ಕೇರಳದಲ್ಲಿ ಅಪರಿಚಿತ ವೈರಸ್ ಸೋಂಕಿಗೆ ಒಂದೇ ಕುಟುಂಬದ ಮೂವರು ಬಲಿ
6 ಮಂದಿಯ ಸ್ಥಿತಿ ಗಂಭೀರ
ಕೊಚ್ಚಿ, ಮೇ 20: ಅಪರಿಚಿತ ವೈರಸ್ ಸೋಂಕಿನಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ನಂತರ ಕೇರಳ ಸರಕಾರವು ತಜ್ಞರನ್ನು ಶೀಘ್ರ ರಾಜ್ಯಕ್ಕೆ ಕಳುಹಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.
ಅಪರಿಚಿತ ಸೋಂಕಿನಿಂದ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪೆರಂಬಾರದ ಕುಟುಂಬವೊಂದರ ಮೂವರು ಮೃತಪಟ್ಟಿದ್ದಾರೆ. ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, 25 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಯಾವ ವೈರಸ್ ಸೋಂಕು ಎಂದು ವೈದ್ಯರಿಗೆ ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ ಕೆಲ ಔಷಧಗಳನ್ನು ಸದ್ಯಕ್ಕೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯ ಸರಕಾರದ ಆರೋಗ್ಯ ಇಲಾಖೆಯು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ಒಂದನ್ನು ರಚಿಸಿದ್ದು, ಜಿಲ್ಲಾಧಿಕಾರಿ ಯು.ವಿ,ಜೋಸ್ ನೇತೃತ್ವದಲ್ಲಿ ಟಾಸ್ಕ್ ಫೋರ್ಟ್ ಒಂದನ್ನು ರಚಿಸಿದೆ. ಮೃತಪಟ್ಟವರಿಗೆ ಚಿಕಿತ್ಸೆ ನೀಡಿದ್ದ ಒಬ್ಬರು ನರ್ಸ್ ಹಾಗು ಅದೇ ಕುಟುಂಬದ ನಾಲ್ವರಿಗೆ ಇದೀಗ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
26 ವರ್ಷದ ಮುಹಮ್ಮದ್ ಸಾದಿಕ್, ಅವರ ಸಹೋದರ ಮುಹಮ್ಮದ್ ಸಾಲಿಹ್ ಹಾಗು ಸಂಬಂಧಿ ಮರಿಯಮ್ಮ ಮೃತಪಟ್ಟವರು.