಹಾಗೂ 6087 ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಲ್ಲಿ 5832 (ಶೇ.95.81) ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ ಪರಿಶಿಷ್ಟ ಜಾತಿಯ 1010 ಮಂದಿಯಲ್ಲಿ 781, ಪರಿಶಿಷ್ಟ ಪಂಗಡದ 711 ಮಂದಿಯಲ್ಲಿ 600, ಪ್ರವರ್ಗ-1ರ 1658 ಮಂದಿಯಲ್ಲಿ 1457, 2ಎಯ 5351 ಮಂದಿಯಲ್ಲಿ 4830, 2ಬಿಯ 1497 ಮಂದಿಯಲ್ಲಿ 1226, 3ಎಯ 162 ಮಂದಿಯಲ್ಲಿ 141 ಮಂದಿ, 3ಬಿಯ 1922 ಮಂದಿಯಲ್ಲಿ 1773, ಇತರೆ ವರ್ಗದ 874 ಮಂದಿಯಲ್ಲಿ 834 ಮಂದಿ ತೇರ್ಗಡೆಗೊಂಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಗೋಪಾಲಕೃಷ್ಣ ಹೆಗ್ಡೆ ಅಗ್ರಸ್ಥಾನ
ಕೊಲ್ಲೂರಿನ ಶ್ರೀಮುಕಾಂಬಿಕಾ ದೇವಸ್ಥಾನ ಹೈಸ್ಕೂಲ್ನ ಗೋಪಾಲಕೃಷ್ಣ ಹೆಗ್ಡೆ ಎಂ. ಅವರು ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ಗರಿಷ್ಠ 625ರಲ್ಲಿ 618 ಅಂಕಗಳನ್ನು ಗಳಿಸಿದ್ದಾರೆ. 613 ಅಂಕಗಳಿಸಿದ ಶಿರ್ವ ಸೈಂಟ್ಮೇರೀಸ್ ಪ.ಪೂ.ಕಾಲೇಜಿನ ಸುರಕ್ಷಾ ಎಸ್.ಶೆಣೈ ಎರಡನೇ ಸ್ಥಾನದಲ್ಲಿದ್ದಾರೆ. ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢ ಶಾಲೆಯ ಆದಿತ್ಯ 612 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
611 ಅಂಕಗಳಿಸಿರುವ ಮಾವಿನಕಟ್ಟೆ ಶ್ರೀಮುಕಾಂಬಿಕಾ ಟೆಂಪಲ್ ಪ್ರೌಢ ಶಾಲೆಯ ಹರಿಪ್ರದಾ ಹಾಗೂ 610 ಅಂಕ ಪಡೆದ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಕಮಲಶಿಲೆಯ ಸುಷ್ಮಿತಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.
ಆಂಗ್ಲ ಮಾದ್ಯಮದಲ್ಲಿ ಮೇಧಾ ಭಟ್ (624), ಮನೋಜ್ ಮಲ್ಯ (623) ಮೊದಲೆರಡು ಸ್ಥಾನದಲ್ಲಿದ್ದರೆ, ಕೊಟೇಶ್ವರ ಸರಕಾರಿ ಜೂನಿಯರ್ ಕಾಲೇಜಿನ ಸುಜಾತ ಭಟ್, ಕುಂದಾಪುರ ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಲ್ಪಾ ಎಸ್.ಪಿ. ಹಾಗೂ ಬ್ರಹ್ಮಾವರ ಎಸ್ಎಂಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವೈಷ್ಣವಿ ಡಿ.ಶೆಣೈಯ ತಲಾ 622 ಅಂಕಗಳಿಸಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.