ಮಚ್ಚಿನಿಂದ ದಾಳಿ: ಗಾಯ
ಮಂಗಳೂರು, ಮೇ 8: ಕ್ಷುಲ್ಲಕ ಕಾರಣದಿಂದ ನಗರದ ಬೊಕ್ಕಪಟ್ಣ ನಿವಾಸಿಯೊಬ್ಬರಿಗೆ ಇಬ್ಬರು ಮಚ್ಚಿನಿಂದ ದಾಳಿ ನಡೆಸಿ ಪರಾರಿಯಾದ ಘಟನೆ ಕುದ್ರೋಳಿ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ದಾಳಿಯಿಂದ ಗಾಯಗೊಂಡವರನ್ನು ದೀಪಕ್ ಕುಮಾರ್(45) ಎಂದು ಗುರುತಿಸಲಾಗಿದೆ. ಮೀನುಗಾರಿಕೆ ಸಂಘವೊಂದರ ಅಧ್ಯಕ್ಷರಾಗಿದ್ದಾರೆ. ಬೋಳೂರು 27ನೆ ವಾರ್ಡ್ನ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಮನೆಯಿಂದ ಬೋಟ್ ಯಾರ್ಡ್ಗೆ ತೆರಳುತ್ತಿದ್ದ ಸಂದರ್ಭ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ದಾಳಿಗೆ ಯತ್ನಿಸಿದ್ದಾರೆ ಈ ಸಂದರ್ಭ ದೀಪಕ್ರ ತಪ್ಪಿಸಿಕೊಂಡಿದ್ದು, ಬೆರಳಿಗೆ ಗಾಯವಾಗಿದೆ. ದೀಪಕ್ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಕ್ಕಪಟ್ಣ ಬಳಿ ಕೆಲವು ಹುಡುಗರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಹೇಳಲಾಗಿದ್ದು, ಇದನ್ನು ದೀಪಕ್ ಕುಮಾರ್ ವಿರೋಧಿಸುತ್ತಿದ್ದರು. ಅಲ್ಲದೆ, ಈ ಅಕ್ರಮ ಚಟುವಟಿಕೆಗಳ ಬಗ್ಗೆ ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿ ದೀಪಕ್ ಕುಮಾರ್ರ ಮೇಲೆ ಹುಡುಗರಿಗೆ ಕೋಪ ಇದ್ದುದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.