ಅಳಿಕೆ; ಮತಗಟ್ಟೆಗೆ ಜೇನು ನೊಣ ದಾಳಿ: ಹಲವರಿಗೆ ಗಾಯ

ಬಂಟ್ವಾಳ, ಮೇ 12: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಶ್ರೀಸತ್ಯಸಾಯಿ ವಿಹಾರದ ವಿದ್ಯಾಕೇಂದ್ರದಲ್ಲಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬ್ರ 80 ಹಾಗೂ 81ರ ಮತಗಟ್ಟೆಯಲ್ಲಿ ಮತದಾರರ ಮೇಲೆ ಜೇನು ನೊಣ ದಾಳಿ ಮಾಡಿದ್ದು, ಹಲವರಿಗೆ ಗಾಯವಾಗಿದೆ.
ಇಲ್ಲಿನ ಮತಗಟ್ಟೆ ಆವರಣ ಪ್ರವೇಶದ ಮುಖ್ಯದ್ವಾರದಲ್ಲಿ ಗೂಡುಕಟ್ಟಿದ ಬೃಹತ್ ಗಾತ್ರದ ಜೇನುಗೂಡಿನಿಂದ ಜೇನು ನೊಣಗಳು ಈ ಎರಡು ಕೇಂದ್ರದಲ್ಲಿರುವ ಮತಗಟ್ಟೆಯಲ್ಲಿ ನಿಂತಿರುವ ಮತದಾರರ ಮೇಲೆ ತಟ್ಟನೆ ದಾಳಿ ಮಾಡಿದೆ.
ಜೇನು ನೊಣ ಕಡಿತದಿಂದ ಹಲವು ಮತದಾರರಿಗೆ ಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ ಪ್ರಸಂಗ ನಡೆದಿದೆ. ಗುಲಾಬಿ ಬೀಮಾವರ, ಅಣ್ಣು ಪೂಜಾರಿ, ರವಿ ಪಡಿಬಾಗಿಲು, ತಿಮ್ಮಪ್ಪಯ್ಯ ಭಟ್ ಮಡಿಯಾಳ, ಅಣ್ಣು ಕುಲಾಲ್, ಬಾಲಕೃಷ್ಣ ಸುವರ್ಣ, ಫಲುಲ್ ಕುದ್ದುಪದವು ಮೊದಲಾದವರಿಗೆ ಜೇನು ನೊಣ ದಾಳಿ ನಡೆಸಿದೆ. ಇದರಿಂದಾಗಿ ಮತಗಟ್ಟೆ ಪರಿಸರದಲ್ಲಿ ಗೊಂದಲದ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ
Next Story