ಉಡುಪಿಯಲ್ಲಿ ಬಿಜೆಪಿ ಕ್ಲೀನ್ಸ್ವೀಪ್; ಕಾಂಗ್ರೆಸ್ಗೆ ಮುಖಭಂಗ

ಉಡುಪಿ, ಮೇ 15: ಕರ್ನಾಟಕ ರಾಜ್ಯ ವಿಧಾನಸಭೆಗಾಗಿ ನಡೆದ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಬಿಜೆಪಿ ಉಡುಪಿ ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಜಿಲ್ಲೆಯ ಐದಕ್ಕೆ ಐದೂ ಸೀಟುಗಳನ್ನು ಭಾರೀ ಅಂತರಗಳಿಂದ ಗೆದ್ದುಕೊಳ್ಳುವ ಮೂಲಕ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ.
ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಬಿಗು ಭದ್ರತೆಯ ನಡುವೆ ಇಂದು ನಡೆದ ಮತ ಎಣಿಕೆಯಲ್ಲಿ ಬೈಂದೂರಿನಲ್ಲಿ ಗೋಪಾಲ ಪೂಜಾರಿ ಒಬ್ಬರನ್ನು ಹೊರತು ಪಡಿಸಿ ಮತ ಎಣಿಕೆಯ ಪ್ರಾರಂಭಿಕ ಸುತ್ತಿನಿಂದಲೇ ಮುನ್ನಡೆ ಪಡೆದಿದ್ದ ಬಿಜೆಪಿಯ ಅಭ್ಯರ್ಥಿಗಳು ಕೊನೆಯ ಸುತ್ತಿನವರೆಗೂ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು.
ಹಾಲಿ ಶಾಸಕರಾದ ಗೋಪಾಲ ಪೂಜಾರಿ ಒಬ್ಬರು ಮಾತ್ರ ಮೊದಲ ಐದು ಸುತ್ತುಗಳಲ್ಲಿ ಮುನ್ನಡೆಯನ್ನು ಪಡೆದಿದ್ದರೂ, ಆರನೇ ಸುತ್ತಿನಲ್ಲಿ ಒಮ್ಮೆ ಹಿನ್ನಡೆ ಯನ್ನು ಕಂಡ ಬಳಿಕ ಮತ್ತೆ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಗಲೇ ಇಲ್ಲ. ಕುಂದಾಪುರದಲ್ಲಂತೂ ಕಳೆದ ನಾಲ್ಕು ಚುನಾವಣೆಗಳಲ್ಲಿ ತನ್ನ ವಿಜಯದ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸತತ ಜಯ ದಾಖಲಿಸುತ್ತಿರುವ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ ಹೊಸ ವಿಕ್ರಮವೊಂದನ್ನು ಸಾಧಿಸಿ ತನ್ನ ಕಾಂಗ್ರೆಸ್ ಎದುರಾಳಿ ಯನ್ನು 56,405 ಮತಗಳ ಅಂತರದಿಂದ ಹಿಮ್ಮೆಟ್ಟಿಸಿ ಹೊಸ ದಾಖಲೆ ಬರೆದರು. ಅಲ್ಲದೇ ಕ್ಷೇತ್ರದಲ್ಲಿ ಮತದಾನವಾದ 1,58,644 ಮತಗಳಲ್ಲಿ 1,03,434 ಮತಗಳನ್ನು ತಾವೇ ಪಡೆದರು.
ವಿಜಯಿ ಅಭ್ಯರ್ಥಿಗಳು: ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯ ಬಿ.ಎಂ. ಸುಕುಮಾರ್ ಶೆಟ್ಟಿ (96029) ಅವರು ಕೆ.ಗೋಪಾಲ ಪೂಜಾರಿ (71,636) ಅವರನ್ನು 24,393 ಮತಗಳ ಅಂತರದಿಂದ ಸೋಲಿಸಿದರೆ, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ (1,03,434), ಕಾಂಗ್ರೆಸ್ನ ರಾಕೇಶ್ ಮಲ್ಲಿ (47,029) ಅವರನ್ನು 56,405 ಮತಗಳಿಂದ ಮಣಿಸಿದರು.
