ಎಂಒ 4 ಭತ್ತದ ಬೀಜದ ಕೊರತೆ: ಕರಾವಳಿ ರೈತರಲ್ಲಿ ಆತಂಕ
ಉಡುಪಿ, ಮೇ 20: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಕರಾವಳಿ ಮುಂಗಾರಿಗೆ ಸೂಕ್ತವಾಗಿರುವ ಎಂಒ 4 ಭತ್ತದ ಬಿತ್ತನೆ ಬೀಜದ ಕೊರತೆ ಎದು ರಾಗಿದ್ದು, ಇದು ಕರಾವಳಿಯ ರೈತರಲ್ಲಿ ಆತಂಕ ಸೃಷ್ಠಿಸಿದೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 45 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಗುರಿ ಹೊಂದಿದ್ದು, 2500 ಕ್ವಿಂಟಾಲ್ ಎಂಒ 4ಗೆ ಬೇಡಿಕೆ ಬಂದಿದೆ. ಆದರೆ ಈ ಬಾರಿ 600 ಕ್ವಿಂಟಾಲ್ ಮಾತ್ರವೇ ಪೂರೈಕೆಯಾಗಿದ್ದು 1400 ಕ್ವಿಂಟಾಲ್ ಬೀಜದ ಕೊರತೆ ಉಂಟಾಗಿದೆ.
ವಿವಿಧೆಡೆ ಬೆಳೆಯುವ ನಾನಾ ತಳಿಗಳನ್ನು ಕರ್ನಾಟಕ ಬೀಜ ನಿಗಮ ಖರೀದಿಸಿ ಅಲ್ಲಿಂದ ಜಿಲ್ಲೆಯ ರೈತ ಸಂಪರ್ಕ ಕೇಂದ್ರಕ್ಕೆ ಹಂಚಿ ವಿತರಿಸ ಲಾಗುತ್ತದೆ. ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಹೋಬಳಿಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಯಾಗಲಿದೆ. ಸದ್ಯ 350 ಕ್ವಿಂಟಾಲ್ ಎಂಒ 4 ಬಿತ್ತನೆ ಬೀಜವನ್ನು ಕಾರ್ಕಳ, ಅಜೆಕಾರು, ಬ್ರಹ್ಮಾವರ, ಕೋಟ, ಬೈಂದೂರು, ವಂಡ್ಸೆ ರೈತ ಸಂಪರ್ಕ ಕೇಂದ್ರಗಳಿಗೆ ಹಂಚಿಕೆ ಮಾಡ ಲಾಗಿದೆ.
ಮುಂಗಾರಿನ ಕೊರತೆ: ಶಿವಮೊಗ್ಗದಲ್ಲಿ ಅಣೆಕಟ್ಟುಗಳ ನೀರನ್ನು ಆಧಾರಿಸಿ ಎಂಒ4 ಬಿತ್ತನೆ ಬೀಜ ವನ್ನು ಬೆಳೆಸಲಾಗುತ್ತಿದ್ದು, ಕಳೆದ ಬಾರಿ ಮುಂಗಾರಿನ ಕೊರತೆಯಿಂದ ಶಿವಮೊಗ್ಗ ದಲ್ಲಿ ನೀರಿನ ಅಭಾವ ಎದುರಾಗಿತ್ತು. ನೀರಿನ ಅಭಾವದಿಂದ ಅಲ್ಲಿನ ರೈತರು ಈ ಬೆಳೆಯನ್ನು ಬೆಳೆಸಲು ಮುಂದಾಗಿರಲಿಲ್ಲ. ಇದರ ಪರಿಣಾಮದಿಂದ ಬೀಜದ ಕೊರತೆ ತಲೆದೋರಿದೆ.
ಎಂಒ 4 ಬಿತ್ತನೆ ಬೀಜವು 135 ದಿನಗಳಲ್ಲಿ ಉತ್ತಮ ಇಳುವರಿ ನೀಡುವ ತಳಿ. ಕರಾವಳಿಯ ಮುಂಗಾರಿಗೆ ಸೂಕ್ತವಾಗಿರುವ ಈ ಬಿತ್ತನೆ ಬೀಜದ ಕೊರತೆ ಈ ಬಾರಿ ರೈತರನ್ನು ಕಾಡುತ್ತಿದೆ. ಒಂದು ಎಕರೆಗೆ 25 ಕೆ.ಜಿ. ಎಂಒ 4 ಬಿತ್ತನೆ ಬೀಜದ ಅವಶ್ಯವಿದ್ದು, 18ರಿಂದ 19 ಕ್ವಿಂಟಾಲ್ ಇಳುವರಿ ತೆಗೆಯಲು ಸಾಧ್ಯ ವಿದೆ. 135 ದಿನಗಳಲ್ಲಿ ಬೀಜದಿಂದ ಹೊಸ ಬೀಜ ಉತ್ಪಾದನೆ ಮಾಡಬಹು ದಾಗಿದೆ. ಎಂಒ 4 ಬಿತ್ತನೆ ಬೀಜದಿಂದ ಹೊಸ ಬೀಜ ಉತ್ಪಾದಿಸಿ 3 ವರ್ಷಕ್ಕೆ ಬಳಸಿಕೊಳ್ಳಬಹುದು.
‘ಕರಾವಳಿಯ ಬಹುತೇಕ ಮಂದಿ ಕೆಂಪಕ್ಕಿಯನ್ನು ಇಷ್ಟಪಡುವುದರಿಂದ ಎಂಒ 4 ತಳಿಯನ್ನೇ ರೈತರು ಮೆಚ್ಚಿಕೊಂಡಿದ್ದಾರೆ. ಈ ತಳಿಯಲ್ಲಿ ಅಧಿಕ ಇಳುವರಿ ಬರುವುದರಿಂದ ಕರಾವಳಿ ರೈತರು ಈ ಬೆಳೆಗೆ ಒಗ್ಗಿಕೊಂಡಿದ್ದಾರೆ. ಕೃಷಿ ಇಲಾಖಾ ಧಿಕಾರಿಗಳು ಕೊನೆಯ ಹಂತದಲ್ಲಿ ಬೀಜದ ಅಭಾವದ ಬಗ್ಗೆ ಮಾಹಿತಿ ನೀಡಿರುವುದರಿಂದ ಸಮಸ್ಯೆಯಾಗಿದೆ’ ಎಂದು ರೈತರು ದೂರಿದ್ದಾರೆ.
ಜಿಲ್ಲೆಯ ರೈತರ ಬೇಡಿಕೆಗೆ ಬೇಕಾದಷ್ಟು ಎಂಒ 4 ತಳಿ ದಾಸ್ತಾನು ಇಲ್ಲದ್ದರೂ ಪರ್ಯಾಯವಾಗಿ 131 ದಿನಗಳಲ್ಲಿ ಕಟಾವಿಗೆ ಬರುವ ಎಂಒ 16(350 ಕ್ವಿಂಟಾಲ್), 105 ದಿನಗಳಲ್ಲಿ ಕಟಾವು ಮಾಡುವ ಜ್ಯೋತಿ, ಜಯ ತಳಿ ಲಭ್ಯ ವಿದೆ. ಈ ಬಾರಿ ಎಂಒ 4 ತಳಿಯ ಉತ್ಪಾದನೆಯೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೀಜದ ಅಭಾವ ಎದುರಾಗಿದೆ ಎಂದು ಉಡುಪಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.







