ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದರು
ಬೆಂಗಳೂರಿನಲ್ಲಿ ನಡೆದ ಪೈಶಾಚಿಕ ಘಟನೆ
ಬೆಂಗಳೂರು, ಮೇ 24: ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಉದ್ಯೋಗ ಅರಸಿಕೊಂಡು ರಾಜಸ್ಥಾನದ ನಿವಾಸಿ ಕಾಲೂರಾಮ್ ಬಚಾನ್ರಾಮ್ ಕೆಲ ತಿಂಗಳುಗಳ ಹಿಂದೆ ರಾಜಧಾನಿಗೆ ಬಂದಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಮಕ್ಕಳ ಕಳ್ಳರಿದ್ದಾರೆ ಎನ್ನುವ ವದಂತಿ ಕೆಲ ದಿನಗಳಿಂದ ಹರಡುತ್ತಿದೆ. ಕಾಲೂರಾಮ್ ರನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಗುಂಪು ರಂಗನಾಥ ಥಿಯೇಟರ್ ವರೆಗೆ ಅವರನ್ನು ಅಟ್ಟಾಡಿಸಿ ಥಳಿಸಿದೆ. ಇಷ್ಟೇ ಅಲ್ಲದೆ ಗಂಭೀರವಾಗಿ ಗಾಯಗೊಂಡಿದ್ದ ಕಾಲೂರಾಮ್ ರ ಕಾಲಿಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ.
ಹಲ್ಲೆ ದೃಶ್ಯವನ್ನು ಕಂಡ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಕಾಲೂರಾಮ್ ರನ್ನು ಪೊಲೀಸರು ದಾಖಲಿಸಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ.
Next Story