'ಶಿಕ್ಷಣ ವ್ಯವಸ್ಥೆಯ ಮರುವ್ಯಾಖ್ಯಾನ ಇಂದಿನ ಅಗತ್ಯ' : ಡಾ. ದಿನೇಶ್ ಸಿಂಗ್
ಭಾರತದ ಜ್ಞಾನ ಪರಂಪರೆಯನ್ನು ಪರಿಚಯಿಸಿದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್

ಮೂಡುಬಿದಿರೆ, 22 ಮೇ: 'ನಮಗೆ ನಮ್ಮದೇ ಆದ ಒಂದು ಅಂತರ್ ಧ್ವನಿಯಿರುತ್ತದೆ. ಆ ಅಂತರ್ ಧ್ವನಿಯನ್ನು ಅರಿತುಕೊಂಡು ಅದರಂತೆ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ನಿಜವಾದ ಯಶಸ್ಸು, ಉನ್ನತಿ ದೊರೆಯಲು ಸಾಧ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ತನ್ನ ಸೀಮಿತ ಚೌಕಟ್ಟನ್ನು ದಾಟಿ ವಿಸ್ತಾರವಾದ ಹರವಿಗೆ ತೆರೆದುಕೊಂಡಾಗ ಮಾತ್ರ ಶಿಕ್ಷಣದ ನಿಜ ಉದ್ದೇಶ ಸಾಧನೆಯಾಗುತ್ತದೆ' ಎಂದು ಗಣಿತಜ್ಞ, ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ದಿನೇಶ್ ಸಿಂಗ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜನೆಗೊಂಡ `ರೀ-ಡಿಫೈನಿಂಗ್ ಏಜ್ಯುಕೇಶನ್ ಟು ಎನೇಬಲ್ ದ ಯಂಗ್' ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸೃಜನಾತ್ಮಕ ಸಾಮಥ್ರ್ಯ ಹೆಚ್ಚಿದಾಗ ಮಾತ್ರ ಸಮಾಜ, ದೇಶ ಉನ್ನತಿಯನ್ನು ಕಾಣಲು ಸಾಧ್ಯ; ಆದ್ದರಿಂದ ಶಿಕ್ಷಣ ವ್ಯವಸ್ಥೆಯು ಪಠ್ಯ ಕೇಂದ್ರಿತ ಹಾಗೂ ಕಪ್ಪು ಹಲಗೆ ಶಿಕ್ಷಣದಿಂದ ಹೊರ ಬಂದು ವಿದ್ಯಾರ್ಥಿಗಳ ಕ್ರಿಯಾತ್ಮಕತೆ, ಆಸಕ್ತಿಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ. ರವೀಂದ್ರನಾಥ ಟ್ಯಾಗೋರರ 'ಶಾಂತಿನಿಕೇತನ' ಬೋಧಿಸಿದ್ದು ಇದನ್ನೇ; ಮಹಾತ್ಮ ಗಾಂಧೀಜಿಯವರು ಹೇಳಿದ್ದೂ ಇದನ್ನೇ. ಇನ್ನು ವಿದ್ಯಾರ್ಥಿಗಳು ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೇ ಉದ್ಯೋಗದಾತರಾಗಿ ಬೆಳೆಯುವತ್ತ ಗಮನ ಹರಿಸಬೇಕಿದೆ. ಇದಕ್ಕಾಗಿ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುವ್ಯಾಖ್ಯಾನಿಸುವುದು ತುಂಬಾ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಾತನಾಡಿ ದೊಡ್ಡ ದೊಡ್ಡ ಆವಿಷ್ಕಾರಗಳಾಗುವುದು ಸಣ್ಣ ಸಣ್ಣ ಸಾಮಾಜಿಕ ಅಗತ್ಯತೆಗಳಿಂದಲೇ. ಆದ್ದರಿಂದ ಯುವಜನತೆ ವಿಜ್ಞಾನ ಪ್ರಯೋಗಗಳ ಬಗ್ಗೆ ಪುಸ್ತಕಗಳಲ್ಲಿ ಓದುವುದಕ್ಕಿಂತ ನಮ್ಮ ನಿತ್ಯ ಜೀವನದ ಅಗತ್ಯತೆಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು. ಭಾರತ ದೇಶವು ಅದ್ಭುತ ಆವಿಷ್ಕಾರಗಳಿಗೆ ತಾಯಿಯಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಜ್ಞಾನದ ಸೆಲೆಯಾಗಿತ್ತು ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಡಾ. ದಿನೇಶ್ ಸಿಂಗ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಸಾಹತುಶಾಹಿ ಪದ್ಧತಿ ಭಾರತದ ವಿಜ್ಞಾನ ಕ್ಷೇತ್ರದ ಮೇಲೆ ಬೀರಿದ ದುಷ್ಪರಿಣಾಮ, ಪ್ರಾಯೋಗಿಕ ಕಲಿಕೆ, ಔದ್ಯೋಗಿಕ ಶಿಕ್ಷಣ, ಮೀಸಲಾತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಕಡ್ಡಾಯ ಹಾಜರಾತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ಜ್ಞಾನದ ಕಲ್ಪವೃಕ್ಷ ಭಾರತ
ಭಾರತವು ಭೌತಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿದ ದೇಶವಾಗಿತ್ತು. ಪ್ಲಾಸ್ಟಿಕ್ ಸರ್ಜರಿಯಂತಹ ಚಮತ್ಕಾರಿ ಸಂಶೋಧನೆಗಳು ಪಾಶ್ಚಾತ್ಯ ದೇಶಗಳಲ್ಲಿ ಕಣ್ತೆರೆಯುವ ಮೊದಲೇ ಭಾರತದ ಸುಶ್ರುತ ಮಹರ್ಷಿ ಅದನ್ನು ಸಾವಿರಾರು ವರ್ಷಗಳ ಹಿಂದೆ ನಿರೂಪಿಸಿದ್ದರು. ಇಲ್ಲಿ ಉತ್ಪಾದನೆಯಾಗುತ್ತಿದ್ದ ಉಕ್ಕು ವಿದೇಶಗಳ ಸಂಶೋಧನೆಗಾಗಿ ರಫ್ತಾಗುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲದ ಸಂಗತಿ. ಇನ್ನು ಗಣಿತದ ಖ್ಯಾತ 'ಟ್ರೈಆ್ಯಂಗ್ಯುಲರ್ ಮಾಡೆಲ್'ನ ಮೂಲ ಇರುವದು ಭಾರತೀಯ ತಜ್ಞ ಪಿಂಗಳನ ಸಂಶೋಧನೆಗಳಲ್ಲಿ. ಇದು ಪಿಂಗಳನ `ಛಂದಸೂತ್ರ' ಕೃತಿಯಲ್ಲಿ ಉಲ್ಲೇಖಗೊಂಡಿದೆ. ಪಾಣಿನಿಯ ಸಂಸ್ಕೃತ ವ್ಯಾಕರಣವನ್ನು ಆಧಾರವಾಗಿಟ್ಟುಕೊಂಡೇ ನಾಮ್ಚೊಮ್ಸ್ಕಿ ಎಂಬ ಪ್ರಖ್ಯಾತ ಮಾನವಿಕ ಶಾಸ್ತ್ರದ ಸಾಧಕ ಬೆಳೆದಿದ್ದು. ಹೀಗೆ ಭಾರತ ಅತ್ಯಂತ ಪ್ರಾಚೀನ ಕಾಲದಿಂದಲೂ ಜ್ಞಾನದ ಕಲ್ಪವೃಕ್ಷವಾಗಿ, ಕೇಂದ್ರವಾಗಿ ಬೆಳೆದು ನಿಂತಿದೆ. ವಿದೇಶಿಗರೆಲ್ಲರಿಗೂ ಮೂಲ ಆಧಾರವಾಗಿ ನಿಂತಿರುವ ಭಾರತದಲ್ಲಿ ಮಾತ್ರ ವಿದ್ಯಾರ್ಥಿಗಳು ಅರಿವಿನ ಔನ್ನತ್ಯ ಸಾಧಿಸಲು ವಿಫಲರಾಗುತ್ತಿದ್ದಾರೆ. ಇದಕ್ಕಾಗಿ ವಿದೇಶೀ ಶಿಕ್ಷಣಕ್ಕೆ ಮೊರೆ ಹೋಗುತ್ತಿದ್ದಾರೆ. ಇದು ನಮ್ಮ ದುರಂತ ಎಂದರು.







