ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಮೇ 9: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 2.50 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕು ಕಳೆಂಜ ಶಾಖೆಯಲ್ಲಿ ಫಾರೆಸ್ಟರ್ ಆಗಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸಿದ್ದಾಪುರ ಥಾಂಡಾ ನಿವಾಸಿ ಟಿ.ರುದ್ರೇಶ (32) ಹಾಗೂ ಶಾಲೆ ಮನೆ ಅಣ್ಣಯ್ಯ ಗೌಡರ ಪತ್ನಿ ಅಮಿತಾ ಯಾನೆ ದೇವಕಿ (42) ಶಿಕ್ಷೆಗೊಳಗಾದ ಅಪರಾಧಿಗಳು. ದಂಡದ ಮೊತ್ತವನ್ನು ಕೊಲೆಯಾದ ಅಣ್ಣಯ್ಯ ಗೌಡರ ಮೂವರು ಮಕ್ಕಳಿಗೆ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಆದೇಶಿಸಿದೆ.
ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, 50 ಸಾವಿರ ರೂ.ದಂಡ. ದಂಡ ಪಾವತಿಸಲು ತಪ್ಪಿದರೆ 1ವರ್ಷ ಸಜೆ., ಕೊಲೆ ಮಾಡಲು ಒಳಸಂಚು (ಐಪಿಸಿ ಸೆಕ್ಷನ್ 120ಎ) ಪ್ರಕರಣದಲ್ಲಿ ಜೀವಾವಧಿ ಹಾಗೂ 50 ಸಾವಿರ ರೂ.ದಂಡ. ದಂಡ ತಪ್ಪಿದರೆ 1ವರ್ಷ ಸಜೆ. ಸಾಕ್ಷಿ ನಾಶ (ಐಪಿಸಿ ಸೆಕ್ಷನ್ 201) ಪ್ರಕರಣದಲ್ಲಿ 2 ವರ್ಷ ಸಾಮಾನ್ಯ ಸಜೆ, 15 ಸಾವಿರ ರೂ.ದಂಡ, ತಪ್ಪಿದರೆ 6 ತಿಂಗಳು ಸಜೆ, ಸುಳ್ಳು ಸುದ್ದಿ ನೀಡಿರುವುದು (ಐಪಿಸಿ ಸೆಕ್ಷನ್ 203) ಪ್ರಕರಣದಲ್ಲಿ 1 ವರ್ಷ ಸಾಮಾನ್ಯ ಸಜೆ, 10 ಸಾವಿರ ರೂ.ದಂಡ. ತಪ್ಪಿದರೆ 3 ತಿಂಗಳ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು. ದಂಡದ ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಬೇಕು. ಹೆಚ್ಚಿನ ಪರಿಹಾರವನ್ನು ಜಿಲ್ಲಾಧಿಕಾರಿಗೆ ಮನವಿ ಮಾಡಿ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಏನು
2014 ಎ.19ರಂದು ರಾತ್ರಿ 11ಗಂಟೆಗೆ ಕಳೆಂಜ ಗ್ರಾಮದ ಶಾಲೆಮನೆಯಲ್ಲಿ ಆರೋಪಿ ರುದ್ರೇಶ್ ಹಾಗೂ ಅಮಿತಾ ತನ್ನ ಪತಿ ಅಣ್ಣಯ್ಯ ಗೌಡರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದರು. ಅಮಿತಾ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ, ಈ ಪ್ರದೇಶ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ. ಆಕೆ ದೂರಿನಲ್ಲಿ ಮೂವರು ಮುಸುಕುಧಾರಿಗಳು ಮನೆಯ ಮಾಡಿನ ಹಂಚು ತೆಗೆದು ಒಳ ಬರಲು ಪ್ರಯತ್ನಿಸಿ ವಿಫಲರಾಗಿ ಬಳಿಕ ಹಿಂಬದಿಯ ಬಾಗಿಲು ಮುರಿದು ಒಳ ಬಂದು ಗಂಡನಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು. ಈ ಬಗ್ಗೆ ಪೊಲೀಸರು ಸ್ಥಳವನ್ನು ಪರಿಶೀಲಿಸಿ, ತನಿಖೆ ಕೈಗೆತ್ತಿಕೊಂಡಾಗ ಸುಳ್ಳು ದೂರು ಎಂದು ಗಮನಕ್ಕೆ ಬಂದಿತ್ತು. ರುದ್ರೇಶ್ ಮತ್ತು ಅಮಿತಾರ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣಯ್ಯ ಗೌಡರನ್ನು ಇವರಿಬ್ಬರು ಸೇರಿಕೊಂಡು ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ಅವರನ್ನು ಎ.22ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಅವರು ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.