ಜೂನ್ 08 ರಂದು ವಿಧಾನ ಪರಿಷತ್ ಚುನಾವಣೆ: ನೀತಿಸಂಹಿತೆ ಜಾರಿ
ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಎಂ.ಲೋಕೇಶ್

ಶಿವಮೊಗ್ಗ, ಮೇ 18 : ಜೂನ್ 08 ರಂದು ನಡೆಯಲಿರುವ ವಿಧಾನ ಪರಿಷತ್ ದ್ವೈವಾರ್ಷಿಕ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಚುನಾವಣೆಗೆ ಮೇ 15 ರಂದು ಅಧಿಸೂಚನೆ ಹೊರಡಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಹೇಳಿದರು.
ಶುಕ್ರವಾರ ಡಿ.ಸಿ. ಕಚೇರಿಯಲ್ಲಿ ನಡೆದಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಈ ಚುನಾವಣೆಗೆ ಮೇ 22 ನಾಮಪತ್ರ ಸಲ್ಲಿಸಲು ಕೊನೆ ದಿನ. ಈ ನಾಮಪತ್ರಗಳನ್ನು 23ರಂದು ಪರಿಶೀಲಿಸಲಾಗುವುದು. ಮೇ 25 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ 08ರಂದು ನಡೆಯಲಿರುವ ಚುನಾವಣೆಯ ಮತಎಣಿಕೆಯು ಜೂನ್ 12 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದರು.
ವಿಭಾಗೀಯ ಆಯುಕ್ತರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದು, ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಚುನಾವಣೆಯ ಉಸ್ತುವಾರಿಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಚುನಾವಣೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಇಲಾಖೆ ಉಪ ಆಯುಕ್ತರು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ-1 ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲಾ ಮಟ್ಟದ ತಂಡದಲ್ಲಿರುವರು.
ಮಹಾನಗರಪಾಲಿಕೆ ಮುಖ್ಯ ಆಡಳಿತಾಧಿಕಾರಿ, ಕಂದಾಯ ಅಧಿಕಾರಿಗಳು, ಅಬಕಾರಿ ಅಧೀಕ್ಷಕರು ಹಾಗೂ ಕೋಟೆ/ದೊಡ್ಡಪೇಟೆ ಪೊಲೀಸ್ ಸರ್ಕಲ್ ಇನ್ಸ್ಫೆಕ್ಟರ್ ಅವರು ಮಹಾನಗರಪಾಲಿಕೆ ತಂಡದಲ್ಲಿರುವರು. ಉಳಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ವೃತ್ತ ನಿರೀಕ್ಷಕರು ಹಾಗೂ ಅಬಕಾರಿ ಇನ್ಸ್ಫೆಕ್ಟರ್ರವರು ತಾಲೂಕು ಮಟ್ಟದ ತಂಡದಲ್ಲಿದ್ದು, ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಮತಪತ್ರ: ಮತಗಟ್ಟೆಗಳನ್ನು ಆಯಾ ತಾಲೂಕು ತಹಶೀಲ್ದಾರರ ಕಚೇರಿಯಿಂದ ಮತಕೇಂದ್ರಕ್ಕೆ ರವಾನಿಸಿ ನಂತರ ಅವುಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಗ್ರಹಿಸಲಾಗುವುದು. ಅಂತಿಮವಾಗಿ ಕ್ರೋಡೀಕರಿಸಿದ ಮತಪೆಟ್ಟಿಗೆಗಳನ್ನು ಮೈಸೂರಿನ ವಿಭಾಗೀಯ ಆಯುಕ್ತರ ಸುಪರ್ದಿಗೆ ವಹಿಸಲಾಗುವುದು ಎಂದು ಹೇಳಿದರು.
ಸದರಿ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ರಾಜಕೀಯ ಪಕ್ಷದವರಿಗೆ ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. ರಾಜ್ಯದ ಶಿಕ್ಷಕರು ಹಾಗೂ ಪದವೀಧರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸುವಂತಿಲ್ಲ. ಸಚಿವರು ಯಾವುದೇ ವಿದ್ಯಾಸಂಸ್ಥೆಗಳು ಮತ್ತು ಪದವೀಧರ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ 2825 ಪುರುಷರು, 1638 ಮಹಿಳೆಯರು ಸೇರಿದಂತೆ ಒಟ್ಟು 4465 ಮತದಾರರು ಹಾಗೂ ಪದವೀಧರರ ಕ್ಷೇತ್ರಕ್ಕೆ 15,327 ಪುರುಷರು ಹಾಗೂ 8995 ಮಹಿಳೆಯರು ಸೇರಿದಂತೆ ಒಟ್ಟು 24,324 ಪುರುಷರು ಮತಚಲಾಯಿಸಲಿದ್ದಾರೆ. ಇವರಷ್ಟೇ ಅಲ್ಲದೇ ಇತ್ತೀಚೆಗೆ ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಮತ ಚಲಾಯಿಸಲಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಸಭೆ, ಸಮಾರಂಭಗಳನ್ನು ನಡೆಸುವ ಪೂರ್ವದಲ್ಲಿ ಚುನಾವಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರಚಾರ ಕಾರ್ಯಕ್ಕಾಗಿ ಪ್ರಚಾರ ಫಲಕಗಳ ಅಳವಡಿಸುವುದು, ಬ್ಯಾನರ್ ಹಾಕುವುದನ್ನು ನಿಷೇದಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.
64 ಮತಗಟ್ಟೆ ಸ್ಥಾಪನೆ,ಅನುಮತಿ ಕಡ್ಡಾಯ
ಈ ಚುನಾವಣೆಗೆ ಶಿಕ್ಷಕರ ಕ್ಷೇತ್ರಕ್ಕೆ 32 ಹಾಗೂ ಪದವೀಧರರ ಕ್ಷೇತ್ರಕ್ಕೆ 32 ಮತಗಟ್ಟೆ ಸೇರಿದಂತೆ ಒಟ್ಟು 64ಮತಗಟ್ಟೆಗಳನ್ನು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ 270 ಸಿಬ್ಬಂಧಿಗಳು, 70 ಮೈಕ್ರೋ ಆಬ್ಝರ್ವರ್ ಗಳು ಹಾಗೂ 70 ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುವುದು. ಇದರೊಂದಿಗೆ ಪ್ರತಿ ತಾಲೂಕಿನಲ್ಲಿ 02 ಪ್ಲೈಯಿಂಗ್ ಸ್ಕ್ವಾಡ್ಗಳನ್ನು ನೇಮಿಸಲಾಗಿದೆ.
ಪ್ರಸಕ್ತ ಚುನಾವಣೆಗೆ ಮತಪತ್ರಗಳನ್ನು ಬಳಸಲಾಗುತ್ತಿದ್ದು, 1, 2, 3, 4 ಹೀಗೆ ಆದ್ಯತೆಯ ಮತಗಳಿಗೆ ಅವಕಾಶವಿರಲಿದೆ. ಈ ಮತಗಟ್ಟೆಯಲ್ಲಿ ನೀರು, ನೆರಳು, ಬೆಳಕು ಹೀಗೆ ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಪ್ರಕಟಪಡಿಸುವ ಜಾಹಿರಾತು ಹಾಗೂ ಪ್ರಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಮಾಣಿಕರಣ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯನಿರ್ವಹಿಸಲಿದೆ. ಚುನಾವಣೆ ಸಂಬಂಧದ ಯಾವುದೇ ಜಾಹಿರಾತುಗಳು ಮತ್ತು ಟಿ.ವಿ.ಕೇಬಲ್, ರೇಡಿಯೋ, ಎಫ್ ಎಂ. ಚಾನಲ್ಗಳಲ್ಲಿ ಪ್ರದರ್ಶಿಸುವ ಪೂರ್ವದಲ್ಲಿ ಈ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮತದಾನ ದಿನಾಂಕದ 48 ಗಂಟೆಗಳ ಪೂರ್ವದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಮತದಾರರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ಕರೆ ಮಾಡಿ ದಾಖಲಿಸಬಹುದಾಗಿದೆ. ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ತಿಳಿಸಿದ್ದಾರೆ.