ಉಡುಪಿಯಲ್ಲಿ ಬಿಜೆಪಿಯ ಕೆ.ರಘುಪತಿ ಭಟ್ (84,946) ಅವರು ತನ್ನ ಹೈಸ್ಕೂಲ್ ಸಹಪಾಠಿಯಾಗಿರುವ ಕಾಂಗ್ರೆಸ್ ಎದುರಾಳಿ ಪ್ರಮೋದ್ ಮಧ್ವರಾಜ್ (72,902) ಅವರನ್ನು 12,044 ಮತಗಳ ಅಂತರದಿಂದ ಸೋಲಿಸಿದರು. ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ (75,893) ಅವರು, ಹಾಲಿ ಶಾಸಕರಾಗಿರುವ ವಿನಯಕುಮಾರ್ ಸೊರಕೆ (63,976) ಅವರನ್ನು 11,917 ಮತಗಳ ಅಂತರದಿಂದ ಹಿಮ್ಮೆಟ್ಟಿಸಿ ಮೂನೇ ಬಾರಿ ಶಾಸಕರಾಗಿ ಆಯ್ಕೆಯಾದರು.
ಕಾರ್ಕಳ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ವಿ.ಸುನೀಲ್ ಕುಮಾರ್ ಅಧಿಕಾರಯುತ ಜಯ ಪಡೆದರು. ಒಟ್ಟು ಚಲಾವಣೆಯಾದ 1,45,935 ಮತಗಳಲ್ಲಿ 91,245 ಮತಗಳನ್ನು ತಾವೊಬ್ಬರೇ ಪಡೆದ ಸುನೀಲ್ ಕುಮಾರ್, ತನ್ನ ಎದುರಾಳಿ ಎಚ್.ಗೋಪಾಲ ಭಂಡಾರಿ (48,679) ಅವರನ್ನು 42,566 ಮತಗಳ ಅಂತರದಿಂದ ಪರಾಭವಗೊಳಿಸಿದರು.
24 ಮಂದಿಗೆ ಠೇವಣಿ ನಷ್ಟ: ಜಿಲ್ಲೆಯ ಒಟ್ಟು ಐದು ಕ್ಷೇತ್ರಗಳಲ್ಲಿ ಒಟ್ಟಾರೆ ಯಾಗಿ 34 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಇವರಲ್ಲಿ ಪ್ರತಿ ಕ್ಷೇತ್ರಗಳಲ್ಲಿ ವಿಜಯಿ ಬಿಜೆಪಿ ಹಾಗೂ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ 24 ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡರು.
ಬೆಳಗ್ಗೆ 8:00 ಗಂಟೆ ಮತ ಎಣಿಕೆ ಪ್ರಾರಂಭಗೊಂಡಾಗ ಅಭ್ಯರ್ಥಿಗಳ ಪೈಕಿ ರಾಕೇಶ್ ಮಲ್ಲಿ, ವಿನಯಕುಮಾರ್ ಸೊರಕೆ, ಕೆ.ರಘುಪತಿ ಭಟ್ ಹಾಗೂ ಲಾಲಾಜಿ ಮೆಂಡನ್ ಮಾತ್ರ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿದ್ದರು. ತನ್ನ ಗೆಲುವು ಖಚಿತಗೊಳ್ಳುವ ಸುದ್ದಿ ತಿಳಿಯುತಿದ್ದಂತೆ ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಂ.ಸುಕುಮಾರ್ ಶೆಟ್ಟಿ ಎಂಜಿಎಂ ಕಾಲೇಜು ಕ್ರೀಡಾಂಗಣದ ಆಸುಪಾಸು ನೆರೆದಿದ್ದ ಅಭಿಮಾನಿಗಳ ಹರ್ಷೋದ್ಗಾರ, ಘೋಷಣೆಗಳ ನಡುವೆ ಕೇಂದ್ರಕ್ಕೆ ಧಾವಿಸಿಬಂದರು.
