ಬಂಟ್ವಾಳ: ಮಳೆಗಾಲದ ಪೂರ್ವಸಿದ್ಧತಾ ಸಭೆ

ಬಂಟ್ವಾಳ, ಮೇ 22: ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಕರ್ಜಗಿ ಅವರ ಅಧ್ಯಕ್ಷತೆಯಲ್ಲಿ ಮಳೆಗಾಲದ ಪೂರ್ವಸಿದ್ಧತಾ ಸಭೆಯು ಬಂಟ್ವಾಳ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ತಾಲೂಕಿನಲ್ಲಿ ದಿನದ 24 ಗಂಟೆ ಕಾರ್ಯಾಚರಣೆ ಮಾಡಲು ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಕಲ್ಪಿಸಲಾವುದು. ಅಲ್ಲದೆ, ನದಿತೀರದ ಆಯಕಟ್ಟಿನ ಪ್ರದೇಶ, ತಗ್ಗು ಪ್ರದೇಶಗಳಿಗೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಎ.ಸಿ. ಮಹೇಶ್ ಕರ್ಜಗಿ ಅವರು ಸೂಚನೆ ನೀಡಿದರು.
ಸಭೆಯಲ್ಲಿ ನದಿತೀರ ಪ್ರದೇಶದಲ್ಲಿರುವ ಶಾಲೆ, ಅಂಗನವಾಡಿಗಳಿಗೆ ವಿಶೇಷ ನಿಗಾ ವಹಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು. ನದಿತೀರದ ಆಯಕಟ್ಟಿನ ಪ್ರದೇಶಗಳಲ್ಲಿರುವ ನಾಡ ದೋಣಿಗಾರರು, ಈಜುಗಾರರನ್ನು ತಂಡವನ್ನು ರಚಿಸಿ ಅವರ ಸಹಾಯ ಪಡೆಯುವ ಬಗ್ಗೆ ನಿರ್ಧರಿಸಲಾಯಿತು.
ಪ್ರಾಕೃತಿಕ ವಿಕೋಪದಿಂದ ಸಂಭವಿಸಬಹುದಾದ ಭೂ ಕುಸಿತ, ರಸ್ತೆ ಅಡಚಣೆ ಮತ್ತಿತರ ಮಾಹಿತಿಗಳನ್ನು ತಕ್ಷಣ ನೀಡಬೇಕಾಗಿ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಬಂಟ್ವಾಳ ತಹಶೀಲ್ದಾರ್ ವೈ.ರವಿ ಬಸರಿಹಳ್ಳಿ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪ ತಹಶೀಲ್ದಾರರು, ಹೋಬಳಿ ಮಟ್ಟದ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಸಭೆಯಲ್ಲಿ ಹಾಜರಿದ್ದರು.