ಹೊನ್ನಾಳ ಸರಕಾರಿ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಶ್ರಮ
ಮಕ್ಕಳ ಸಂಖ್ಯೆ ಹೆಚ್ಚಿಸಲು ಕ್ರಮ: ಎಲ್ಕೆಜಿ ಯುಕೆಜಿ ಆರಂಭ

ಉಡುಪಿ, ಮೇ 24: ಆಂಗ್ಲ ಮಾಧ್ಯಮದ ಪ್ರಭಾವಕ್ಕೆ ಒಳಗಾಗಿ ಎರಡು ವರ್ಷಗಳ ಹಿಂದೆ ಗ್ರಾಮದ ಅನುದಾನಿತ ಶಾಲೆಯೊಂದು ಕಣ್ಣು ಮುಚ್ಚಿರುವುದ ರಿಂದ ಎಚ್ಚೆತ್ತುಕೊಂಡ ಹೊನ್ನಾಳ ಗ್ರಾಮದ ಯುವಕರ ಪಡೆ, ಈಗ ಇರುವ ಒಂದು ಸರಕಾರಿ ಶಾಲೆಯನ್ನು ಉಳಿಸಲು ಶತ ಪ್ರಯತ್ನ ನಡೆಸುತ್ತಿದೆ.
ಶತಮಾನ ಕಂಡ ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಮನಗಂಡು ಶಾಲೆಯ ಹಳೆ ವಿದ್ಯಾರ್ಥಿ ಸಂಘ ಶಾಲೆಯನ್ನು ಉಳಿಸುವ ಮತ್ತು ಗ್ರಾಮದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗೆ ಕೈ ಹಾಕಿದೆ. ಅದಕ್ಕಾಗಿ ಸಂಘವು ದಾನಿಗಳ ನೆರವಿನಿಂದ ಶಾಲೆಗೆ ಅಗತ್ಯ ಇರುವ ಮೂಲ ಭೂತ ಸೌಕರ್ಯ ಒದಗಿಸುತ್ತಿರುವುದಲ್ಲದೆ ಈ ಶೈಕ್ಷಣಿಕ ವರ್ಷದಿಂದ ಎಲ್ಕೆಜಿ ಯುಕೆಜಿಯನ್ನು ಸಹ ಪ್ರಾರಂಭಿಸಿದೆ.
1914ರಲ್ಲಿ ಖಾಸಗಿ ಕಟ್ಟಡದಲ್ಲಿ ಸ್ಥಾಪನೆಗೊಂಡ ಈ ಶಾಲೆ ಆರಂಭದಲ್ಲಿ ಐದನೆ ತರಗತಿವರೆಗೆ, ಮುಂದೆ ಸ್ವಂತ ಕಟ್ಟಡದ ಬಳಿಕ ಏಳನೇ ತರಗತಿವರೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರೇ ಖರೀದಿಸಿದ ಸುಮಾರು 60ಸೆಂಟ್ಸ್ ಜಾಗದಲ್ಲಿ ಸರಕಾರ ಕಟ್ಟಡ ನಿರ್ಮಿಸಿತ್ತು. ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು ನಾಲ್ಕು ಶಿಕ್ಷಕರು ಹಾಗೂ 82 ಮಕ್ಕಳಿದ್ದಾರೆ. ಹಿಂದಿನ ವರ್ಷ 91 ಮಕ್ಕಳು ಕಲಿಯುತ್ತಿದ್ದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದನೆ ತರಗತಿಗೆ ಈವರೆಗೆ ಏಳು ಮಂದಿ ದಾಖಲಾಗಿದ್ದಾರೆ.
