ಪಬ್ ಗಳಲ್ಲಿರುವ ಯುವತಿಯರಿಗೆ ಹಲ್ಲೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ: ವಿಹಿಂಪ ಮುಖಂಡ ಶರಣ್ ಪಂಪ್ ವೆಲ್
“ಬಿಜೆಪಿ ಪರ ನಮ್ಮ ಪ್ರಚಾರ, ಇಲ್ಲಿ ಹಿಂದೂಗಳೇ ಗೆಲ್ಲಬೇಕು”

ಮಂಗಳೂರು, ಮೇ 10: ಪಬ್ ಗಳಲ್ಲಿ ನೃತ್ಯ ಮಾಡುತ್ತಿರುವ, ಮದ್ಯಪಾನ ಮಾಡುತ್ತಿರುವ ಯುವತಿಯರಿಗೆ ಯಾರಾದರೂ ಹಲ್ಲೆ ನಡೆಸಿದರೆ ಅದು ಒಳ್ಳೆಯ ಕೆಲಸವಾಗಿದೆ. ಅದರಲ್ಲೇನೂ ತಪ್ಪಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ಮಂಗಳೂರು) ಕಾರ್ಯದರ್ಶಿ ಶರಣ್ ಪಂಪ್ thequint.com ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಜರಂಗದಳದ ಮಾಜಿ ಮುಖಂಡರಾಗಿರುವ ಶರಣ್, ಸದ್ಯ ಕರ್ನಾಟಕ ವಿಧಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು thequint.com ವರದಿ ಮಾಡಿದೆ.
thequint.com ಜೊತೆ ಮಾತನಾಡಿದ ಶರಣ್ ಪಂಪ್ ವೆಲ್, ನೀವು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡಿದ ಶರಣ್ ಪಂಪ್ ವೆಲ್ ಈ ಕೃತ್ಯಗಳನ್ನು ಸಮರ್ಥಿಸಿ, “ಯಾರಾದರೂ ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಿದರೆ, ಅವರಿಗೆ ಹೊಡೆದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ಯುವತಿ ಪಬ್ ಗೆ ಹೋದರೆ, ಅವಳು ಅಲ್ಲಿ ಮದ್ಯಪಾನ ಮಾಡುತ್ತಾಳೆ ಹಾಗು ನೃತ್ಯ ಮಾಡುತ್ತಾಳೆ. ಈ ಪಬ್ ಗಳಲ್ಲಿ ಸೆಕ್ಸ್ ಮಾಫಿಯಾ ಕೂಡ ನಡೆಯುತ್ತದೆ. ಇದನ್ನೆಲ್ಲಾ ನೋಡಿ ನಾವು ಸುಮ್ಮನೆ ಕೂರಬೇಕಾ?, ಮಂಗಳೂರು ಸಂಸ್ಕೃತಿಯ ನಗರ. ಇಂತಹ ಎಲ್ಲಾ ಕೃತ್ಯಗಳಿಗೆ ಕಡಿವಾಣ ಹಾಕಲು ಯುವಜನರು ಬಯಸುತ್ತಾರೆ” ಎಂದು ಹೇಳಿರುವುದಾಗಿ thequint.com ವರದಿ ಮಾಡಿದೆ.
ಅನೈತಿಕ ಪೊಲೀಸ್ ಗಿರಿಯನ್ನು ‘ಜಾಗೃತಿ’ಗೆ ಹೋಲಿಸಿದ ಅವರು, ಟಿವಿಗಳಲ್ಲಿ ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಜಾಹೀರಾತುಗಳು ಬರುತ್ತವೆ, ಜನರಲ್ಲಿ ಜಾಗೃತಿ ಮೂಡಿಸಲು ಈ ಜಾಹೀರಾತು ಪ್ರಸಾರವಾಗುತ್ತದೆ. ಇದೇ ತಂತ್ರವನ್ನು (ಅನೈತಿಕ ಪೊಲೀಸ್ ಗಿರಿ) ಅವರೂ ಪಾಲಿಸುತ್ತಾರೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ವಿಎಚ್ ಪಿ ಹಾಗು ಬಜರಂಗದಳ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಹಿಂದೂಗಳೇ ಗೆಲ್ಲಬೇಕು ಎಂದು ಶರಣ್ ಇದೇ ಸಂದರ್ಭ ಹೇಳಿದ್ದಾರೆ.