ಬಿಗಿ ಬಂದೋಬಸ್ತ್ನಲ್ಲಿ ನಾಳೆ ರಾಜ್ಯ ವಿಧಾನಸಭಾ ಚುನಾವಣೆ
ರಾಜ್ಯದಲ್ಲಿ 58,302 ಮತಗಟ್ಟೆ; ಹೊರ ರಾಜ್ಯದ ಪೊಲೀಸರ ಬಳಕೆ

ಬೆಂಗಳೂರು, ಮೇ 11: ನಾಳೆ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸಕಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಹೇಳಿದರು.
ಶುಕ್ರವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾನಕ್ಕಾಗಿ 58,302 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 21,464 ಮತಗಟ್ಟೆಗಳು ಕ್ಲಿಷ್ಟಕರ ಎಂದು ಪರಿಗಣಿಸಲಾಗಿದೆ. ಉಳಿದವು ಸಾಮಾನ್ಯ ಮತಗಟ್ಟೆಗಳಾಗಿವೆ. ಕ್ಲಿಷ್ಟ ಮತಗಟ್ಟೆಗಳಿಗೆ ಮುಖ್ಯಪೇದೆ ಮತ್ತು ಪೇದೆಗಳನ್ನು ನಿಯೋಜಿಸಲಾಗುತ್ತಿದೆ. ಸಾಮಾನ್ಯ ಮತಗಟ್ಟೆಗಳಿಗೆ ಪೇದೆ ಅಥವಾ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗುವುದೆಂದು ಮಾಹಿತಿ ನೀಡಿದರು.
ಹೊರ ರಾಜ್ಯದ ಪೊಲೀಸರು: ಇದೇ ಮೊದಲ ಬಾರಿಗೆ ನೆರೆಯ ರಾಜ್ಯಗಳಾದ ಗೋವಾ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳಿಂದ 7,500 ಪೊಲೀಸರು ಹಾಗೂ ಗೃಹರಕ್ಷಕ ಮತ್ತು ನಾಗರಿಕ ಸೇವೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ನಮ್ಮ ಮನವಿಗೆ ಸ್ಪಂದಿಸಿ ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಿಂದಲೂ ಸಿಬ್ಬಂದಿಗಳನ್ನು ಕಳುಹಿಸಲಾಗಿತ್ತು. ಆದರೆ, ಅಗತ್ಯಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಇದ್ದುದ್ದರಿಂದ ವಾಪಸ್ ಕಳುಹಿಸಲಾಗಿದೆ ಎಂದರು.
ಪೊಲೀಸರು ಎಷ್ಟು?: ಚುನಾವಣಾ ಕರ್ತವ್ಯಕ್ಕೆ ಒಟ್ಟು 43,653 ಪೊಲೀಸರು, 22,172 ಗೃಹರಕ್ಷಕದಳ, 2 ಸಾವಿರ ನಾಗರಿಕ ಸೇವಾ ದಳ, ಅರಣ್ಯ ಸಿಬ್ಬಂದಿ, ಲೋಕಾಯುಕ್ತ, ಸಿಐಡಿ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 3 ಸಾವಿರ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ.
ಜತೆಗೆ 585 ಕೇಂದ್ರ ಸಶಸ್ತ್ರಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದ್ದು, ಈಗಾಗಲೇ 584 ಕಂಪೆನಿಗಳು ರಾಜ್ಯಕ್ಕೆ ಬಂದಿವೆ. ಈ ಸಿಬ್ಬಂದಿಗಳನ್ನು ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಸ್ಕ್ವಾಡ್ಗಳಿಗೆ ನಿಯೋಜಿಸಲಾಗಿದೆ. ಜತೆಗೆ ಕ್ಲಿಷ್ಟಕರ ಮತಗಟ್ಟೆಗಳ ಪ್ರದೇಶಗಳಿಗೆ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯ ನಿಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಚುನಾವಣೆ ಸಂಬಂಧ ದಾಖಲಾಗಿರುವ ಪ್ರಕರಣಗಳು 117 ಮಾತ್ರ. 18 ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ-ಧಾರವಾಡದಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದರಿಂದ ಎಲ್ಲಿಯೂ ಕೋಮುಗಲಭೆಗಳು ವರದಿಯಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದ್ದು ಹೊರತುಪಡಿಸಿ ಇನ್ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಡಿಜಿಪಿ ಹೇಳಿದರು.
