ಉಡುಪಿ: ಮತದಾನಕ್ಕೆ ಭಾರೀ ಉತ್ಸಾಹ ತೋರಿದ ಜನತೆ
ಜಿಲ್ಲೆಯಲ್ಲಿ ಸುವ್ಯವಸ್ಥಿತ, ಶಾಂತಿಯುತ ಮತದಾನ

ಉಡುಪಿ, ಮೇ 12: ರಾಜ್ಯ ವಿಧಾನಸಭಾ ಚುನಾವಣೆಗೆ ಶನಿವಾರ ನಡೆದ ಮತದಾನ ಉಡುಪಿ ಜಿಲ್ಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಜಿಲ್ಲೆಯ ಯಾವುದೇ ಮತಗಟ್ಟೆಯಿಂದ ಯಾವುದೇ ಅಹಿತಕರ ಘಟನೆಯ ಮಾಹಿತಿಗಳು ಬಂದಿಲ್ಲ. ಬೆಳಗ್ಗೆಯಿಂದಲೇ ಮತದಾನ ಮಾಡಲು ಜನರು ಭಾರೀ ಆಸಕ್ತಿ ತೋರಿದ್ದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತಾರರ ಸರತಿ ಸಾಲು ಕಂಡುಬಂದವು.
ಕಾಪು ವಿಧಾನಸಭಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 10 ಗಂಟೆಯ ವೇಳೆಗೆ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಒಟ್ಟು 898 ಮಂದಿ ಮತದಾರರಲ್ಲಿ 250 ಮಂದಿ (ಶೇ.28) ಅದಾಗಲೇ ಮತ ಚಲಾಯಿಸಿದ್ದರು. ಪೆರ್ಡೂರು ಹೊಸಂಗಡಿಯ 78 ವರ್ಷದ ಕಿಟ್ಟಿ ಮರಕಾಲ್ತಿ ತನ್ನ ಮಗನ ಸಹಾಯದಿಂದ ಮತಗಟ್ಟೆಗೆ ಬಂದು ತನ್ನ ಮತ ಚಲಾಯಿಸಿ ಮಗನಿಗಾಗಿ ಕಾಯುತ್ತಾ ನೆರಳಿನಲ್ಲಿ ಕುಳಿತಿದ್ದರು. ಈವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ತಮ್ಮ ಹಕ್ಕು ಚಲಾಯಿಸಿರುವುದಾಗಿ ಅರು ಹೆಮ್ಮೆಯಿಂದ ಹೇಳಿಕೊಂಡರು.
ಪೆರ್ಡೂರಿನ ಬಿಎಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟೆಯಲ್ಲಿ 96 ವರ್ಷ ಪ್ರಾಯದ ಗಿರಿಜಮ್ಮ ತನ್ನ ಸೊಸೆ ವಾಣಿಯ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇಲ್ಲಿ 21 ವರ್ಷದ ಮಹೇಶ್ ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದು, ತನ್ನ ಊರಿನ ರಸ್ತೆ ಅಭಿವೃದ್ಧಿಗಾಗಿ ಉತ್ತಮ ಅ್ಯರ್ಥಿಗೆ ತನ್ನ ಮತ ಚಲಾಯಿಸಿರುವುದಾಗಿ ತಿಳಿಸಿದರು. ದೈಹಿಕ ಅಶಕ್ತರಾದ ನಾರಾಯಣ ಶೆಟ್ಟಿ ತನ್ನ ಮನೆಯವರ ಸಹಾಯದಿಂದ ಬಂದು ಮತ ಚಲಾಯಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಸಮಾಜ ಮಂದಿರದ ರಾಜೀವ ಗಾಂಧಿ ಸೇವಾ ನಿರ್ಮಾಣ ಕೇಂದ್ರ ಮತಗಟ್ಟೆಯನ್ನು ಮತದಾನದ ಹಬ್ಬದ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಈ ಮತಗಟ್ಟೆಯಲ್ಲಿ ಹೆಬ್ರಿ ಗ್ರಾಮದ ಬಡಾಗುಡ್ಡೆಯ ವಾತ್ಸಲ್ಯ, ಶ್ವೇತಾ, ಜಯಂತಿ ಎಂಬ ಮೂವರು ಯುವತಿಯರು ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.
ನಕ್ಸಲ್ಪೀಡಿತ ನಾಡ್ಪಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ ಹಾಗೂ ಸೋಮೇಶ್ವರ ಜಿಪಂ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಗೆ ಬಿಎಸ್ಎಫ್ ಯೋಧರಿಂದ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ರಾಜೀವಿ ಶೆಟ್ಟಿ (63) ಎಂಬ ದೈಹಿಕ ಅಶಕ್ತರು ವೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದರು. 11:30ರ ಸುಮಾರಿಗೆ ಈ ಮತಗಟ್ಟೆಯಲ್ಲಿ ಶೆೀ.45ರಷ್ಟು ಮತದಾನ ನಡೆದಿದ್ದಿತು.
ಕುಂದಾಪುರ ವಿಧಾನಸಭಾ ವ್ಯಾಪ್ತಿಯ ತೀರಾ ಗ್ರಾಮೀಣ ಒಳಪ್ರದೇಶವಾದ ಕೊಂಜಾಡಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಲ್ಲಿ ಬಿಸಿಲಿನಲ್ಲಿ ದಣಿದು ಮತಗಟ್ಟೆಗೆ ದೂರದಿಂದ ಬರುವ ಮತದಾರರ ದಾಹ ತಣಿಸಲು ಬೆಲ್ಲ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಅಗತ್ಯವಿದ್ದವರಿಗೆ ವೀಳ್ಯದೆಲೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬಿದ್ಕಲ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಯಲ್ಲಿ ಸುಶ್ಮಿತಾ ಶೆಟ್ಟಿ ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.
ವಿಕಲಚೇತನರ ಮತಗಟ್ಟೆ: ಕುಂದಾಪುರ ವಿಧಾನಸಭಾ ವ್ಯಾಪ್ತಿಯ ತೆಕ್ಕಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ವಿಕಲಚೇತನರ ಮತಗಟ್ಟೆ ತೆರೆಯಲಾಗಿದ್ದು, ಇಲ್ಲಿ ನಾಲ್ವರು ವಿಕಲಚೇತನರೇ ಮತಗಟ್ಟೆ ನಿರ್ವಹಣೆಗೆ ನಿಯೋಜಿತರಾಗಿದ್ದರು. ಈ ಮತಗಟ್ಟೆಯಲ್ಲಿ 22 ಮಂದಿ ವಿಕಲಚೇತನ ಮತದಾರರಿದ್ದು ಎರಡು ಗಂಟೆ ಸುಮಾರಿಗೆ ಇವರಲ್ಲಿ 16 ಮಂದಿ ತಮ್ಮ ಮತ ಚಲಾಯಿಸಿದ್ದರು.
ಈ ಮತಗಟ್ಟೆಯಲ್ಲಿ ವಿಕಲಚೇತನರಿಗೆ ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್ಯಾಂಪ್, ವೀಲ್ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಅಗತ್ಯವಿದ್ದವರಿಗೆ ಭೂತಗನ್ನಡಿ, ಬ್ರೈಲ್ಲಿಪಿಯ ವ್ಯವಸ್ಥೆಯೂ ಇಲ್ಲಿತ್ತು. ಜಯರತ್ನ ಎಂಬ ದೈಹಿಕ ಸಮಸ್ಯೆಯುಳ್ಳ ವಿಕಲಚೇತನ ಪುರ್ನವಸತಿ ಕಾರ್ಯಕರ್ತೆ ಈ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ತುರ್ತು ಅಗತ್ಯತೆಗಾಗಿ ಅಂಬುಲೆನ್ಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಇಲ್ಲಿ ಕಾರ್ಯ ನಿರ್ವಹಿಸಿದರು.
ಉಡುಪಿಯ ಕ್ರಿಶ್ಚಿಯನ್ ಪ್ರೌಢಸಾಲೆ ಮತ್ತು ಸೈಂಟ್ ಮೇರಿಸ್ ಶಾಲೆಯಲ್ಲಿ ಮಹಿಳೆಯರೇ ಕಾರ್ಯನಿರ್ವಹಿಸುವ ಪಿಂಕ್ ಮತಗಟ್ಟೆೆಗಳನ್ನು ತೆರೆಯಲಾ ಗಿತ್ತು. ಮತಗಟ್ಟೆಗೆ ಸಂಬಂಧ ಪಟ್ಟ ಎಲ್ಲಾ ಮಹಿಳೆಯರೂ ಇಲ್ಲಿ ಗುಲಾಬಿ ಬಣ್ಣದ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು. ಇಲ್ಲಿನ ಪರಿಕರದಲ್ಲೂ ಪಿಂಕ್ ಬಣ್ಣವೇ ಎಲ್ಲೆಲ್ಲೂ ಇದ್ದು ಪಿಂಕ್ ಮತಗಟ್ಟೆ ಅನ್ವರ್ಥದಂತೆ ಕಂಡುಬಂತು. ಈ ಮತ ಕೇಂದ್ರದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸುವ ಮಹಿಳಾ ಮತದಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಕೋಣೆಯಲ್ಲಿ ಆಟಿಕೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪಿಂಕ್ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಮತಗಟ್ಟೆಯ ಸಿಬ್ಬಂದಿಗಳು ಹೇಳಿದರು.