ಫಲಿತಾಂಶ ತಡೆಹಿಡಿಯಲು ಕೋರಿ ಕಾಂಗ್ರೆಸ್ ನ 5 ಅಭ್ಯರ್ಥಿಗಳಿಂದ ಆಕ್ಷೇಪ ದಾಖಲು
'ಇವಿಎಂ ದುರುಪಯೋಗ ಆಗಿರುವ ಸಂಶಯ'

ಮಂಗಳೂರು, ಮೇ 15: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಪೈಕಿ ಕಾಂಗ್ರೆಸ್ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿರುವ ಬೆನ್ನಿಗೆ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ನೇತೃತ್ವದಲ್ಲಿ ಇತರ ಐದು ಅಭ್ಯರ್ಥಿಗಳು ಇವಿಎಂ ದುರುಪಯೋಗ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ರಿಟರ್ನಿಂಗ್ ಆಫೀಸರ್ ಮುಂದೆ ಆಕ್ಷೇಪ ದಾಖಲಿಸಿದ್ದಾರೆ. ಮತ್ತು ತಮ್ಮ ಕ್ಷೇತ್ರಗಳ ಫಲಿತಾಂಶವನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಬೋಂದೆಲ್ನಲ್ಲಿರುವ ಮತ ಎಣಿಕೆಯ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ರಮಾನಾಥ ರೈ, ವಸಂತ ಬಂಗೇರ, ಜೆ. ಆರ್. ಲೋಬೊ, ಮೊಯ್ದಿನ್ ಬಾವ ಹಾಗು ಶಂಕುತಳಾ ಶೆಟ್ಟಿ ‘ಇವಿಎಂ ದುರುಪಯೋಗ ಆಗಿರುವ ಬಗ್ಗೆ ಸಂಶಯವಿದೆ’ ಎಂದು ಆಕ್ಷೇಪ ದಾಖಲಿಸಿದರು. ಬುಧವಾರ ಜಿಲ್ಲಾ ಚುನಾವಣಾಧಿಕಾರಿಗೆ ವಿವರವಾದ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ಗೆ 8ರಲ್ಲಿ 8 ಸ್ಥಾನವನ್ನೂ ಗೆಲ್ಲುವ ವಿಶ್ವಾಸವಿತ್ತು. ಆದರೆ, ಫಲಿತಾಂಶ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತ್ತು. ಹಾಗಾಗಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಆಕ್ಷೇಪದ ದೂರುಗಳನ್ನು ದಾಖಲಿಸಿದ್ದಾರೆ. ಅಲ್ಲದೆ, ಚುನಾವಣಾಧಿಕಾರಿಗಳ ತೀರ್ಮಾನದ ಬಳಿಕ ಮುಂದಿನ ತಮ್ಮ ನಡೆಯ ಕುರಿತು ನಿರ್ಧರಿಸಲಿದ್ದಾರೆ.