ಅಂಪಾರು ಬಳಿ ಕಾರು-ಬೈಕ್ ಢಿಕ್ಕಿ: ಬಿಜೆಪಿ ಮುಖಂಡ ಮೃತ್ಯು

ಶಂಕರನಾರಾಯಣ, ಮೇ 9: ಅಂಪಾರು ಗ್ರಾಮದ ಬಾಳ್ಕಟ್ಟು ಸೇತುವೆಯ ಬಳಿ ಕುಂದಾಪುರ- ಸಿದ್ದಾಫುರ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಕಾರೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೆಳೂರು ನಿವಾಸಿಯಾಗಿರುವ ಕುಂದಾಪುರ ತಾಪಂ ಸದಸ್ಯೆ ಶ್ರೀಲತಾ ಶೆಟ್ಟಿ ಅವರ ಪತಿ, ಗ್ರಾಪಂ ಮಾಜಿ ಸದಸ್ಯ ಮಹೇಶ್ ಹೆಗ್ಡೆ (56) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಶಂಕರ್ ಶೆಟ್ಟಿ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹೇಶ್ ಹೆಗ್ಡೆ ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ತನ್ನ ಬೈಕ್ನಲ್ಲಿ ವಾಪಾಸ್ಸು ಮನೆಗೆ ಹೋಗುತ್ತಿದ್ದರು. ಸಿದ್ದಾಪುರ ಕಡೆಯಿಂದ ಅಂಪಾರು ಕಡೆಗೆ ಹೋಗುತ್ತಿದ್ದ ಇವರ ಬೈಕ್ಗೆ ಎದುರಿನಿಂದ ಬಂದ ರಿಡ್ಝ್ ಕಾರು ಢಿಕ್ಕಿ ಹೊಡೆಯಿತು. ಬಳಿಕ ಮುಂದಕ್ಕೆ ಚಲಿಸಿಕೊಂಡ ಹೋದ ಕಾರು ಹಲಸಿನ ಮರಕ್ಕೆ ಢಿಕ್ಕಿ ಹೊಡೆದು ಚರಂಡಿಯಲ್ಲಿ ಪಲ್ಟಿಯಾಗಿ ಬಿತ್ತೆನ್ನಲಾಗಿದೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಮಹೇಶ್ ಹೆಗ್ಡೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಘಟನೆ ಬಗ್ಗೆ ಮಾಹಿತಿ ಅರಿತು ಪ್ರಚಾರ ಕಾರ್ಯದಲ್ಲಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ತಕ್ಷಣವೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹೇಶ್ ಹೆಗ್ಡೆ ಸಾವಿನ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕುಂದಾಪುರ ಪೇಟೆಯಲ್ಲಿ ನಡೆಯಬೇಕಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪಾದಯಾತ್ರೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.