ಸಿದ್ದರಾಮಯ್ಯ ಸರಕಾರದಿಂದ ಮೀನುಗಾರರ ನಿರ್ಲಕ್ಷ್ಯ: ಆದಿತ್ಯನಾಥ ಆರೋಪ
ಕುಂದಾಪುರ, ಮೇ 8: ಕರ್ನಾಟಕ ಸರಕಾರ ಮೀನುಗಾರರ ನಿರ್ಲಕ್ಷ್ಯ ಮಾಡಿದೆ. ಸಿದ್ದರಾಮಯ್ಯ ಸರಕಾರ ರಾಜ್ಯದ ಮೀನುಗಾರರ ಹಿತ ಕಾಯಲಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಪರವಾಗಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡು ತಿದ್ದರು. ಕರಾವಳಿಯ ಯುವಕರಿಗೆ ಸುರಕ್ಷೆ ನೀಡಲು ರಾಜ್ಯ ಸರಕಾರ ವಿಫಲವಾಗಿದೆ. ಕರ್ನಾಟಕ ಕರಾವಳಿಯನ್ನು ಅಭಿವೃದ್ಧಿ ಮಾಡುವ ಬದಲು ಯುವಕರ ಹತ್ಯೆ ಮಾಡಲಾಗುತ್ತಿದೆ ಎಂದವರು ಹೇಳಿದರು.
ಬಂದರು ಅಭಿವೃದ್ಧಿ ಮಾಡಲು ಸರಕಾರಕ್ಕೆ ಆಸಕ್ತಿಯಿಲ್ಲ. ಉದ್ಯೋಗ ಸೃಷ್ಟಿ ಮಾಡಿಲ್ಲ. ಕೇಂದ್ರದ ಹಣ ಬಳಕೆ ಮಾಡದೆ ದರೋಡೆ ಮಾಡುತ್ತಿದೆ ಎಂದು ದೂರಿದ ಯೋಗಿ, ಮೋದಿ ಪ್ರಧಾನಿಯಾದ ನಂತರ ದೇಶದ ಚಿತ್ರಣ ಬದಲಾಗಿದೆ. ಅನುದಾನದ ಪ್ರತಿ ಪೈಸೆ ಬಡವರ ಸೇವೆಗೆ ದೊರಕುತ್ತಿದೆ. ಬಡವರಿಗೆ ಕೇಂದ್ರ ಸರ್ಕಾರ ಧ್ವನಿಯಾಗಿದೆ ಎಂದರು.
ಶಿವಾಜಿ ಜಯಂತಿಗೆ ಕರ್ನಾಟಕದಲ್ಲಿ ಅವಕಾಶವಿಲ್ಲ ಆದರೆ ಟಿಪ್ಪುಜಯಂತಿಗೆ ಕಾಂಗ್ರೆಸ್ ಸರಕಾರಕ್ಕೆ ಆಸಕ್ತಿ. ಶಿವಾಜಿ, ಹನುಮ ನಮ್ಮ ಆದರ್ಶ, ಟಿಪ್ಪು ಕಾಂಗ್ರೆಸಿಗರ ಆದರ್ಶ ಎಂದು ಟೀಕಿಸಿದರು. ನಾನು ಕರ್ನಾಟಕಕ್ಕೆ ಬಂದ್ರೆ ನಿಮಗೇನು ಕಷ್ಟ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಆದಿತ್ಯನಾಥ್, ಇಲ್ಲಿನ ರೈತ, ಯುವಕ ಸಂಕಷ್ಟದಲ್ಲಿದ್ದಾನೆ. ಅದಕ್ಕಾಗಿ ನಾನು ಕರ್ನಾಟಕಕ್ಕೆ ಬರುತ್ತೇನೆ. ಬಿಜೆಪಿಯ ಕೆಲಸಗಳ್ನು ಅವರಿಗೆ ತಿಳಿಸುತ್ತೇನೆ ಎಂದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ರೆ ಇಂಜೆನ್ಗೆ ಡಬ್ಬಲ್ ಶಕ್ತಿ ಬರುತ್ತೆ. ಡಬ್ಬಲ್ ಇಂಜೆನ್ ಗಾಡಿ ಓಡಿಸಲು ಬಿಜೆಪಿಗೆ ಬಲ ನೀಡಿ. ಉತ್ತರ ಪ್ರದೇಶದಲ್ಲಿ ಮಾಫಿಯಾ, ಜಿಹಾದಿಗಳಿಗೆ ಕೊನೆ ಹಾಡಿದ್ದೇವೆ. ರಾಜ್ಯದಲ್ಲೂ ಬಿಜೆಪಿ ಬಂದ್ರೆ ಗೂಂಡಾರಾಜ್ ಕೊನೆಯಾಗುತ್ತದೆ ಎಂದು ಹೇಳಿದರು.