ನನ್ನ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತಿದ್ದೇನೆ : ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ಬಂಟ್ವಾಳ, ಮೇ 22: ನನ್ನ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತಿದ್ದೇನೆ. ಕ್ಷೇತ್ರದ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಿದ್ದಕಟ್ಟೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿನಿಧಿಯಾಗಿ ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ, ಕ್ಷೇತ್ರದ ಎಲ್ಲಾ ಜನರ ರಕ್ಷಣೆಯನ್ನು ಮಾಡುತ್ತೇನೆ. ಪಕ್ಷದ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ತಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
2013ರ ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಕ್ಷೇತ್ರದಲ್ಲಿ ನಿರಂತರ ಪಾದಾಯಾತ್ರೆ ಮಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕಾರಣ ಗೆಲುವು ಸಾಧ್ಯವಾಯಿತು ಎಂದು ಕ್ಷೇತ್ರದ ಅಧ್ಯಕ್ಷ ದೇವದಾಸ ಶೆಟ್ಟಿ ಹೇಳಿದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪ್ರಮುಖರಾದ ರಮಾನಾಥ ರಾಯಿ, ಸತೀಶ್ ಪೂಜಾರಿ, ವಸಂತ ಅಣ್ಣಳಿಕೆ, ಹರೀಶ್ ಅಚಾರ್ಯ, ನಂದಕುಮಾರ್ ರೈ, ಗುಲಾಬಿ ಶೆಟ್ಟಿ, ದಯಾನಂದ ಸಪಲ್ಯ, ರಾಜೇಶ್ ಶೆಟ್ಟಿ, ನಾಗೇಶ್ ಮಾನಾಯಿ, ಸಂತೋಷ ರಾಯಿಬೊಟ್ಟು ಉಪಸ್ಥಿತರಿದ್ದರು.
ರತ್ನ ಕುಮಾರ್ ಚೌಟ ಸ್ವಾಗತಿಸಿ, ಎಸ್.ಪಿ. ಶ್ರೀಧರ ವಂದಿಸಿ, ಪ್ರಭಾಕರ ಪ್ರಭು ನಿರೂಪಿಸಿದರು. ಇದೇ ಸಂಧರ್ಭ ನೂತನ ಶಾಸಕರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅಭಿನಂದಿಸಿದರು.







