ಟೆರ್ಜಾಗಿ ಪರಿಕಲ್ಪನೆಯ ಸ್ವಯಂ ಚಾಲಿತ ಉಪಕರಣ

ಉಡುಪಿ, ಮೇ 20: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಟೆರ್ಜಾಗಿ ಪರಿಕಲ್ಪನೆಯ ಸ್ವಯಂ ಚಾಲಿತ ಉಪಕರಣನ್ನು ಕಂಡು ಹಿಡಿದಿದ್ದಾರೆ.
ವಿದ್ಯಾರ್ಥಿಗಳಾದ ಕಿಶೋರ್, ಜೀವನ್ ಪೂಜಾರಿ, ರಕ್ಷಿತ್ ಮತ್ತು ಅನ್ವಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಹಲ್ದಾನ್ಕರ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಉಪಕರಣದಲ್ಲಿ ಮಣ್ಣಿನ ಒಣ ಸಾಂದ್ರತೆಯನ್ನು ಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದಾಗಿದೆ.
ಅದರ ಜೊತೆಗೆ ಮಣ್ಣಿನ ತಾಪಮಾನ, ಆರ್ದ್ರತೆ, ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಕೂಡ ನೀಡುತ್ತದೆ. ಪ್ರಸ್ತುತ ಅನುಸರಿಸುತ್ತಿರುವ ಸಾಂಪ್ರದಾಯಿಕ ವಿಧಾನದಲ್ಲಿ ಈ ಮೇಲಿನ ಅಂಶಗಳನ್ನು ಕಂಡುಹಿಡಿಯಲು ಒಂದು ದಿನ ಬೇಕಾಗುತ್ತದೆ ಮತ್ತು ದೊಡ್ಡ ಪ್ರಮಾಣದ ಉಪಕರಣದ ನೆರವು ಬೇಕಾಗುತ್ತದೆ.
ಆದರೆ ಈ ಉಪಕರಣದ ಖರ್ಚು ತುಂಬಾ ಕಡಿಮೆ ಇದ್ದು, ಸಮಯವು ಸಹ ಕಡಿಮೆಯಾಗುತ್ತದೆ. ಈ ಉಪಕರಣದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಮಣ್ಣಿನ ಮಾದರಿಯಲ್ಲಿನ ಅಂಶಗಳನ್ನು ಕಂಡುಹಿಡಿಯಲು ತುಂಬಾ ಸಹಕಾರಿ ಯಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.