ಕರ್ನಾಟಕ ವಿಧಾನಸಭಾ ಚುನಾವಣೆ: 1.5 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ
ಬೆಂಗಳೂರು, ಮೇ.9: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 50,000 ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಸೇರಿದಂತೆ 1.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ಕಣ್ಗಾವಲಿಟ್ಟು ರಾಜ್ಯದಲ್ಲಿ ಶಾಂತಿಭಂಗವಾಗದಂತೆ ನೋಡಿಕೊಳ್ಳಲು ಸಿಆರ್ಪಿಎಫ್, ಬಿಎಸ್ಎಫ್ ಹಾಗೂ ಐಟಿಬಿಪಿ ಸೇರಿದಂತೆ ವಿವಿಧ ಅರೆಸೇನಾ ಪಡೆಗಳ 520 ತುಕಡಿಗಳನ್ನು ಕೇಂದ್ರ ಗೃಹ ಸಚಿವಾಲಯ ನೇಮಿಸಿದೆ. ಒಂದೇ ಹಂತದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಭದ್ರತಾ ಸಿಬ್ಬಂದಿ ನೋಡಿಕೊಳ್ಳಲಿದ್ದು, ಲಕ್ಷದಷ್ಟಿರುವ ರಾಜ್ಯ ಪೊಲೀಸರು ಜೊತೆ ಕಾರ್ಯನಿರ್ವಹಿಸಲಿದ್ದಾರೆ.
ಬಹುತೇಕ ಅರೆಸೇನಾ ಸಿಬ್ಬಂದಿ ಈಗಾಗಲೇ ರಾಜ್ಯವನ್ನು ತಲುಪಿದ್ದು, ತಮ್ಮನ್ನು ನಿಯೋಜನೆಗೊಳಿಸಿರುವ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಪ್ರತಿಯೊಂದು ತುಕಡಿಯಲ್ಲೂ 100 ಸಿಬ್ಬಂದಿಯಿರಲಿದ್ದಾರೆ.
ರಾಜ್ಯದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ. ರಾಜ್ಯದ 4.96 ಕೋಟಿ ಮತದಾರರು 56,600 ಮತಗಟ್ಟೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮೇ 15ರಂದು ಫಲಿತಾಂಶ ಹೊರಬೀಳಲಿದೆ.