ನಕ್ಸಲ್ ಇಲ್ಲ: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ತಲೆ ಎತ್ತಿಲ್ಲ. ಜನವರಿ, ಫೆಬ್ರವರಿಯಲ್ಲಿ ಕೆಲ ಮಾಹಿತಿಗಳು ಕೇಳಿಬಂದಿದ್ದು ಹೊರತುಪಡಿಸಿದರೆ ಅನಂತರ ನಕ್ಸಲ್ ಚಟುವಟಿಕೆಗಳು ಕಂಡು ಬಂದಿಲ್ಲ. ಎಲ್ಲಿಯೂ ಚುನಾವಣೆ ಬಹಿಷ್ಕರಿಸಿದ್ದು, ಪ್ರಚಾರ ಮಾಡಿದ್ದು ಇಲ್ಲ. ಆದರೂ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದರು.
ಚುನಾವಣೆ ಕರ್ತವ್ಯಕ್ಕಾಗಿ ಎಡಿಜಿಪಿ ಕಮಲ್ಪಂತ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಅದರಂತೆ ಖರ್ಚು, ವೆಚ್ಚಗಳು ಮತ್ತು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಹಿರಿಯ ಅಧಿಕಾರಿ ಆರ್.ಹಿತೇಂದ್ರ, ಶಸ್ತ್ರಾಸ್ತ್ರ ಪಡೆಗಳು ಹಾಗೂ ಭದ್ರತಾ ಪಡೆಗಳ ನಿಯೋಜನೆಗೆ ಡಿಐಜಿ ಸಂದೀಪ್ ಪಾಟೀಲ್ ಅವರನ್ನು ನೇಮಿಸಲಾಗಿತ್ತು. ಈ ಮೂವರು ಅಧಿಕಾರಿಗಳು ಕೇಂದ್ರ ಚುನಾವಣಾ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದರು ಎಂದು ವಿವರಿಸಿದರು.
ಮುಂಜಾಗ್ರತಾ ಬಂಧನ: ಚುನಾವಣೆಯ ಹಿನ್ನೆಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಅಪರಾಧ ಹಿನ್ನೆಲೆವುಳ್ಳವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆಯಾ ಠಾಣೆಯ ಪರಿಸ್ಥಿತಿಗನುಗುಣವಾಗಿ ಮುಂಜಾಗ್ರತಾ ಕ್ರಮವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರನ್ನು ಬಂಧಿಸಲಾಗುವುದು ಎಂದು ಹೇಳಿದರು.
ಚುನಾವಣೆ ನೀತಿಸಂಹಿತೆ ಜಾರಿಯಾದ ನಂತರ ರಾಜ್ಯದಲ್ಲಿ ಪರಾವನಿಗೆ ಪಡೆದಿದ್ದ 97,043 ಶಸ್ತ್ರಾಸ್ತ್ರಗಳಲ್ಲಿ 95,405 ಶಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಲಾಗಿದೆ. 1456 ಶಸ್ತ್ರಾಸ್ತ್ರಗಳನ್ನು ಅಗತ್ಯವೆನಿಸಿದ್ದರಿಂದ ಠೇವಣಿಯಿಂದ ವಿನಾಯಿತಿ ನೀಡಲಾಗಿದೆ. 19 ಶಸ್ತ್ರಾಸ್ತ್ರಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಅಕ್ರಮ 22 ಶಸ್ತ್ರಾಸ್ತ್ರಗಳು ಹಾಗೂ 30 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
‘ಮತದಾನಕ್ಕೆ ಅಡ್ಡಿ, ಆತಂಕವಿಲ್ಲ’
‘ರಾಜ್ಯ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದ್ದು, ಮತದಾನಕ್ಕೆ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮತದಾರರು ಯಾವುದೇ ಅಡ್ಡಿ ಆತಂಕವಿಲ್ಲದೆ ತಮ್ಮ ಹಕ್ಕು ಚಲಾಯಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’.
-ನೀಲಮಣಿ ಎನ್.ರಾಜು, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ







