ಮೂಡುಬಿದಿರೆ: ಮನೆಗೆ ನುಗ್ಗಿ ನಗ-ನಗದು ಕಳವು
ಮೂಡುಬಿದಿರೆ, ಮೇ.24: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ನಗದು ಸಹಿತ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ಮೂಡುಬಿದಿರೆ ಸಮೀಪದ ಪಣಪಿಲ ದೆಂಗನಬೆಟ್ಟು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮೂಲತಃ ಪಣಪಿಲ ದೆಂಗನಬೆಟ್ಟು ನಿವಾಸಿ ಜಯಪೂಜಾರಿ ಎಂಬವರ ಮನೆಯಲ್ಲಿ ಬುಧವಾರ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಮುಗಿದ ಬಳಿಕ ಮನೆ ಮಂದಿ ನಿದ್ರೆಗೆ ಜಾರಿದ್ದರು. ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿ ಕಪಾಟಿನಲ್ಲಿದ್ದ 52 ಸಾವಿರ ರೂಪಾಯಿ ನಗದು ಸಹಿತ ಚಿನ್ನದ ಬಳೆಗಳು, ಹವಳದ ಸರ, ಚಿನ್ನದ ಸರಗಳು, ಉಂಗುರ ಇತ್ಯಾದಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ. ಈ ವೇಳೆ ಮನೆಮಂದಿಗೆ ಎಚ್ಚರವಾಗಿದ್ದು, ಬೊಬ್ಬೆ ಹೊಡೆದಾಗ ಆರೋಪಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ. ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ 6.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ವಿಜಯಪ್ರಸಾದ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.