ಶಾಲೆಗಾಗಿ ಕ್ರಿಕೆಟ್ ಪಂದ್ಯಾಟ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿರುವ ಹೊನ್ನಾಳ ಗ್ರಾಮದ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಯಾಗುತ್ತಿರುವುದನ್ನು ಗಮನಿಸಿದ ಶಾಲೆಯ ಹಳೆ ವಿದ್ಯಾರ್ಥಿಗಳು ಸಂಘವನ್ನು ಸ್ಥಾಪಿಸಿ ಶಾಲೆಯನ್ನು ಉಳಿಸಲು ಮುಂದಾದರು. ಅದಕ್ಕಾಗಿ ಹೊನ್ನಾಳ, ದುಬೈ, ಸೌದಿ ಅರೇಬಿಯಾ, ಕುವೈಟ್, ಒಮನ್ ಘಟಕ ಗಳನ್ನು ಸ್ಥಾಪಿಸಿದರು.
ಈ ಶಾಲೆಗೆ ಹೊನ್ನಾಳ, ಬೈಕಾಡಿ, ಕುಕ್ಕುಡೆ, ಗಾಂಧಿನಗರಗಳಿಂದ ಎಲ್ಲ ಧರ್ಮಗಳ ವಿದ್ಯಾರ್ಥಿಗಳು ಬರುತ್ತಿದ್ದು, ಇವರಿಗೆ ಶಾಲೆಗೆ ಬರಲು ಅನುಕೂಲ ವಾಗುವಂತೆ ಹಳೆ ವಿದ್ಯಾರ್ಥಿ ಸಂಘ ದುಬೈ ಘಟಕದ ಅಧ್ಯಕ್ಷ ಅಶ್ಫಕ್ ಜೆ. ನೇತೃತ್ವದಲ್ಲಿ ಶಾಲಾ ವಾಹನವನ್ನು ಖರೀದಿಸಿ ಮಕ್ಕಳಿಗೆ ಉಚಿತ ಸಾಗಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.
ದಾನಿಗಳ ನೆರವಿನಿಂದ ರಂಗಮಂದಿರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಗೆ ಒದಗಿಸಲಾಯಿತು. ಮುಂದೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಯನ್ನು ಆರಂಭಿಸಲು ಚಿಂತಿಸಿದ ಸಂಘ ಅದಕ್ಕಾಗಿ ಹಣ ಸಂಗ್ರಹಿಸಲು ಯೋಜನೆ ಹಾಕಿಕೊಂಡಿತು. ಕಳೆದ ವರ್ಷದಿಂದ ಹೊನ್ನಾಳ ಕ್ರಿಕೆಟ್ ಪ್ಲೇಯರ್ಸ್ನ ಸಹಯೋಗದಲ್ಲಿ ಎರಡು ಕ್ರಿಕೆಟ್ ಪಂದ್ಯಾಟ ನಡೆಸಿ ಕ್ರಮವಾಗಿ 2ಲಕ್ಷ ಹಾಗೂ ಒಂದು ಲಕ್ಷ ರೂ. ಸಂಗ್ರಹಿಸಲಾಗಿದೆ.
ಮುಖ್ಯೋಪಾಧ್ಯಾಯರೇ ಇಲ್ಲ: ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ವಿವಿಧ ಘಟಕಗಳಿಂದ ಸದಸ್ಯರು ನೆರವು ನೀಡಿ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಯನ್ನು ಆರಂಭಿಸಿದ್ದು, ಇದೀಗ ಈ ಎರಡು ತರಗತಿಗಳಿಗೆ ದಾಖಲಾತಿ ಆರಂಭಿಸಲಾಗಿದೆ. ಈವರೆಗೆ ಎಲ್ಕೆಜಿಗೆ 22 ಹಾಗೂ ಯುಕೆಜಿಗೆ 10ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಸಂಘದ ವತಿಯಿಂದ ಈ ಎರಡು ತರಗತಿಗೆ ಶಿಕ್ಷಕರನ್ನು ಮತ್ತು ಓರ್ವ ಗುಮಾಸ್ತನನ್ನು ನೇಮಕ ಮಾಡಲಾಗಿದೆ.