ಸೋಲು ಖಚಿತಗೊಳ್ಳುತಿದ್ದಂತೆ ರಾಕೇಶ್ ಮಲ್ಲಿ 10:30ರ ಸುಮಾರಿಗೆ ಕೇಂದ್ರದಿಂದ ನಿರ್ಗಮಿಸಿದರೆ, ವಿನಯಕುಮಾರ್ ಸೊರಕೆ ಮಾತ್ರ ಕೊನೆಯ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಕಾಪು ಮತಎಣಿಕಾ ಕೊಠಡಿಯಲ್ಲಿದ್ದು ಬಳಿಕ ನಿರ್ಗಮಿಸಿದರು. ಆದರೆ ಫಲಿತಾಂಶದ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಯವಾಗಿ ನಿರಾಕರಿಸಿದರು.
ಉಳಿದಂತೆ ಪ್ರಮೋದ್ ಮದ್ವರಾಜ್, ಕೆ.ಗೋಪಾಲ ಪೂಜಾರಿ ಹಾಗೂ ಎಚ್. ಗೋಪಾಲ ಭಂಡಾರಿ ಅವರು ಮತ ಎಣಿಕಾ ಕೇಂದ್ರದತ್ತ ಸುಳಿಯಲಿಲ್ಲ. ಅದೇ ರೀತಿ ಉಳಿದ ಹೆಚ್ಚಿನ ಅಭ್ಯರ್ಥಿಗಳು ಇತ್ತ ತಲೆ ಹಾಕಲಿಲ್ಲ.
‘ಕಳೆದ ಬಾರಿ ಶಾಸಕನಾಗಿ ಕೆಲಸ ಮಾಡಿದ ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಸಿಕ್ಕ ಗೆಲುವು. ಹಿಂದುತ್ವ ಮತ್ತು ಅಭಿವೃದ್ಧಿ ಕಾರ್ಯ ಮುಂದುವರೆಸುವಂತೆ ಕ್ಷೇತ್ರದ ಜನ ನನಗೆ ಮತ್ತೆ ಆಶೀರ್ವಾದ ಮಾಡಿದ್ದಾರೆ. ಜನರ ನಂಬಿಕೆ, ವಿಶ್ವಾಸಕ್ಕೆ ತೊಂದರೆ ಆಗದಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿದ್ದೇನೆ’
-ಸುನೀಲ್ ಕುಮಾರ್, ಶಾಸಕರು ಕಾರ್ಕಳ ಕ್ಷೇತ್ರ
ಕ್ಷೇತ್ರದ 213 ಬೂತ್ನಲ್ಲಿಯೂ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡಿರುವುದರಿಂದ ರಾಜ್ಯದ ನಂಬರ್ ಒನ್ ಎಂದು ಹೇಳಿ ಕೊಂಡ ಸಚಿವರನ್ನು ಸೋಲಿಸಲು ಸಾಧ್ಯವಾಯಿತು. ಆದುದರಿಂದ ಈ ಗೆಲುವು ಬಿಜೆಪಿ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಮೋದಿಯ ಅಲೆ ಈ ಬಾರಿಯ ಚುನಾವಣೆ ಗೆಲ್ಲಲು ಸಹಾಯ ಆಗಿದೆ. ಈ ಗೆಲುವು ನನಗೆ ರಾಜಕೀಯ ಪುನರ್ಜನ್ಮ ನೀಡಿದೆ. ಸ್ವಚ್ಛ ಉಡುಪಿ ಮತ್ತು ಸಮಗ್ರ ಉಡುಪಿ ನನ್ನ ಮುಂದಿನ ಆದ್ಯತೆ. ಇದರೊಂದಿಗೆ ಕುಡಿಯುವ ನೀರು, ತ್ಯಾಜ್ಯ ಸಂಸ್ಕರಣೆ ಹಾಗೂ ಉತ್ತಮ ರಸ್ತೆಗೂ ಪ್ರಾಶಸ್ತ್ಯ ನೀಡುತ್ತೇನೆ.
