ಚಿಕ್ಕಮಗಳೂರು: ರಿಲ್ಯಾಕ್ಸ್ ಮೂಡ್ ನಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು

ಚಿಕ್ಕಮಗಳೂರು, ಮೇ 13: ಕಳೆದ ಮೂರು ತಿಂಗಳಿಂದ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಟಿ.ರವಿ ರವಿವಾರ ಕೂಡ ತಮ್ಮ ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಸಾವಿನ ಮನೆ ಹಾಗೂ ಮದುವೆ ಮನೆಗೆ ಭೇಟಿ ನೀಡಿ ನಂತರ ಪಕ್ಷದ ಸಭೆಯಲ್ಲಿ ಭಾಗವಹಿಸಿದರು.
ಕಳೆದ ಎರಡು ತಿಂಗಳಿಂದ ಮೇ.12ರವೆರಗೂ ಚುನಾವಣೆ ಹಿನ್ನೆಲ್ಲೆಯಲ್ಲಿ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು, ಚುನಾವಣೆ ಮುಗಿದಿದ್ದರಿಂದ ರವಿವಾರ ಆಹ್ವಾನಿತರ ಮದುವೆ ಮನೆಗೆ ಹೋಗಿದ್ದರು. ಅವರೊಂದಿಗೆ ಕೆಲ ಬಿಜೆಪಿ ಮುಖಂಡರು ಜತೆಯಲ್ಲಿದ್ದರು. ಮದುವೆ ಮನೆಯಿಂದ ಸೀದಾ ಪಕ್ಷದ ಕಚೇರಿಗೆ ಬಂದ ಅವರು ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಕೆಲ ಹೊತ್ತು ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ತಮಾಷೆಯಾಗಿ ಮಾತನಾಡಿದರು. ನಂತರ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್, ರವಿವಾರ ಬೆಳಗ್ಗೆ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಪಕ್ಷದ ಮುಖಂಡರೊಂದಿಗೆ ಮತದಾನ ಹಾಗೂ ವಿವಿಧ ಬೂತ್ಗಳಲ್ಲಿ ಕಾಂಗ್ರೆಸ್ ಪರ ವಿರೋಧವಾಗಿ ಮತದಾನವಾಗಿರುವ ಬಗ್ಗೆ ಚರ್ಚಿಸಿ, ನಂತರ ತಮ್ಮ ಸ್ವಗ್ರಾಮ ಬಣಕಲ್ಗೆ ಭೇಟಿ ನೀಡಿ ಕೆಲ ಹೊತ್ತು ಕುಟುಂಬದವರೊಂದಿಗೆ ಕಾಲಕಳೆದರೆಂದು ತಿಳಿದು ಬಂದಿದೆ.
ಇನ್ನು ಜೆಡಿಎಸ್ ಅಭ್ಯರ್ಥಿ ಹರೀಶ್ ಬೆಳಗ್ಗೆ 10 ರವರೆಗೆ ಉದ್ದೇಬೋರನಹಳ್ಳಿಯ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದು ನಂತರ ನಗರದ ಎಸ್ಟಿಜೆ ಕಾಲೇಜು ಆವರಣದಲ್ಲಿ ಮಂಗಳವಾರ ನಡೆಯಲಿರುವ ಮತ ಎಣಿಕಾ ಕೇಂದ್ರದ ಬಳಿ ಒಂದು ಸುತ್ತು ಹಾಕಿದರು. ನಂತರ ಅವರು ಪಕ್ಷದ ಕೆಲ ಮುಖಂಡರು, ಕಾರ್ಯಕರ್ತರೊಂದಿಗೆ ಕೆಲ ಗ್ರಾಮಗಳಿಗೆ ತೆರಳಿ ತಮ್ಮ ಸಮುದಾಯದ ಮುಖಂಡರನ್ನು ಭೇಟಿಯಾಗಿ ಮತದಾನ ಪ್ರಕ್ರಿಯೆ ಬಗ್ಗೆ ಚರ್ಚಿಸಿದರೆನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳು ಗಳಿಂದ ಪುರುಸೊತ್ತಿಲ್ಲದೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಾಡುತ್ತಿದ್ದ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ರವಿವಾರ ಕೊಂಚ ನಿರಾಳರಾದವರಂತೆ ಕಂಡು ಬಂದರೂ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸೋಲು ಗೆಲುವಿನ ಕುರಿತಾಗಿ ತಲೆಯೊಳಗೆ ಹುಳ ಬಿಟ್ಟವರಂತೆ ಓಡಾಡುತ್ತಿದ್ದದು ರವಿವಾರ ಕಂಡು ಬಂತು.
