ಉಡುಪಿ ಮೂಲದ ವಿಭಾಲಿ ಶೆಟ್ಟಿಗೆ ‘ಶೇಕ್ ಹಮ್ದಾನ್ ಪ್ರಶಸ್ತಿ’

ಉಡುಪಿ, ಮೇ 9: ಸಂಯುಕ್ತ ಅರಬ್ ರಾಷ್ಟ್ರ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ‘ಹಿಸ್ ಹೈನೆಸ್ಸ್ ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಖ್ತೋಮ್’ 2017-18ನೆ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಯನ್ನು ಉಡುಪಿ ಮೂಲದ, ಶಾರ್ಜಾದ ಅವರ್ ಓನ್ ಇಂಗ್ಲಿಷ್ ಸ್ಕೂಲ್ ನ ಎಂಟನೇ ತರಗತಿಯ ವಿದ್ಯಾರ್ಥಿನಿ ವಿಭಾಲಿ ಶೆಟ್ಟಿ ಪಡೆದುಕೊಂಡಿದ್ದಾರೆ.
ವಿಭಾಲಿ ಶೆಟ್ಟಿ ಶಾರ್ಜಾದ ಉದ್ಯಮಿ ಉಡುಪಿಯ ಪ್ರಸಾದ್ ಶೆಟ್ಟಿ ಹಾಗೂ ವಾಸ್ತುಶಿಲ್ಪಿ ಸುರಕ್ಷಾ ಪ್ರಸಾದ್ ಶೆಟ್ಟಿ ದಂಪತಿ ಪುತ್ರಿ. ಯುಎಇಯಲ್ಲಿ 1998ರಲ್ಲಿ ಪ್ರಾರಂಭವಾದ ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಖ್ತೋಮ್ ಪ್ರಶಸ್ತಿಯನ್ನು ಪ್ರಪಂಚದ 25ಲಕ್ಷ ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಈ ದೇಶದ ವಿವಿಧ ಪ್ರಾಂತ್ಯಗಳಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ನೀಡಲಾಗುತ್ತದೆ.
ದುಬೈಯ ಟ್ರೇಡ್ ಸೆಂಟರ್ನ ಶೇಕ್ ರಾಶಿದ್ ಹಾಲ್ ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ದೇಶದ ಹಣಕಾಸು ಸಚಿವ ಹಾಗೂ ದುಬೈಯ ಉಪ ಆಡಳಿತ ಗಾರ ಹಿಸ್ ಹೈನೆಸ್ಸ್ ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಖ್ತೋಮ್, ವಿಭಾಲಿ ಶೆಟ್ಟಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 2009ರಿಂದ ಈ ಪ್ರಶಸ್ತಿ ಯನ್ನು ಯುನೆಸ್ಕೋದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನಾಗಿ ಪರಿಚಯಿಸಲಾಗಿದೆ.
‘ನೃತ್ಯ, ಹಾಡುವುದು, ರೇಖಾಚಿತ್ರ, ಅಬ್ಯಾಕಸ್ ಮತ್ತು ಸಾರ್ವಜನಿಕ ಮಾತುಕತೆ ಮುಂತಾದ ಇತರ ಕೌಶಲ್ಯಗಳಂತಹ ಪಠ್ಯೇತರ ಚಟುವಟಿಕೆಗಳ ಬಗ್ಗೆ ನನ್ನ ಉತ್ಸಾಹವೂ ಮೆಚ್ಚುಗೆಯನ್ನುಗಳಿಸಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕ ಸಾಧನೆ ಏಕೈಕ ಮಾನದಂಡವಲ್ಲವೆಂಬುದು ಇದರಿಂದ ನನಗೆ ತಿಳಿಯಿತು. ಹಮ್ದಾನ್ ಪ್ರಶಸ್ತಿಯು ಉತ್ತಮ ಪ್ರೇರಣೆ ಮತ್ತು ಪ್ರೋತ್ಸಾಹದ ಸಂಕೇತವಾಗಿದೆ ಎಂದು ವಿಭಾಲಿ ಶೆಟ್ಟಿ ತಿಳಿಸಿದ್ದಾರೆ.