ಉಡುಪಿ: ಯಾರ ಕೊರಳಿಗೆ ಬೀಳಲಿದೆ ವಿಜಯದ ಹೂಮಾಲೆ
ಉಡುಪಿ, ಮೇ 14: ಕಳೆದ ಶನಿವಾರ ಸಂಜೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಒಟ್ಟು 1103 ಮತಗಟ್ಟೆಗಳ ಮತಯಂತ್ರಗಳಲ್ಲಿ ದಾಖಲಾದ ಜಿಲ್ಲೆಯ 7,83,315 ಮತದಾರರ ತೀರ್ಪು ನಾಳೆ ಬಹಿರಂಗಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡಿದೆ.
ಮೇ 12ರಂದು ರಾಜ್ಯ ವಿಧಾನಸಭಾ ಚುನಾವಣೆಯ 222 ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ ನಾಳೆ ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ ಪ್ರಾರಂಭ ಗೊಳ್ಳಲಿದೆ. ಅಪರಾಹ್ನ 12:00 ಸುಮಾರಿಗೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಬೀಳಲಿದ್ದು, ವಿಜಯಿ ಅಭ್ಯರ್ಥಿಯಾರೆಂಬುದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ಪಕ್ಷ ಯಾವುದೆಂಬುದು ನಿರ್ಧಾರವಾಗಿರುತ್ತದೆ.
ಉಡುಪಿ ಜಿಲ್ಲೆಯ ಐದು ವಿದಾನಸಭಾ ಕ್ಷೇತ್ರದಲ್ಲಿ ಸ್ಪರ್ಧಾ ಕಣದಲ್ಲಿರುವ ಒಟ್ಟು 34 ಅಭ್ಯರ್ಥಿಗಳ ಹಣೆಬರಹ ನಾಳೆ ನಿರ್ಧಾರವಾಗಲಿದೆ. ಇವರಲ್ಲಿ ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾದಳ ಹಾಗೂ ಬಿಎಸ್ಪಿ ಅಲ್ಲದೇ ಎಂಇಪಿಯ ತಲಾ ಐವರು ಅಭ್ಯರ್ಥಿಗಳು ಸೇರಿದ್ದಾರೆ. ಆದರೆ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡಬರುತ್ತಿದೆ.
ಉಡುಪಿ ಜಿಲ್ಲೆಯ ಮಟ್ಟಿಗೆ ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆ ಯಾಗುವುದು ಎಂಬುದು ಬಹುಸಂಖ್ಯಾತ ಮತದಾರರ ಅಭಿಮತ. ಕಳೆದ ಬಾರಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಕಾರ್ಕಳದಲ್ಲಿ ಬಿಜೆಪಿ ಹಾಗೂ ಕುಂದಾಪುರದಲ್ಲಿ ಬಿಜೆಪಿಯಿಂದ ಸಿಡಿದೆದ್ದು ಪಕ್ಷೇತರರಾಗಿ ನಿಂತ ಹಾಲಾಡಿ ಶ್ರೀನಿವಾಸ ಶೆಟ್ಟಿ ಜಯಗಳಿಸಿದ್ದರು. ಈ ಬಾರಿ ಮತ್ತೆ ಬಿಜೆಪಿಗೆ ಮರಳಿರುವ ಹಾಲಾಡಿ, ಬಿಜೆಪಿ ಟಿಕೇಟ್ನಿಂದ ಸ್ಪರ್ಧಿಸಿ ಗೆಲುವಿನ ನಿರೀಕ್ಷೆ ಯಲ್ಲಿದ್ದಾರೆ.
ಹೀಗಾಗಿ ಉಡುಪಿ, ಬೈಂದೂರು, ಕಾಪು ಕ್ಷೇತ್ರಗಳನ್ನು ಕಾಂಗ್ರೆಸ್ ಹಾಗೂ ಕುಂದಾಪುರ ಮತ್ತು ಕಾರ್ಕಳವನ್ನು ಬಿಜೆಪಿ ಉಳಿಸಿಕೊಳ್ಳಲು ಯಶಸ್ವಿ ಯಾಗುವುದೇ ಎಂಬುದು ಈಗಿರುವ ಕುತೂಹಲ. ನಿಜವಾಗಿಯೂ ಈ ಬಾರಿ ಬೈಂದೂರು ಮತ್ತು ಉಡುಪಿಯಲ್ಲಿ ಗೆಲುವಿಗಾಗಿ ನಿಕಟ ಪೈಪೋಟಿ ಇದೆ ಎಂಬುದು ಒಂದು ಅಂದಾಜು. ಹಾಲಿ ಶಾಸಕ ಪ್ರಮೋದ್ ಮದ್ವರಾಜ್ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಅವರು ತಮ್ಮ ಗೆಲುವಿನ ಬಗ್ಗೆ ಸಂಪೂರ್ಣ ಭರವಸೆ ವ್ಯಕ್ತಪಡಿಸುತ್ತಾರೆ.
ತನ್ನ ಮತದಾರರು ಜನಸಾಮಾನ್ಯರು ಹಾಗೂ ವೌನ ಮತದಾರರು. ಅವರು ಖಂಡಿತ ತನ್ನ ಕೈಬಿಡುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಹೀಗಾಗಿ ನಾನು ಪ್ರಚಾರದಲ್ಲಿ ಅಬ್ಬರ, ಆಡಂಬರಕ್ಕೆ ಮುಂದಾಗಲೇ ಇಲ್ಲ. ನನ್ನ ಮತದಾರರ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ನಾನು ಭಾರೀ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಫಲಿತಾಂಶದ ಬಗ್ಗೆ ಹೆಚ್ಚು ಆತಂಕ, ಉದ್ವೇಗ ತೋರಿಸದೇ ಹೇಳುತ್ತಾರೆ.