ಜಿಲ್ಲೆಯಲ್ಲಿ ಮತದಾನ ಹಿಂದಿನ ಬಾರಿಗಿಂತಲೂ ಹೆಚ್ಚಾಗಿದೆ. ಗ್ರಾಮೀಣ ಭಾಗಗಳಲ್ಲಿ ಮತದಾರರು ಹೆಚ್ಚು ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ, ಸರಕಾರದ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿದೆ. ಈ ಅಭಿಪ್ರಾಯ ಮತವಾಗಿ ಪರಿವರ್ತನೆಯಾಗಿದ್ದು, ಕಾಂಗ್ರೆಸ್ ಗೆಲ್ಲಿಸಲು ಜನ ತೀರ್ಮಾನಿಸಿರುವುದರಿಂದ ತನ್ನ ಗೆಲುವು ನಿಶ್ಚಿತ. ಗೆದ್ದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ತನ್ನ ಆದ್ಯತೆ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶಾಂತಿಯುತ ಚುನಾವಣೆ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ
- ಬಿ.ಎಲ್.ಶಂಕರ್, ಕಾಂಗ್ರೆಸ್ ಅಭ್ಯರ್ಥಿ
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಚುನಾವಣೆಗೂ ಮುನ್ನವೇ ಜನರು ತನ್ನ ಆಯ್ಕೆಯನ್ನು ದೃಢಪಡಿಸಿರುವುದು ಪ್ರಚಾರದ ವೇಳೆಯೇ ತಿಳಿದು ಬಂದಿದೆ. ನಾಲ್ಕನೆ ಬಾರಿ ಶಾಸಕನಾಗುವುದರಲ್ಲಿ ಅನುಮಾನವೇ ಬೇಡ.
- ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ
ಚಿಕ್ಕಮಗಳೂರು ಕ್ಷೇತ್ರದ ಶಾಸಕರ ದುರಾಡಳಿತದಿಂದ ಜನ ಬೇಸತ್ತಿರುವುದು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವೇ ತನಗೆ ಶ್ರೀರಕ್ಷೆ. ಇದು ತನಗೆ ಕ್ಷೇತ್ರದಲ್ಲಿ ಗೆಲುವಿನ ವಾತಾವರಣ ಮೂಡಿಸಲು ಕಾರಣವಾಗಿದೆ. ಮತದಾನದ ಬಳಿಕ ಎಲ್ಲ ಗ್ರಾಮಗಳಲ್ಲೂ ಜೆಡಿಎಸ್ ಅಲೆ ಎದ್ದು ಕಾಣುತ್ತಿರುವುದರಿಂದ ಬಿಜೆಪಿ ಕಾಂಗ್ರೆಸ್ಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. ಜನಗೆ ತನಗೆ ಆಶೀರ್ವಾದ ಮಾಡಿದ್ದಾರೆಂಬ ಬಗ್ಗೆ ವಿಶ್ವಾಸ ಹೆಚ್ಚಾಗಿದೆ.
- ಬಿ.ಎಚ್.ಹರೀಶ್, ಜೆಡಿಎಸ್ ಅಭ್ಯರ್ಥಿ







