ಸುನಂದಾ ಪುಷ್ಕರ್ ಸಾವಿನ ಪ್ರಕರಣ: ಶಶಿ ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ

ಹೊಸದಿಲ್ಲಿ,ಮೇ 14: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಸೋಮವಾರ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಹಿಂದೆ ಯಾವುದೇ ಶಂಕಿತರ ಹೆಸರು ಉಲ್ಲೇಖಿಸದೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಈಗ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಿದ್ದು,ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಹೊರಿಸಿದ್ದಾರೆ.
ತರೂರ್ ವಿರುದ್ಧ ಕೌಟುಂಬಿಕ ಹಿಂಸೆಯ ಆರೋಪವನ್ನೂ ಹೊರಿಸಲಾಗಿದೆ.
2014,ಜ.17ರಂದು ದಕ್ಷಿಣ ದಿಲ್ಲಿಯ ಪಂಚತಾರಾ ಹೋಟೆಲ್ಲೊಂದರ ಕೋಣೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪುಷ್ಕರ್ ಶವ ಪತ್ತೆಯಾಗಿತ್ತು. ಸಾವು ವಿಷಪ್ರಾಶನದಿಂದ ಸಂಭವಿಸಿದೆ ಎಂದು ಹೇಳಿದ್ದ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸಾವಿಗೆ ಎರಡು ದಿನಗಳ ಮುನ್ನ ಪುಷ್ಕರ್ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪತಿಯನ್ನು ತೊರೆದು ಹೋಗಿದ್ದಕ್ಕೆ ಮತ್ತು ಹೋಟೆಲ್ನಲ್ಲಿ ಉಳಿದುಕೊಂಡಿದ್ದಕ್ಕೆ ಕಾರಣಗಳನ್ನು ತಿಳಿದುಕೊಳ್ಳಲು ತರೂರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಕೇರಳದಿಂದ ದಿಲ್ಲಿಗೆ ಬರುವಾಗ ವಿಮಾನದಲ್ಲಿಯೇ ದಂಪತಿ ಜಗಳವಾಡಿದ್ದರು ಎನ್ನಲಾಗಿದೆ.







