ಹೊಸ ವಿಧಾನಸಭೆ ಪ್ರವೇಶಿಸುವ ಮುಸ್ಲಿಂ, ಕ್ರೈಸ್ತ ಶಾಸಕರು ಎಷ್ಟು ಗೊತ್ತೇ ?
ಗಣನೀಯವಾಗಿ ಇಳಿದ ಅಲ್ಪಸಂಖ್ಯಾತ ಶಾಸಕರ ಸಂಖ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 15 : ಮಂಗಳವಾರ ಪ್ರಕಟವಾದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಆಯ್ಕೆಯಾದ ಮುಸ್ಲಿಮರ ಸಂಖ್ಯೆ 7 ಕ್ಕೆ ಇಳಿದಿದೆ. ಇದು ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಮುಸ್ಲಿಮರ ಈವರೆಗಿನ ಅತ್ಯಂತ ಕಡಿಮೆ ಸಂಖ್ಯೆ ಎಂದು ಹೇಳಲಾಗಿದೆ. ಕಳೆದ (14ನೇ ) ವಿಧಾನಸಭೆಯಲ್ಲಿ 11 ಮುಸ್ಲಿಂ ಶಾಸಕರಿದ್ದರು.
ಮಂಗಳೂರು ಕ್ಷೇತ್ರದಿಂದ ಯು.ಟಿ ಖಾದರ್, ಬೀದರ್ ನಿಂದ ರಹೀಮ್ ಖಾನ್ , ಬೆಂಗಳೂರಿನ ಚಾಮರಾಜಪೇಟೆಯಿಂದ ಝಮೀರ್ ಅಹ್ಮದ್ ಖಾನ್ , ಗುಲ್ಬರ್ಗ ಉತ್ತರದಿಂದ ಕನೀಜ್ ಫಾತಿಮಾ, ಮೈಸೂರಿನ ನರಸಿಂಹರಾಜದಿಂದ ತನ್ವಿರ್ ಸೇಠ್ , ಬೆಂಗಳೂರಿನ ಶಿವಾಜಿ ನಗರದಿಂದ ರೋಷನ್ ಬೇಗ್ ಹಾಗೂ ಬೆಂಗಳೂರಿನ ಶಾಂತಿ ನಗರದಿಂದ ಎನ್.ಎ ಹಾರಿಸ್ - ಇವರೆಲ್ಲರೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
14ನೇ ವಿಧಾನಸಭೆಯಲ್ಲಿದ್ದ ಬೆಳಗಾವಿ ಉತ್ತರದ ಫೈರೋಜ್ ಸೇಠ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಮಂಗಳೂರು ಉತ್ತರದ ಮೊಯ್ದಿನ್ ಬಾವಾ ಈ ಬಾರಿ ಸೋಲನುಭವಿಸಿದ್ದಾರೆ.
ರಾಯಚೂರಿನಿಂದ ಸಯ್ಯದ್ ಯಾಸೀನ್, ಕೋಲಾರದಿಂದ ಸಯ್ಯದ್ ಝಮೀರ್ ಪಾಷಾ, ಬಿಜಾಪುರ ನಗರದಿಂದ ಅಬ್ದುಲ್ ಹಮೀದ್ ಮುಶ್ರೀಫ್ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದವರು. ಬಿಜಾಪುರ ನಗರದಿಂದ ಶಾಸಕರಾಗಿದ್ದ ಮಖ್ಬೂಲ್ ಭಾಗವನ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.
ಏಕೈಕ ಕ್ರೈಸ್ತ ಶಾಸಕ
ಈ ಬಾರಿ ವಿಧಾನಸಭೆ ಪ್ರವೇಶಿಸಲಿರುವ ಕ್ರೈಸ್ತ ಶಾಸಕ ಬೆಂಗಳೂರಿನ ಸರ್ವಜ್ಞನಗರದಿಂದ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ ಜಾರ್ಜ್ ಒಬ್ಬರೇ. ಕಳೆದ ವಿಧಾನಸಭೆಯಲ್ಲಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಈ ಬಾರಿ ಸೋತಿದ್ದಾರೆ. ಕ್ರೈಸ್ತ ಸಮುದಾಯದ ಐವನ್ ಡಿಸೋಜ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.