ಆದರೆ ಪ್ರಸ್ತುತ ಈ ಶಾಲೆಗೆ ಮುಖ್ಯೋಪಾಧ್ಯಾಯರೇ ಇಲ್ಲ. ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದ ಆಗಿನ ಮುಖ್ಯೋಪಾಧ್ಯಾಯ ಇಮಾಮ್ ಸಾಹೇಬ್ ತೆಂಕಸಾಲಿ ಮೂರು ವರ್ಷಗಳ ಹಿಂದೆ ನಿವೃತ್ತರಾಗಿ ದ್ದಾರೆ. ಅವರ ನಂತರ ಈವರೆಗೆ ಈ ಶಾಲೆಗೆ ಮುಖ್ಯೋಪಾಧ್ಯಾಯರ ನೇಮಕ ಆಗಿಲ್ಲ. ಈಗ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಮೆಹಬೂಬಿ ಪಣಿಬಂದ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಗತ್ಯವಾಗಿ ಈ ಶಾಲೆಗೆ ಮುಖ್ಯೋಪಾಧ್ಯಾಯ ನೇಮಕ ಹಾಗೂ ಸುಸಜ್ಜಿತ ಮೈದಾನ ಆಗಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.
‘ಈ ಗ್ರಾಮದಲ್ಲಿ ಬಡವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರಿಗೆ ಖಾಸಗಿ ಶಿಕ್ಷಣ ಗಗನ ಕುಸುಮವಾಗಿದೆ. ಈ ಮಧ್ಯೆ ಎರಡು ವರ್ಷಗಳ ಹಿಂದೆ ಇದೇ ಗ್ರಾಮದ ಕುಕ್ಕುಡೆಯ ವಿಜಯ ಅನುದಾನಿತ ಶಾಲೆಯು ಮುಚ್ಚುಗಡೆ ಕಂಡಿರುವುದು ನಮ್ಮೆಲ್ಲರ ಆತಂಕಕ್ಕೆ ಕಾರಣವಾಗಿತ್ತು. ಗ್ರಾಮದಲ್ಲಿರುವ ಒಂದು ಸರಕಾರಿ ಶಾಲೆಯನ್ನು ಉಳಿಸಿಕೊಳ್ಳದಿದ್ದರೆ ಗ್ರಾಮದ ಮಕ್ಕಳು ಸರಕಾರಿ ಶಾಲೆಗಾಗಿ 8 ಕಿ.ಮೀ. ದೂರದ ಬ್ರಹ್ಮಾವರಕ್ಕೆ ಹೋಗಬೇಕು. ಈ ಎಲ್ಲ ಕಾರಣಕ್ಕಾಗಿ ಇದ್ದ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ನಾವೆಲ್ಲ ಮಾಡುತ್ತಿದ್ದೇವೆ’ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ಸುಬಾನ್ ಅಹ್ಮದ್ ತಿಳಿಸಿದ್ದಾರೆ.
ಜೂ.16ರಿಂದ ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇರುವ ಶಾಲೆಗಳಿಗೆ ಮುಖ್ಯೋಪಾಧ್ಯಾಯರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದ್ದು, ಆಗ ಈ ಶಾಲೆಯನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ತಿಳಿಸಿದ್ದಾರೆ.
‘ಎಲ್ಕೆಜಿ, ಯುಕೆಜಿಗೆ ನೇಮಕ ಮಾಡಿರುವ ಶಿಕ್ಷಕರ, ಗುಮಾಸ್ತರ ಸಂಬಳ, ಶಾಲಾ ವಾಹನದ ಚಾಲಕರ ಸಂಬಳ, ಡಿಸೇಲ್ ಖರ್ಚು ಸೇರಿದಂತೆ ವರ್ಷಕ್ಕೆ ಆರು ಲಕ್ಷ ರೂ.ವರೆಗೆ ವೆಚ್ಚ ಆಗುತ್ತದೆ. ಅದನ್ನೆಲ್ಲ ಸಂಘವೇ ಭರಿಸುತ್ತದೆ. ಮಕ್ಕಳಿಗೆ ಒಟ್ಟಾರೆ ಶಾಲೆಯ ಉಳಿವು ಮತ್ತು ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರಿಫುಲ್ಲಾ ತಿಳಿಸಿದ್ದಾರೆ.