ದ.ಕ. ಜಿಲ್ಲೆ: ಗೆಲುವಿನತ್ತ ಬಿಜೆಪಿ; ಕಾಂಗ್ರೆಸ್ ಧೂಳೀಪಟ
ನಿಷೇಧಾಜ್ಞೆ ಉಲ್ಲಂಘಿಸಿ ವಿಜಯೋತ್ಸವ

ಮಂಗಳೂರು, ಮೇ 15: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದ್ದು, ಕೇವಲ ಒಂದು ಸ್ಥಾನಕ್ಕೆ ಕಾಂಗ್ರೆಸ್ ತೃಪ್ತಿ ಪಡುವಂತಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅಭಿವೃದ್ಧಿಗೆ ಜನರು ಮನ್ನಣೆ ನೀಡಬಹುದೆಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಅದು ಹುಸಿಯಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಾಂಗ್ರೆಸ್ಗೆ ಆಘಾತವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲದೆ, ಪಕ್ಷದ ಮುಖಂಡರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ನನ್ನ ಸೋಲಿಗೆ ಹಿಂದುತ್ವದ ಅಲೆಯೇ ಕಾರಣ’ ಎಂದು ಮೊಯ್ದಿನ್ ಬಾವಾ ಪ್ರತಿಕ್ರಿಯಿಸಿದ್ದರೆ, ‘ನಾವು ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯಕ್ರಮವು ತಳಮಟ್ಟದ ಜನರಿಗೂ ತಲುಪಿತ್ತು. ಆದರೆ, ಅಪಪ್ರಚಾರಕ್ಕೆ ಗೆಲುವು ಆಗಿದೆ’ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
‘ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ, ಆದರೂ ಜನರ ತೀರ್ಪಿಗೆ ತಲೆಭಾಗುತ್ತೇವೆ’ ಎಂದು ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
‘ರಮಾನಾಥ ರೈಯ ತುಷ್ಠೀಕರಣ ನೀತಿಯೇ ನನ್ನ ಗೆಲುವಿಗೆ ಕಾರಣವಾಗಿದೆ. ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದು ನನ್ನ ಗೆಲುವು ಮಾತ್ರವಲ್ಲ, ಪಕ್ಷದ ಹಾಗೂ ಕಾರ್ಯಕರ್ತರ ಗೆಲುವು ಆಗಿದೆ. ನಾನಿನ್ನು ರಾಜಧರ್ಮ ಪಾಲಿಸುತ್ತೇನೆ’ ಎಂದು ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
2013ರ ಚುನಾವಣೆಯಲ್ಲಿ 8 ಸ್ಥಾನದ ಪೈಕಿ 7 ಕಾಂಗ್ರೆಸ್ ಹಾಗೂ 1 ಸ್ಥಾನ ಬಿಜೆಪಿಗೆ ಲಭಿಸಿತ್ತು. ಈ ಬಾರಿ ಅದಕ್ಕೆ ತದ್ವಿರುದ್ಧ ಫಲಿತಾಂಶ ಪ್ರಕಟವಾಗಿದೆ. ಅಂದರೆ ಬಿಜೆಪಿ 7 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 1ರಲ್ಲಿ ಗೆದ್ದಿದೆ. ಅದೂ ನಿರೀಕ್ಷಿತ ಮಂಗಳೂರು (ಉಳ್ಳಾಲ) ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್ 20 ಸಾವಿರಕ್ಕೂ ಅಧಿಕ ಮತಗಳ ಅಂತದರಿಂದ ಗೆಲುವು ಸಾಧಿಸಿದ್ದಾರೆ. ಆದರೆ, ಇದು ಕಳೆದ ಬಾರಿ ಪಡೆದ ಮತಗಳಿಗಿಂತ ತೀರಾ ಕಡಿಮೆಯಾಗಿದೆ.
ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ, ಪುತ್ತೂರಿನಲ್ಲಿ ಸಂಜೀವ ಮಠಂದೂರು, ಸುಳ್ಯದಲ್ಲಿ ಎಸ್.ಅಂಗಾರ, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಲ್ಲಿ ಡಾ. ಭರತ್ ಶೆಟ್ಟಿ, ಮೂಡುಬಿದಿರೆಯಲ್ಲಿ ಉಮನಾಥ ಕೋಟ್ಯಾನ್ ಜಯಗಳಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ವಿಜಯೋತ್ಸವ
ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವ ಸಲುವಾಗಿ ಮೇ 14ರ ರಾತ್ರಿ 12 ಗಂಟೆಯಿಂದ 16ರ ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಸೆ.144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡ ಗೆದ್ದ ಪಕ್ಷಗಳ ಅಭ್ಯರ್ಥಿಗಳನ್ನು ಹೊತ್ತು ಮೆರೆದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರ ಸಹಿತ ಜಿಲ್ಲಾದ್ಯಂತ ಗುಂಪು ಸೇರುವುದು, ವಿಜಯೋತ್ಸವ ಆಚರಿಸುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶವನ್ನೂ ಹೊರಡಿಸಿದ್ದರು. ಆದರೆ, ವಿಜಯದ ಹುಮ್ಮಸ್ಸಿನಲ್ಲಿರುವ ಕಾರ್ಯಕರ್ತರು ಈ ಎಲ್ಲ ಆದೇಶವನ್ನು ಲೆಕ್ಕಿಸದೆ ವಿಜಯೋತ್ಸವ ನಡೆಸಿದರು.