ಪುತ್ತೂರು; ತುಟ್ಟಿ ಭತ್ತೆ, ಕನಿಷ್ಠ ಕೂಲಿ ಜಾರಿಗೆ ಆಗ್ರಹ ಬೀಡಿ : ಕಾರ್ಮಿಕರ ಸಂಘದಿಂದ ಧರಣಿ

ಪುತ್ತೂರು,ಮೇ 22: ಬೀಡಿ ಕಾರ್ಮಿಕರಿಗೆ ಬಾಕಿಯಾಗಿರುವ ತುಟ್ಟಿ ಭತ್ತೆ ಪಾವತಿ ಹಾಗೂ ಕನಿಷ್ಠ ಕೂಲಿಯನ್ನು ನೀಡುವಂತೆ ಆಗ್ರಹಿಸಿ ಮಂಗಳವಾರ ಪುತ್ತೂರಿನ ಗಣೇಶ್ ಬೀಡಿ ಕಂಪೆನಿಯ ಮುಂಬಾಗದಲ್ಲಿ ತಾಲೂಕು ಬೀಡಿ ಕೆಲಸಗಾರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಭಟ್ ಅವರು ಕಂಪೆನಿಯು ಬಡ ಬೀಡಿ ಕಾರ್ಮಿಕರನ್ನು ದುಡಿಸಿ ಬದುಕಲು ತಕ್ಕ ವೇತನವನ್ನೂ ನೀಡದೆ ಸತಾಯಿಸುತ್ತಿದೆ. ಈ ನಡುವೆ ಸರ್ಕಾರ ನಿಗದಿಗೊಳಿಸಿದ ಸಾವಿರ ಬೀಡಿಗೆ ರೂ. 220.50 ಕನಿಷ್ಠ ಕೂಲಿಯನ್ನೂ ನೀಡುತ್ತಿಲ್ಲ. 3 ವರ್ಷಗಳಿಂದ ತುಟ್ಟಿ ಭತ್ತೆಯನ್ನೂ ನೀಡದೆ ವಂಚನೆ ಎಸಗುತ್ತಿರುವುದು ಖಂಡನೀಯ ಎಂದರು.
ತಕ್ಷಣವೇ ಕಾರ್ಮಿಕ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬೀಡಿ ಕಾರ್ಮಿಕರ ವೇತನ, ಬಾಕಿಯಾದ ತುಟ್ಟಿ ಭತ್ತೆ ಹಾಗೂ ಬೋನಸ್ ಇನ್ನು ಮುಂದೆ ಬ್ಯಾಂಕ್ ಚೆಕ್ ಮೂಲಕ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದ ಅವರು ಬನಮ್ಮ ಬೇಡಿಕೆ ಈಡೇರದಿದ್ದಲ್ಲಿ ಜೂನ್ ತಿಂಗಳಿಂದ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಗುಡ್ಡಪ್ಪ ಗೌಡ, ಪದಾಧಿಕಾರಿಗಳಾದ ಕೇಶವ ಪುತ್ತೂರು, ಜಾನಕಿ ಕೊಪ್ಪ, ವಿಜಯ ರೈ, ಯೋಗೀಶ್, ಸಂಜೀವ ನಾಯ್ಕ, ಜಯಶ್ರೀ, ಪುಷ್ಪಾ, ರಾಮಚಂದ್ರ, ಸುಮಿತ್ರ ಮತ್ತಿತರರು ಉಪಸ್ಥಿತರಿದ್ದರು.