ಪ್ರಮೋದ್ರ ಎದುರಾಳಿಯಾಗಿರುವ ಹೈಸ್ಕೂಲ್ನ ಸಹಪಾಠಿ ರಘುಪತಿ ಭಟ್ಗೆ ನರೇಂದ್ರ ಮೋದಿ ಉಡುಪಿಗೆ ಬಂದು ಚುನಾವಣಾ ಪ್ರಚಾರ ಮಾಡಿರುವುದು ಗೆಲುವಿನ ಹುಮ್ಮಸ್ಸಿಗೆ ಕಾರಣವಾಗಿದೆ. ಮೋದಿ ಬಂದು ಭಾಷಣ ಮಾಡಿದ ಮೇಲೆ ನನಗೆ ಗೆಲ್ಲುವ ಬಗ್ಗೆ ಯಾವುದೇ ಸಂದೇಹ ಉಳಿದಿಲ್ಲ. ಆದರೆ ಮೇಲ್ನೋಟಕ್ಕೆ ಪಕ್ಷದೊಳಗೆ ಉಳಿದಿರುವ ಭಿನ್ನಮತ, ಉಡುಪಿಯ ಸಂಸದೆಯಾಗಿದ್ದರೂ ಒಂದು ದಿನ ಸಹ ಬಂದು ಪ್ರಚಾರ ನಡೆಸದ ಶೋಭಾ ಕರಂದ್ಲಾಜೆ ಅವರ ನಡೆ ಭಟ್ಗೆ ವಿಜಯದ ಗುರಿ ಮುಟ್ಟಲು ತಡೆ ಯೊಡ್ಡುವುದೇ ಎಂಬುದು ನಾಳೆ ತಿಳಿಯಲಿದೆ.
ಇನ್ನು ಬೈಂದೂರಿನಲ್ಲಿ ಗೋಪಾಲ ಪೂಜಾರಿ ಅವರು ತಾನು ಮಾಡಿದ ಅಭಿವೃದ್ಧಿ ಕಾರ್ಯ ತನಗೆ ಗೆಲುವಿನ ಮಾಲೆ ತೊಡಿಸಲು ಸಮರ್ಥವಾಗಿದೆ ಎಂದು ಭಾವಿಸಿದ್ದರೆ, ಅವರ ಎದುರಾಳಿ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ತಾನು ಬೆಳೆಸಿಕೊಂಡ ಒಳ್ಳೆಯ ನಂಟು ಈ ಬಾರಿ ತನಗೇ ವಿಜಯಲಕ್ಷಿಯನ್ನು ಒಲಿಸಿಕೊಡಲಿದೆ ಎಂದು ನಂಬಿದ್ದಾರೆ.
ಕುಂದಾಪುರದಲ್ಲಿ ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಜನಾನುರಾಗಿ ಎನಿಸಿರುವ ಹಾಲಾಡಿ ಈ ಬಾರಿಯೂ ವಿಜಯದ ಪೂರ್ಣ ವಿಶ್ವಾಸದಲ್ಲಿದ್ದಾರೆ. ಆದರೆ ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಸಾಕಷ್ಟು ಗಮನ ಸೆಳೆದಿರುವ ರಾಕೇಶ್ ಮಲ್ಲಿ, ಹೆಚ್ಚು ಸ್ಪರ್ಧೆ ನೀಡಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಅಲ್ಲದೇ ಕಳೆದ ಬಾರಿ ‘ಪಕ್ಷೇತರ’ ಹಾಲಾಡಿ ಕೈ ಹಿಡಿದ ಅಲ್ಪಸಂಖ್ಯಾತರು ಈ ಬಾರಿ ಮತ್ತೆ ಕಾಂಗ್ರೆಸ್ಗೆ ಒಲವು ಬದಲಾಯಿಸಿದ್ದಾರೆ ಎಂಬುದು ರಾಜಕೀಯ ವೀಕ್ಷಕರ ಅಭಿಮತ. ಇದು ಎಷ್ಟರಮಟ್ಟಿಗೆ ಮಲ್ಲಿ ಅವರ ‘ಬೆಂಬಲ’ಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಕಾರ್ಕಳದಲ್ಲಿ ಆರಂಭಿಕ ಗೊಂದಲದಿಂದ ಕೊನೆಯ ಕ್ಷಣದಲ್ಲಿ ಚೇತರಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ, ಹಾಲಿ ಶಾಸಕ ಸುನಿಲ್ ಕುಮಾರ್ಗೆ ಎಷ್ಟರ ಮಟ್ಟಿಗೆ ಹೋರಾಟ ನೀಡುತ್ತಾರೆ ಎಂಬುದು ನಾಳೆ ಮತ ಎಣಿಕೆಯಲ್ಲೇ ತಿಳಿಯಬೇಕಾಗಿದೆ. ಕಾಪುವಿನಲ್ಲಿ ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಕಳೆದ ಐದು ವರ್ಷಗಳಲ್ಲಿ ಸಚಿವನಾಗಿ ಬಳಿಕ ಶಾಸಕನಾಗಿ ತಾನು ಕ್ಷೇತ್ರದಲ್ಲಿ ಮಾಡಿ ಅಭಿವೃದ್ಧಿ ಕಾರ್ಯ ಹಾಗೂ ಜನರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವೇ ತನ್ನನ್ನು ವಿಜಯದ ಗೆರೆ ದಾಟಿಸುವುದೆಂಬ ವಿಶ್ವಾಸದಲ್ಲಿದ್ದಾರೆ.