-ರಘುಪತಿ ಭಟ್, ಶಾಸಕರು, ಉಡುಪಿ ಕ್ಷೇತ್ರ
‘ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಗೆ ತಂದ ಕಾರ್ಯಕ್ರಮಗಳನ್ನು ನೋಡಿ ಜನ ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ನಾನು ನಡೆದು ಬಂದ ದಾರಿ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ವಿರೋಧಿ ಗಳು ನನ್ನ ವಿರುದ್ಧ ಮಾಡಿರುವುದು ಪ್ರಚಾರ ಅಲ್ಲ, ಅಪಪ್ರಚಾರ ಎಂಬುದು ಜನರಿಗೆ ಗೊತ್ತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೋಲಿಗೆ ಅವರ ಆಡಳಿತ ವೈಫಲ್ಯವೇ ಕಾರಣ.
-ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ ಕ್ಷೇತ್ರ
ಈ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಪರಿಶ್ರಮ, ತ್ಯಾಗ ಇದೆ. ಈ ಹೋರಾಟ ಬಿಜೆಪಿಯ ನೈತಿಕ ವಿಜಯ. ಟೀಮ್ ವರ್ಕ್ ಆಗಿ ಕೆಲಸ ಮಾಡಿದ್ದೇವೆ. ಕಾರ್ಯತಂತ್ರ ರೂಪಿಸಿದ ಪರಿಣಾಮ ಬಿಜೆಪಿ ಗೆದ್ದಿದೆ. ಬಹಳ ಅಂತರದ ಗೆಲವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಪಕ್ಷಬೇಧ ರಹಿತವಾಗಿ ಕೆಲಸ ಮಾಡುತ್ತೇನೆ. ಇದು ಕಾರ್ಯಕರ್ತರ ಗೆಲುವು.
-ಲಾಲಾಜಿ ಆರ್.ಮೆಂಡನ್, ಶಾಸಕರು, ಕಾಪು ಕ್ಷೇತ್ರ
ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ಆಶೀರ್ವಾದದಿಂದ ಬಹಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಯಾವುದೇ ಪಕ್ಷಬೇಧ ಇಲ್ಲದೆ ಬೈಂದೂರಿನ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು.
-ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು ಕ್ಷೇತ್ರ
ಈ ಬಾರಿಯ ಚುನಾವಣೆಯಲ್ಲಿ ನಿರಾಶಾದಾಯಕ ಫಲಿತಾಂಶ ಬಂದಿದೆ. ಜನಾದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಯಾಕೆ ಹೀಗೆ ಆಯಿತು ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತೇವೆ. ಅಭಿವೃದ್ಧಿ, ಜನಪರ ಮತ್ತು ಭ್ರಷ್ಟಚಾರ ರಹಿತ ಆಡಳಿತವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಆದರೂ ಜನರ ಯಾಕೆ ತಿರಸ್ಕರಿಸಿದ್ದಾರೆಂಬುದು ಗೊತ್ತಿಲ್ಲ.
-ಜನಾರ್ದನ ತೋನ್ಸೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಜಿಲ್ಲೆಯಲ್ಲಿ 6746 ನೋಟಾ ಮತಗಳು
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಐದು ಮತಕ್ಷೇತ್ರಗಳಲ್ಲಿ ನೋಟಾ ಮತಗಳು ಭಾರೀ ಸಂಖ್ಯೆಯಲ್ಲಿ ಚಲಾವಣೆಗೊಂಡವು. ಹೆಚ್ಚಿನ ಕಡೆಗಳಲ್ಲಿ 4-5ನೇ ಸ್ಥಾನವನ್ನು ನೋಟಾ ಮತಗಳೇ ಪಡೆದುಕೊಂಡವು. ಜಿಲ್ಲೆಯಲ್ಲಿ ಒಟ್ಟು 6746 ನೋಟಾ ಮತಗಳು ಚಲಾವಣೆಗೊಂಡವು.
