ಮೇ 28: ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕ ಉದ್ಘಾಟನೆ
ಉಡುಪಿ, ಮೇ 25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಳ ಕಚೇರಿ ಉಡುಪಿ ಇವರ ವತಿಯಿಂದ ಮೇ 28ರಂದು ಬೆಳಗ್ಗೆ 11 ಗಂಟೆಗೆ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಷ್ಟ್ರೀಯ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ (IDCF) ಕಾರ್ಯಕ್ರಮ ಜಿಲ್ಲೆಯಲ್ಲಿ ಮೇ 28ರಿಂದ ಜೂ.9ರವರೆಗೆ ನಡೆಯಲಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಬೇಧಿಯಿಂದ ಸಂವಿಸುವ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳಿರುವ ಎಲ್ಲಾ ಮನೆಗಳಿಗೆ ಆಶಾ/ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಓಆರ್ಎಸ್ ಪ್ಯಾಕೆಟ್ ವಿತರಣೆ ಮಾಡುವುದು ಮತ್ತು ಅತಿಸಾರ ಬೇಧಿ ಆದಾಗ ಓಆರ್ಎಸ್ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜಿಲ್ಲೆಯ ಮನೆಗಳಿಗೆ ಒಟ್ಟು 78,373 ಓಆರ್ಎಸ್ ವಿತರಣೆಯ ಗುರಿ ಹಾಕಲಾಗಿದ್ದು, ಆರೋಗ್ಯ ಸಂಸ್ಥೆ ಗಳಲ್ಲಿ, ಉಪಕೇಂದ್ರಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಓಆರ್ಎಸ್ ಮತ್ತು ಜಿಂಕ್ ಕಾರ್ನರ್ ರಚಿಸಿ, ಅತಿಸಾರ ಬೇಧಿ ಪ್ರಕರಣಗಳಿಗೆ ಓಆರ್ಎಸ್ ಹಾಗೂ ಜಿಂಕ್ ಚಿಕಿತ್ಸೆ ನೀಡಲಾಗುತ್ತದೆ.
ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿಗೆ ತಾಲೂಕು/ಜಿಲ್ಲಾ ಆಸ್ಪತ್ರೆ ಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. ನವಜಾತ ಮತ್ತು ಎಳೆಯ ಮಕ್ಕಳಿಗೆ 6 ತಿಂಗಳ ಒಳಗೆ ತಾಯಿ ಎದೆ ಹಾಲು ಕೊಡುವ ಬಗ್ಗೆ ಉತ್ತೇಜಿಸುವುದು ಮತ್ತು 6 ತಿಂಗಳ ನಂತರ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವ (IYCF) ಬಗ್ಗೆ ಉತ್ತೇಜಿಸಲಾಗುವುದು. ಈ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ರಾಜ್ ಇಲಾಖೆ, ನಗರಸಭೆಗಳ ಸಂಯುಕ್ತ ಸಹಭಾಗಿತ್ವ ದಲ್ಲಿ ಅನುಷ್ಟಾನಗೊಳಿಸಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.