ವಿಧಾನಪರಿಷತ್ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ 9 ಮತಗಟ್ಟೆ ಕೇಂದ್ರಗಳ ಸ್ಥಾಪನೆ

ಮಂಡ್ಯ, ಮೇ 24: ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ 9 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೂಲ ಮತದಾರರು ಹಾಗೂ ಪರಿಷ್ಕರಣೆ ಸಮಯದಲ್ಲಿ ಸ್ವೀಕೃತವಾದ ಅರ್ಜಿಯಲ್ಲಿನ ಒಟ್ಟು ಮತದಾರರು ಸೇರಿದಂತೆ 4,859 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನವು ಜೂ.8 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಮತ ಎಣಿಕೆ ಜೂ. 12 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದರು.
ಮಂಡ್ಯ ನಗರ ಸೇರಿದಂತೆ ಮಂಡ್ಯ ತಾಲೂಕಿನಲ್ಲಿ 3 ಮತಗಟ್ಟೆ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ತಾಲೂಕುಗಳಲ್ಲಿ ತಲಾ ಒಂದು ಮತಗಟ್ಟೆ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 9 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮಂಜುನಾಥ್, ಬಸವರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಕಂಟ್ರೊಲ್ ರೂಂ ದೂ.ಸಂಖ್ಯೆಗಳ ವಿವರ: ಕೆ.ಆರ್.ಪೇಟೆ: 08230-262989, ನಾಗಮಂಗಲ: 08234-286034, ಪಾಂಡವಪುರ:08236-255128, ಮಂಡ್ಯ:08232-231229, ಮದ್ದೂರು: 08232:232010, ಶ್ರೀರಂಗಪಟ್ಟಣ: 08236-252129 ಹಾಗೂ ಮಳವಳ್ಳಿ: 08231-243999







