ಧರ್ಮಸ್ಥಳ: ಹಾವೇರಿಯ ಉದ್ಯಮಿ ದಂಪತಿ ಆತ್ಮಹತ್ಯೆ

ಬೆಳ್ತಂಗಡಿ, ಮೇ 8: ಹಾವೇರಿ ಸಮೀಪದ ಬ್ಯಾಡಗಿಯ ಉದ್ಯಮಿ ಹಾಗೂ ಅವರ ಪತ್ನಿ ಧರ್ಮಸ್ಥಳದ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಬ್ಯಾಡಗಿಯ ಉದ್ಯಮಿ ಹಾಗೂ ವರ್ತಕರ ಸಂಘದ ಅಧ್ಯಕ್ಷ ಮೃತ್ಯುಂಜಯ(60) ಹಾಗೂ ಅವರ ಪತ್ನಿ ನೇತ್ರಾವತಿ ಎಂದು ಗುರುತಿಸಲಾಗಿದೆ.
ಇವರು ಎರಡು ದಿನಗಳ ಹಿಂದೆ ತಮ್ಮ ಕಾರಿನಲ್ಲಿ ಚಾಲಕನೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಸೋಮವಾರ ದೇವಳ ಸಂದರ್ಶಿಸಿ ಮುಗಿಸಿ ಊರಿಗೆ ಹಿಂದಿರುಗಲು ಸಿದ್ಧರಾಗಿದ್ದರು. ಬಳಿಕ ಪ್ರಯಾಣವನ್ನು ಹಠಾತ್ ರದ್ದುಪಡಿಸಿ ಕೊಠಡಿಯಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗಿನಿಂದ ಇವರ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಸಂಜೆಯವರೆಗೂ ಕಾದ ಚಾಲಕ ಬಳಿಕ ವಸತಿ ಗೃಹದವರಿಗೆ ಮಾಹಿತಿ ನೀಡಿದರು. ಬಳಿಕ ಕೊಠಡಿಯನ್ನು ತೆರೆದಾಗ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೊಠಡಿಯಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ಇಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕ್ಷಮೆ ಕೋರಿರುವುದಲ್ಲದೆ, ಈಗಿನ ರಾಜಕೀಯ ಸ್ಥಿತಿಗತಿಗಳನ್ನು ಹಾಗೂ ಹಣದ ಹಂಚಿಕೆಯನ್ನು ನೋಡಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.