ಸಂಘಟನೆಯ ಶಕ್ತಿಯಿಂದ ನಮಗೆ ಗೆಲುವು: ಮಟ್ಟಾರು

ಉಡುಪಿ, ಮೇ 16: ಕಳೆದ ಎರಡು ವರ್ಷಗಳಿಂದ ಪಕ್ಷದ ಸಾವಿರಾರು ಕಾರ್ಯಕರ್ತರ ಹಗಲಿರುಳ ನಿರಂತರ ಅವಿರತ ಪರಿಶ್ರಮದಿಂದ, ಪಕ್ಷದ ಹಿರಿಯ ನಾಯಕರ ಸಮರ್ಥ ಮಾರ್ಗದರ್ಶನದಿಂದಾಗಿ ಬಿಜೆಪಿ ಪಕ್ಷ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐದು ಸ್ಥಾನವನ್ನು ಗೆದ್ದು ಹೊಸ ದಾಖಲೆ ಬರೆಯಲು ಸಾಧ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಕಡಿಯಾಳಿಯ ಪಕ್ಷದ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಯ ಶಕ್ತಿಯಿಂದಾಗಿಯೇ ನಮಗೀ ನಿರೀಕ್ಷಿತ ಗೆಲುವು, ಅನಿರೀಕ್ಷಿ ತವಾದ ಅಂತರದಲ್ಲಿ ನಮಗೆ ಒಲಿದಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಕ್ಷದ ಈ ಅಭೂತಪೂರ್ವ ಯಶಸ್ಸಿಗೆ ಮೊದಲು ತಾವು ಕಾರ್ಯಕರ್ತರನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಕಂಡುಬಂದ ವಾತಾವಾರಣ ನಮಗೆ ಐದೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಮೂಡಿಸಿತು. ಚುನಾವಣೆಯ ದಿನ ಜಿಲ್ಲೆಯಾದ್ಯಂತ ಮತಗಟ್ಟೆಗಳಿಗೆ ಭೇಟಿ ನೀಡಿದಾಗ ವಿಶ್ವಾಸ ಇಮ್ಮಡಿಗೊಂಡಿತು. ಮತಎಣಿಕೆಯ ಬಳಿಕ ನಮ್ಮ ವಿಶ್ವಾಸ ನೂರಕ್ಕೆ ನೂರು ನಿಜವಾಯಿತು ಎಂದರು.
ನಮ್ಮದೇ ಶಾಸಕರಿದ್ದ ಕಾರ್ಕಳ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕುಂದಾಪುರ ಕ್ಷೇತ್ರದಲ್ಲಿ ನಮಗೆ ಅಂಥ ದೊಡ್ಡ ಸವಾಲು ಇರಲಿಲ್ಲ. ಆದರೆ ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಎಲ್ಲರೂ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿರುವುದರಿಂದ ನಮ್ಮ ಮುಂದೆ ಕಠಿಣ ಸವಾಲು ಇತ್ತು. ಕಾರ್ಯಕರ್ತರು, ವಿಸ್ತಾರಕರು ಹಾಗೂ ಪೇಜ್ ಪ್ರಮುಖರ ಅವಿರತ ಪರಿಶ್ರಮದಿಂದ ಈ ಸವಾಲನ್ನು ನಾವು ಯಶಸ್ವಿಯಾಗಿ ನಿಭಾಯಿಸಿ ನಿರೀಕ್ಷೆಗಿಂತಲೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದೇವೆ ಎಂದು ಮಟ್ಟಾರು ನುಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉಡುಪಿಗೆ ಬಂದು ಎರಡು ದಿನ ಇಲ್ಲಿದ್ದು, ನಡೆಸಿದ ಸತತ ಸಭೆ, ನೀಡಿದ ಸಲಹೆ ನಮ್ಮ ಕಾರ್ಯಕರ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿದ್ದರೆ, ಚುನಾವಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ನೀಡಿದ ಭೇಟಿ ಇಡೀ ಜಿಲ್ಲೆಯ ಚಿತ್ರಣವನ್ನು ಬದಲಿಸಿತು. ಇದರೊಂದಿಗೆ ರಾಷ್ಟ್ರೀಯ ಉಸ್ತುವಾರಿಗಳಾಗಿ ಬಂದ ಓಂಪ್ರಕಾಶ್ ಮಾಥೂರ್ ಹಾಗೂ ಉತ್ತರ ಪ್ರದೇಶದ ಮಹೇಂದ್ರ ಶರ್ಮ ನೀಡಿದ ಮಾರ್ಗ ದರ್ಶನದಲ್ಲಿ ನಾವು ನಮ್ಮೆಲ್ಲಾ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿ ಸಲು ಸಾಧ್ಯವಾಯಿತು ಎಂದರು.