ಬೈಂದೂರಿನಲ್ಲಿ 1647, ಕುಂದಾಪುರದಲ್ಲಿ 1831, ಉಡುಪಿಯಲ್ಲಿ 1089, ಕಾಪುವಿನಲ್ಲಿ 839 ಹಾಗೂ ಕಾರ್ಕಳದಲ್ಲಿ 1340 ನೋಟಾ ಮತಗಳು ದಾಖಲಾಗಿದ್ದವು. ಆದರೆ ಈ ಬಾರಿ ವಿಜಯದ ಅಂತರ 10,000ವನ್ನು ದಾಟಿದ್ದರಿಂದ ನೋಟಾ ಮತಗಳು ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ.
ಗರಿಷ್ಠ ಮತ್ತು ಕನಿಷ್ಠ ಅಂತರ
ನಿರೀಕ್ಷೆಯಂತೆ ಕುಂದಾಪುರ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿದ ದಾಖಲೆಯನ್ನು ತನ್ನಲ್ಲೇ ಉಳಿಸಿಕೊಂಡರು. ಈ ಬಾರಿ ಅವರ ಗೆಲುವಿನ ಅಂತರ 50ಸಾವಿರ ಮತಗಳನ್ನು ದಾಟಿ ಮುನ್ನಡೆದಿದ್ದು ಹೊಸ ವಿಕ್ರಮವಾಗಿದೆ.
ತನ್ನ ಹೊಸ ಕಾಂಗ್ರೆಸ್ ಎದುರಾಳಿ ರಾಕೇಶ್ ಮಲ್ಲಿ ಅವರನ್ನು 56,405 ಮತಗಳ ಅಂತರದಿಂದ ಅವರು ಹಿಮ್ಮೆಟ್ಟಿಸಿದರು. 1999ರ ತನ್ನ ಮೊದಲ ಸ್ಪರ್ಧೆಯಲ್ಲಿ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ ಅವರನ್ನು 1,021 ಮತಗಳಿಂದ ಸೋಲಿಸಿದ್ದ ಹಾಲಾಡಿ, 2004ರಲ್ಲಿ ಅಶೋಕಕುಮಾರ್ ಶೆಟ್ಟಿ ಅವರನ್ನು 19,665ಮತಗಳಿಂದ, 2008ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು 25,083ರಿಂದ ಹಾಗೂ 2013ರಲ್ಲಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರನ್ನು 40,612 ಮತಗಳ ಅಂತರದಿಂದ ಹಿಮ್ಮೆಟ್ಟಿಸಿದ್ದರು. ಈ ಬಾರಿ ಅಂತರ ಇನ್ನಷ್ಟು ವಿಸ್ತರಣೆಗೊಂಡಿದೆ.
ಈ ಬಾರಿ ಕನಿಷ್ಠ ಮತಗಳ ಅಂತರದ ದಾಖಲೆ ಲಾಲಾಜಿ ಮೆಂಡನ್ ಅವರದ್ದಾಗಿದೆ. ಕಾಪು ಕ್ಷೇತ್ರದಲ್ಲಿ ಅವರು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರನ್ನು 11,917 ಮತಗಳ ಅಂತರದಿಂದ ಸೋಲಿಸಿದರು. 2013ರಲ್ಲಿ ವಿನಯ ಕುಮಾರ್ ಸೊರಕೆ ಅವರು ಲಾಲಾಜಿ ಮೆಂಡನ್ರನ್ನು 1,855 ಮತಗಳಿಂದ ಸೋಲಿಸಿದ್ದರು. ಕಳೆದ ಸತತ ಐದು ಚುನಾವಣೆಗಳಲ್ಲಿ ವಿಜಯಿ ಅಭ್ಯರ್ಥಿಯ ಗೆಲುವಿನ ಅಂತರ 2000ಕ್ಕಿಂತ ಕಡಿಮೆ ಇದ್ದು, 1972ರ ನಂತರ ಇದು ಮೊದಲ ಬಾರಿ 10,000 ಗಡಿ ದಾಟಿದೆ.