2014ರ ಲೋಕಸಭಾ ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಪಕ್ಷದ ಪರ ವಾಗಿ ಕಂಡುಬಂದ ವಾತಾವರಣ ಇನ್ನೂ ಮುಂದುವರಿದಿರುವುದು ಈ ಚುನಾವಣೆ ಯಲ್ಲಿ ಸಾಬೀತಾಗಿದೆ. ಅನಂತರ ನಡೆದ ಗ್ರಾಪಂ, ತಾಪಂ, ಜಿಪಂ ಚುನಾವಣೆ ಗಳಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಪಡೆದಿದ್ದು, ವಿಧಾನಸಭಾ ಚುನಾವಣೆಯಲ್ಲೂ ಇಂದು ಪುನರಾವರ್ತನೆಯಾಗಿದೆ ಎಂದವರು ವಿಶ್ಲೇಷಿಸಿದರು.
ದ್ವೇಷದ ರಾಜಕಾರಣವಿಲ್ಲ: ಜಿಲ್ಲೆಯ ಐದು ಶಾಸಕ ಸ್ಥಾನಗಳು ನಮಗೆ ದೊರಕಿದರೂ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ನಮ್ಮ ಗುರಿ ಅಭಿವೃದ್ಧಿ ರಾಜಕಾರಣವಾಗಿದೆ. ನಾವು ಪಕ್ಷ, ಜಾತಿ, ಮತಗಳ ಬೇಧವಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಗುರಿಯಿಟ್ಟುಕೊಂಡಿದ್ದೇವೆ. ನಾವೀಗಾ ಗಲೇ ಪ್ರಕಟಿಸಿದ ಪ್ರಣಾಳಿಕೆಯ ಅನುಷ್ಠಾನಕ್ಕಾಗಿ ಶಾಸಕರನ್ನು ಕೂರಿಸಿಕೊಂಡು ತಿಂಗಳಿಗೊಂದು ಚಿಂತನ-ಮಂಥನ ಸಭೆ ನಡೆಸುತ್ತೇವೆ. ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ನಡೆಸುತ್ತೇವೆ ಎಂದರು.
ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಶ್ರಮ ಇಲ್ಲಿಗೆ ನಿಲ್ಲದೇ ನಿರಂತರ ವಾಗಿ ಮುಂದುವರಿಯಲಿದೆ. ಮುಂದಿನ ತಿಂಗಳು ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೆ. ಅದರ ನಂತರ ನಗರಸಭೆ ಚುನಾವಣೆ ಬರಲಿದೆ. ಈ ಬಾರಿ ನಗರಸಭೆಯ 35ರಲ್ಲಿ ಕನಿಷ್ಠ 30 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡು ಅದಕ್ಕಾಗಿ ಶ್ರಮಿಸಲಿದ್ದೇವೆ.
ಇನ್ನು 2019ರ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ಅದನ್ನು ಸವಾಲಾಗಿ ತೆಗೆದುಕೊಂಡು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಗುರಿಯೊಂದಿಗೆ ಈಗಲೇ ಕಾರ್ಯೋನ್ಮುಖರಾಗುತ್ತೇವೆ. ಯುದ್ಧ ಬಂದಾಗ ಶಸ್ತ್ರಾಭ್ಯಾಸಕ್ಕಿಳಿಯದೇ ಈಗಲೇ ಪ್ರಯತ್ನ ಆರಂಭಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಪ್ರವೀಣ್ ಕಪ್ಪೆಟ್ಟು, ಶ್ರೀಶನಾಯಕ್, ಹೇಮಂತ ಕುಮಾರ್, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.







